ವಿಷ್ಣುವರ್ಧನ್ ಓದಿದ ಶಾಲೆ ಉಳಿಸುವಂತೆ ಪ್ರಣೀತಾ ಮನವಿ
Team Udayavani, Mar 31, 2021, 8:30 AM IST
ಬೆಂಗಳೂರು: ಸಾಹಸಸಿಂಹ ವಿಷ್ಣುವರ್ಧನ್ ಓದಿದ್ದ, ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಮಾಡೆಲ್ ಕನ್ನಡ ಹೈಸ್ಕೂಲ್ ಅನ್ನು ವಿದ್ಯಾರ್ಥಿಗಳಿಲ್ಲದ ಕಾರಣ ಆಡಳಿತ ಮಂಡಳಿ ಮುಚ್ಚಲು ನಿರ್ಧರಿಸಿದೆ.
ಸುಮಾರು 150 ವರ್ಷಗಳ ಇತಿಹಾಸ ಹೊಂದಿರುವ ಈ ಶಾಲೆಯಲ್ಲಿ, ಕಳೆದ ಮೂರು ವರ್ಷದಿಂದ ವಿದ್ಯಾರ್ಥಿಗಳ ದಾಖಲಾತಿ ಆಗಿಲ್ಲ. ಹೀಗಾಗಿ ವಿದ್ಯಾರ್ಥಿಗಳ ಕೊರತೆ ಕಾರಣದಿಂದ, ಆಡಳಿತ ಮಂಡಳಿ ಶಾಲೆ ಮುಚ್ಚಲು ಮುಂದಾಗಿದೆ.
ಬೆಂಗಳೂರಿನ ಮೊದಲ ಕನ್ನಡ ಮಾಧ್ಯಮ ಶಾಲೆ ಮತ್ತು ಅತ್ಯಂತ ಪುರಾತನ ಶಾಲೆ ಎಂಬ ಹೆಗ್ಗಳಿಕೆ ಹೊಂದಿರುವ ಈ ಶಾಲೆಯನ್ನು ಮುಚ್ಚುವ ನಿರ್ಧಾರಕ್ಕೆ ನಟಿ ಪ್ರಣಿತಾ ಸುಭಾಷ್ ಬೇಸರ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವಿಟ್ಟರ್ನಲ್ಲಿ ಬರೆದುಕೊಂಡಿರುವ ಪ್ರಣೀತಾ, “ಬೆಂಗಳೂರಿನ ಮೊದಲ ಕನ್ನಡ ಮಾಧ್ಯಮ ಶಾಲೆ, ಹಾಗೆಯೇ ಡಾ. ವಿಷ್ಣುವರ್ಧನ್ ರವರು ಓದಿರುವ ಸಂಸ್ಥೆಯು ಮುಚ್ಚುತ್ತಿರುವುದು ನನಗೆ ಬೇಸರ ತಂದಿದೆ. ಈ ವಿಷಯದ ಬಗ್ಗೆ ರಾಜ್ಯ ಸರ್ಕಾರವು ಗಮನಹರಿಸಬೇಕೆಂದು ದಯಮಾಡಿ ಕೇಳಿಕೊಳ್ಳುತ್ತೇನೆ.
ಪ್ರಣಿತಾ ಫೌಂಡೇಶನ್ ವತಿಯಿಂದ ಸಾಧ್ಯವಾದಷ್ಟು ಸಹಾಯ ಮಾಡಲು ಸಿದ್ಧರಿದ್ದೇವೆ’ ಎಂದಿದ್ದಾರೆ. ಅಲ್ಲದೆ ಈ ಶಾಲೆಯನ್ನು ಉಳಿಸಿಕೊಳ್ಳುವಂತೆ ಪ್ರಣೀತಾ ರಾಜ್ಯ ಸರ್ಕಾರಕ್ಕೆ ಮತ್ತು ಮುಖ್ಯಮಂತ್ರಿಗೆ ಟ್ವಿಟ್ಟರ್ ಮೂಲಕ ಮನವಿ ಮಾಡಿದ್ದಾರೆ.