ನಾನಾಡದ ಮಾತೆಲ್ಲವಾ ಕದ್ದಾಲಿಸು… ಗಣೇಶ್ ಬರ್ತ್ಡೇಗೆ ಗಾಳಿಪಟ-2 ರೊಮ್ಯಾಂಟಿಕ್ ಸಾಂಗ್
Team Udayavani, Jul 1, 2022, 4:01 PM IST
ಯೋಗರಾಜ್ ಭಟ್, ಗಣೇಶ್ ಹಾಗೂ ಜಯಂತ್ ಕಾಯ್ಕಿಣಿ- ಈ ಮೂವರು ಒಟ್ಟಾದರೆ ಒಂದು ಸುಂದರವಾದ ಹಾಡು ಹುಟ್ಟುತ್ತದೆ, ಆ ಹಾಡಿಗೆ ಸೋನು ನಿಗಮ್ ಜೀವ ನೀಡುತ್ತಾರೆ.. ಹಾಡನ್ನು ಪ್ರೇಕ್ಷಕನ ಮಡಿಲಿಗೆ ಹಾಕಿದರೆ, ಆತ ಎದೆಗಪ್ಪಿಕೊಳ್ಳುತ್ತಾನೆ… ಹೀಗೊಂದು ನಂಬಿಕೆ, ವಿಶ್ವಾಸವನ್ನು ಈ ಮೂವರು ತಮ್ಮ ಹಿಂದಿನ ಸಿನಿಮಾಗಳಲ್ಲಿ ಸಾಬೀತು ಮಾಡಿದ್ದಾರೆ. ಈಗ ಅಂಥದ್ದೇ ಮತ್ತೂಂದು ರೊಮ್ಯಾಂಟಿಕ್ ಸಾಂಗ್ ಅನ್ನು ಪ್ರೇಕ್ಷಕನ ಮಡಿಲಿಗೆ ಹಾಕಲು ರೆಡಿಯಾಗಿದ್ದಾರೆ.
ಅದು “ಗಾಳಿಪಟ-2′ ಚಿತ್ರದ ಹಾಡು. ಯೋಗರಾಜ್ ಭಟ್-ಗಣೇಶ್ ಕಾಂಬಿನೇಶನ್ನಲ್ಲಿ ಬರುತ್ತಿರುವ ಈ ಚಿತ್ರ ಆಗಸ್ಟ್ 12ರಂದು ಬಿಡುಗಡೆಯಾಗುತ್ತಿದೆ. ಈಗ ಚಿತ್ರತಂಡ ಚಿತ್ರದ ಮತ್ತೂಂದು ಹಾಡನ್ನು ಬಿಡುಗಡೆ ಮಾಡುತ್ತಿದೆ. ಅದು “ನಾನಾಡದ ಮಾತನ್ನು ಕದ್ದಾಲಿಸು…’
ಈ ಹಾಡು ಬಿಡುಗಡೆ ಮಾಡಲು ಕಾರಣ ನಟ ಗಣೇಶ್ ಅವರ ಬರ್ತ್ಡೇ. ಜುಲೈ 2 ಗಣೇಶ್ ಅವರ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ಚಿತ್ರತಂಡ ರೊಮ್ಯಾಂಟಿಕ್ ಗೀತೆಯನ್ನು ಬಿಡುಗಡೆ ಮಾಡಲಿದೆ. ಮೊದಲ ಹಂತವಾಗಿ ಈ ಹಾಡನ್ನು ಚಿತ್ರತಂಡ ಇತ್ತೀಚೆಗೆ ಮಾಧ್ಯಮ ಮುಂದೆ ಬಿಡುಗಡೆ ಮಾಡಿತು.
ಇದನ್ನೂ ಓದಿ:ಸ್ನೂಕರ್ ಪಟುವಿನ ಸಿನಿ ಕನಸು: ಹೋಪ್ ಮೂಲಕ ಚಿತ್ರರಂಗಕ್ಕೆ ಬಂದ ವರ್ಷಾ ಸಂಜೀವ್
ಹಾಡಿನ ಬಗ್ಗೆ ಮಾತನಾಡುವ ಯೋಗರಾಜ್ ಭಟ್, “ನಮ್ಮ ಚಿತ್ರದ ನಾಯಕ ಗಣೇಶ್ ಅವರ ಹುಟ್ಟುಹಬ್ಬಕ್ಕೆ ಈ ಸುಂದರ ಹಾಡನ್ನು ಉಡುಗೊರೆಯಾಗಿ ನೀಡುತ್ತಿದ್ದೇವೆ. ಈ ಹಾಡನ್ನು ಕುದುರೆಮುಖದಲ್ಲಿ ಚಿತ್ರೀಕರಿಸಲಾಗಿದೆ. ವಿಭಿನ್ನವಾದ ಪ್ರಾಪರ್ಟಿಗಳನ್ನು ಬಳಸಲಾಗಿದೆ. ಕಾಯ್ಕಿಣಿ ಅವರು ಅದ್ಭುತವಾಗಿ ಈ ಹಾಡನ್ನು ರಚಿಸಿದ್ದಾರೆ’ ಎಂದರು ಭಟ್ರಾ. ಜೊತೆಗೆ ಇಡೀ ಹಾಡನ್ನು ಓದುತ್ತಾ, ಪದದ ಅರ್ಥವನ್ನು ತಮ್ಮದೇ ಶೈಲಿಯಲ್ಲಿ ಹೇಳಿ ಪತ್ರಿಕಾಗೋಷ್ಠಿಯ ಜೋಶ್ ಹೆಚ್ಚಿಸಿದರು ಭಟ್.
ನಾಯಕ ಗಣೇಶ್ ಅವರಿಗೆ ಈ ಹಾಡು ದೊಡ್ಡ ಹಿಟ್ ಆಗುವ ವಿಶ್ವಾಸವಿದೆ. “ಈ ಹಾಡನ್ನು ಕೇಳಿ ಮತ್ತೆ ಹದಿನೈದು ವರ್ಷಗಳ ಹಿಂದೆ ಹೋದೆ. ಅದೇ ಕಾಂಬಿನೇಶನ್ನಲ್ಲಿ ಮತ್ತೆ ಇಂಪಾದ ಹಾಡು ಬಂದಿದೆ.ಅಷ್ಟೇ ಜನಪ್ರಿಯವಾಗಲಿದೆ ಎಂಬ ಭರವಸೆಯಿದೆ. ನನ್ನ ಹುಟ್ಟುಹಬ್ಬಕ್ಕೆ ಇದೊಂದು ವಿಶೇಷ ಉಡುಗೊರೆ. ನಿರ್ಮಾಪಕ ರಮೇಶ್ ರೆಡ್ಡಿ ಅವರು ಯಾವುದಕ್ಕೂ ಕೊರತೆ ಇಲ್ಲದೆ ಚಿತ್ರ ನಿರ್ಮಾಣ ಮಾಡಿದ್ದಾರೆ. ಕುದುರೆಮುಖದಲ್ಲಿ ಸುಮಾರು 200 ಜನರ ತಂಡದೊಂದಿಗೆ ಶೂಟಿಂಗ್ ಮಾಡಿದ್ದೇವೆ. ಕಲಾ ನಿರ್ದೇಶಕ ಪಂಡಿತ್ ಅವರಂತೂ ಅದ್ಭುತ ಸೆಟ್ ಹಾಕಿದ್ದಾರೆ. ಯೋಗರಾಜ್ ಬಗ್ಗೆ ಎಷ್ಟು ಹೇಳಿದರು ಕಡಿಮೆ. ನೀರಿನಲ್ಲಿ ಐರನ್ ಬಾಕ್ಸ್ ಇಟ್ಟು ಹೊಗೆ ಬರುವಂತೆ ಮಾಡಿದ್ದಾರೆ’ ಎನ್ನುತ್ತಾ ಸಿನಿಮಾ ಬಗ್ಗೆ ವಿವರಿಸಿದರು.
ನಿರ್ಮಾಪಕ ರಮೇಶ್ ರೆಡ್ಡಿ ಅವರಿಗೆ ಈ ಹಾಡು ತುಂಬಾ ಇಷ್ಟವಾಗಿದೆಯಂತೆ. ಪದೇ ಪದೇ ಈ ಹಾಡನ್ನು ಕೇಳುತ್ತಿರುವುದಾಗಿ ಹೇಳಿದರು. ಛಾಯಾಗ್ರಾಹಕ ಸಂತೋಷ್ ರೈ ಪಾತಾಜೆ, ಈ ಹಾಡಿನಲ್ಲಿ ಗಣೇಶ್ ಅವರನ್ನು ಕ್ಲೋಸಪ್ನಲ್ಲೇ ತೋರಿಸಿರುವುದಾಗಿ ಹೇಳಿದರು.