ಉದಯವಾಣಿ ಜೊತೆ ‘ಸಲಗ’ ಸಂಭ್ರಮ
Team Udayavani, Oct 21, 2021, 11:46 AM IST
ದಸರಾ ಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾದ ದುನಿಯಾ ವಿಜಯ್ ಅಭಿನಯದ ಮತ್ತು ಚೊಚ್ಚಲ ನಿರ್ದೇಶನದ “ಸಲಗ’ ಚಿತ್ರ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. “ಸಲಗ’ ಬಿಡುಗಡೆಯಾದ ಎಲ್ಲ ಕೇಂದ್ರಗಳಲ್ಲೂ, ಪ್ರೇಕ್ಷಕರಿಂದ ಉತ್ತಮ ಪ್ರಕ್ರಿಯೆ ಪಡೆದುಕೊಳ್ಳುತ್ತಿದ್ದು, ಚಿತ್ರ ಎರಡನೇ ವಾರಕ್ಕೆ ಅಡಿಯಿಡುತ್ತಿದೆ. ಇನ್ನು ನಿರೀಕ್ಷೆಗೂ ಮೀರಿ “ಸಲಗ’ ಚಿತ್ರಕ್ಕೆ ಸಿಗುತ್ತಿರುವ ಪ್ರತಿಕ್ರಿಯೆ ಕಂಡು ಚಿತ್ರತಂಡ ಕೂಡ ಫುಲ್ ಖುಷಿಯಾಗಿದೆ.
ಇದೇ ವೇಳೆ ಬುಧವಾರ (ಅ. 20) “ಉದಯವಾಣಿ’ ಕಚೇರಿಗೆ ಆಗಮಿಸಿದ್ದ ನಾಯಕ ಕಂ ನಿರ್ದೇಶಕ ದುನಿಯಾ ವಿಜಯ್, ನಿರ್ಮಾಪಕ ಕೆ.ಪಿ ಶ್ರೀಕಾಂತ್, ನಾಯಕಿ ಸಂಜನಾ ಆನಂದ್, ಸಂಭಾಷಣೆಕಾರ ಮಾಸ್ತಿ ಮಂಜು, ಕಲಾವಿದರಾದ ಶ್ರೇಷ್ಟ, ಶ್ರೀಧರ್ ಸೇರಿದಂತೆ “ಸಲಗ’ ತಂಡದ ಸದಸ್ಯರು ಚಿತ್ರದ ಯಶಸ್ಸಿನ ಸಂಭ್ರಮವನ್ನು ಪತ್ರಿಕೆಯೊಂದಿಗೆ ಆಚರಿಸಿದರು.
ಇದೇ ವೇಳೆ ಮಾತನಾಡಿದ ದುನಿಯಾ ವಿಜಯ್, “ನಮ್ಮ ನಿರೀಕ್ಷೆಗೂ ಮೀರಿ “ಸಲಗ’ ಸಿನಿಮಾಕ್ಕೆ ಓಪನಿಂಗ್ ಸಿಕ್ಕಿದೆ. ಸಿನಿಮಾವನ್ನು ನೋಡಿದ ಪ್ರೇಕ್ಷಕರು ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ಇಂಥ ಸಂದರ್ಭದಲ್ಲಿ “ಉದಯವಾಣಿ’ ಜೊತೆ ನಮ್ಮ ಸಿನಿಮಾದ ಸಕ್ಸಸ್ ಸೆಲೆಬ್ರೆಶನ್ ಮಾಡುತ್ತಿರುವುದಕ್ಕೆ ನಮಗೂ ಖುಷಿಯಾಗುತ್ತಿದೆ’ ಎಂದರು.
ಚಿತ್ರಕ್ಕೆ ಸಿಗುತ್ತಿರುವ ಪ್ರತಿಕ್ರಿಯೆ ಬಗ್ಗೆ ಮಾತನಾಡಿದ ನಿರ್ಮಾಪಕ ಕೆ.ಪಿ ಶ್ರೀಕಾಂತ್, “ರಾಜ್ಯದ ಉದ್ದಗಲಕ್ಕೂ ಸಿನಿಮಾದ ಪ್ರೇಕ್ಷಕರಿಂದ ಒಂದೇ ರೀತಿಯ ಪ್ರತಿಕ್ರಿಯೆ ಸಿಗುತ್ತಿದೆ. “ಗೋಲ್ಡ್ ಕ್ಲಾಸ್’ನಿಂದ ಹಿಡಿದು “ಸಿ ಸೆಂಟರ್’ವರೆಗೆ ಸಿನಿಮಾ ರಿಲೀಸ್ ಆಗಿರುವ ಎಲ್ಲ ಸೆಂಟರ್ಗಳಲ್ಲೂ ಕಲೆಕ್ಷನ್ ಕೂಡ ತುಂಬ ಚೆನ್ನಾಗಿದೆ. ಎಲ್ಲರ ಪರಿಶ್ರಮದಿಂದ ಒಂದೊಳ್ಳೆ ಸಿನಿಮಾ ಮಾಡಿದ್ದೆವು. ನಮ್ಮ ಪ್ರಯತ್ನಕ್ಕೆ ಈಗ ಒಳ್ಳೆಯ ಪ್ರತಿಫಲ ಸಿಗುತ್ತಿದೆ’ ಎಂದರು.
ವಿಡಿಯೋ ನೋಡಿ:ಉದಯವಾಣಿ ಕಚೇರಿಯಲ್ಲಿ ‘ಸಲಗ’ !
ನಾಯಕ ನಟಿ ಸಂಜನಾ ಆನಂದ್, ಸಂಭಾಷಣೆಕಾರ ಮಾಸ್ತಿ “ಸಲಗ’ಕ್ಕೆ ಸಿಗುತ್ತಿರುವ ಖುಷಿಯ ಮಾತುಗಳನ್ನು ಹಂಚಿಕೊಂಡರು.
ಈ ವೇಳೆ ಮಣಿಪಾಲ್ ಮೀಡಿಯಾ ನೆಟ್ವರ್ಕ್ ಲಿಮಿಟೆ ಡ್ನ ಬಿಝಿನೆಸ್ ಡೆವಲಪ್ ಮೆಂಟ್ ವಿಭಾಗದ ಡಿಜಿಎಂ ಯು. ಸತೀಶ್ ಶೆಣೈ, “ಉದಯವಾಣಿ’ ಬೆಂಗಳೂರು ವಿಭಾಗದ ಆ್ಯಕ್ಟಿಂಗ್ ಎಡಿಟರ್ ಬಿ.ಕೆ ಗಣೇಶ್, ಚೀಫ್ ಆಫ್ಬ್ಯೂ ರೋ ನವೀನ್ ಅಮ್ಮೆಂಬಳ, ಸಿನಿಮಾ ವಿಭಾಗ ಮುಖ್ಯಸ್ಥ ರವಿಪ್ರಕಾಶ್ ರೈ ಸೇರಿದಂತೆ ಸಿಬ್ಬಂದಿ ವರ್ಗ ಹಾಜರಿದ್ದರು.