ಶ್ರೇಯಸ್ ಭರ್ಜರಿ ಸಾಹಸ
Team Udayavani, Aug 28, 2018, 12:08 PM IST
ನಿರ್ಮಾಪಕ ಕೆ.ಮಂಜು ಪುತ್ರ ಶ್ರೇಯಸ್ ನಾಯಕರಾಗಿರುವ “ಪಡ್ಡೆಹುಲಿ’ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಸದ್ಯ ದಾವಣಗೆರೆ ಸುತ್ತಮುತ್ತ ಚಿತ್ರೀಕರಣ ನಡೆಯುತ್ತಿದ್ದು, ಸಾಹಸ ದೃಶ್ಯಗಳನ್ನು ಚಿತ್ರೀಕರಿಸಿಕೊಳ್ಳಲಾಗುತ್ತಿದೆ. ನಾಯಕ ಶ್ರೇಯಸ್ ಯಾವುದೇ ಡ್ಯೂಪ್ ಇಲ್ಲದೇ ಸಾಹಸ ದೃಶ್ಯಗಳಲ್ಲಿ ಭಾಗವಹಿಸಿ, ಮೊದಲ ಚಿತ್ರದಲ್ಲೇ ತಮ್ಮ ಆ್ಯಕ್ಷನ್ ಪ್ರೀತಿ ತೋರಿಸಿದ್ದಾರೆ.
ದಾವಣಗೆರೆಯ ಜಿಎಂಐಟಿ ಕಾಲೇಜಿನಲ್ಲಿ ನಡೆದ ಸಿನಿಮಾದ ದೃಶ್ಯವೊಂದಕ್ಕಾಗಿ ಶ್ರೇಯಸ್ ತಮ್ಮ ಮೈಗೆ ಅನೇಕ ಟ್ಯೂಬ್ಲೈಟ್ಗಳಿಂದ ಹೊಡೆಸಿಕೊಂಡಿದ್ದು, ಇದರಿಂದ ಅವರ ಕೈ ಹಾಗೂ ಭುಜಕ್ಕೆ ಗಾಯಗಳಾಗಿವೆ. ದೃಶ್ಯ ನೈಜವಾಗಿ ಮೂಡಿಬರಬೇಕೆಂಬ ಕಾರಣಕ್ಕೆ ಮೊದಲ ಚಿತ್ರದಲ್ಲೇ ಶ್ರೇಯಸ್ ಯಾವುದೇ ಡ್ಯೂಪ್ ಇಲ್ಲದೇ ನಟಿಸಿದ್ದಾರೆ.
“ಪಡ್ಡೆಹುಲಿ’ ಚಿತ್ರವನ್ನು ರಮೇಶ್ ರೆಡ್ಡಿ ಅವರು ನಿರ್ಮಿಸುತ್ತಿದ್ದು, ಗುರು ದೇಶಪಾಂಡೆ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಅವರ ಸಂಗೀತ ಮತ್ತು ಕೆ.ಎಸ್. ಚಂದ್ರಶೇಖರ್ ಅವರ ಛಾಯಾಗ್ರಹಣವಿದೆ. ಚಿತ್ರದಲ್ಲಿ ರವಿಚಂದ್ರನ್ ಕೂಡಾ ನಟಿಸಿದ್ದಾರೆ. ಚಿತ್ರದಲ್ಲಿ ಶ್ರೇಯಶ್ಗೆ ನಾಯಕಿಯಾಗಿ ನಿಶ್ವಿಕಾ ನಾಯ್ಡು ಅಭಿನಯಿಸುತ್ತಿದ್ದಾರೆ.