‘ನನಗೆ ಒಳ್ಳೆಯ ಚಿಕಿತ್ಸೆ ಸಿಕ್ಕಿದ್ದರೆ ಬದುಕುತ್ತಿದ್ದೆ’ ಎಂದಿದ್ದ ನಟ ರಾಹುಲ್ ಸಾವು
Team Udayavani, May 10, 2021, 12:05 PM IST
ನವದೆಹಲಿ : ನನಗೂ ಒಳ್ಳೆಯ ಚಿಕಿತ್ಸೆ ದೊರೆತಿದ್ದರೆ ಬದುಕುಳಿಯುತ್ತಿದ್ದೆ ಎಂದು ಸಾಯುವ ಮುಂಚೆ ಟ್ವೀಟ್ ಮಾಡಿದ್ದ ನಟ ಹಾಗೂ ಯುಟ್ಯೂಬರ್ ರಾಹುಲ್ ವೊಹ್ರಾ ಭಾನುವಾರ ಕೊನೆಯುಸಿರೆಳೆದಿದ್ದಾರೆ.
ಕೋವಿಡ್ ಸೋಂಕಿನಿಂದ ಬಳಲುತ್ತಿದ್ದ ರಾಹುಲ್, ದೆಹಲಿಯ ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸಾವಿಗೂ ಒಂದು ದಿನದ ಮುಂಚೆ ಅಂದರೆ ಮೇ.8 ರಂದು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದ ರಾಹುಲ್, ನನಗೂ ಉತ್ತಮ ಚಿಕಿತ್ಸೆ ಸಿಕ್ಕಿದ್ದಿದ್ದರೆ ನಾನೂ ಬದುಕುಳಿಯಬಹುದಿತ್ತು ಎಂದು ಬರೆದಿದ್ದರು. ಪ್ರಧಾನಿ ನರೇಂದ್ರ ಮೋದಿ ಹಾಗೂ ದೆಹಲಿಯ ಡಿಸಿಎಂ ಮನಿಶ್ ಸಿಸೋಡಿಯಾ ಅವರ ಹೆಸರುಗಳನ್ನು ಉಲ್ಲೇಖಿಸಿ, ‘ಬಹಳ ಬೇಗನೇ ಮತ್ತೆ ಹುಟ್ಟಿ ಬರುತ್ತೇನೆ. ಒಳ್ಳೆ ಕೆಲಸ ಮಾಡುತ್ತೇನೆ’ . ಈಗ ಧೈರ್ಯ ಕಳೆದುಕೊಂಡಿದ್ದೇನೆ ಎಂದು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದರು.
ಬದುಕು ಬಯಕೆ ಹೊಂದಿದ್ದ ರಾಹುಲ್ ಕೊನೆಗೂ ಕೋವಿಡ್ ವಿರುದ್ಧದ ಹೋರಾಟದಲ್ಲಿ ಸೋಲು ಒಪ್ಪಿಕೊಂಡು ಕಣ್ಣು ಮುಚ್ಚಿಕೊಂಡಿದ್ದಾರೆ. ಉದಯೋನ್ಮುಖ ನಟನನ್ನು ಕೋವಿಡ್ ಮಹಾಮಾರಿ ಬಲಿ ಪಡೆದುಕೊಂಡಿದೆ. ಸಾಯುವ ಮುಂಚೆ ರಾಹುಲ್ ಮಾಡಿದ್ದ ಫೇಸ್ ಬುಕ್ ಪೋಸ್ಟ್ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. ರಾಹುಲ್ ಅವರ ಸಾವಿಗೆ ಆಪ್ತರು, ಬಂಧುಗಳು ಕಣ್ಣೀರು ಸುರಿಸುತ್ತಿದ್ದಾರೆ.