ರಾಷ್ಟ್ರ ಪ್ರಶಸ್ತಿ ವಿಜೇತ ಹಿರಿಯ ನಟ ನೆಡುಮುಡಿ ವೇಣು ಇನ್ನಿಲ್ಲ
Team Udayavani, Oct 11, 2021, 3:11 PM IST
ತಿರುವನಂತಪುರಂ : ರಾಷ್ಟ್ರ ಪ್ರಶಸ್ತಿ ವಿಜೇತ ಮಲಯಾಳಂನ ಹಿರಿಯ ನಟ ನೆಡುಮುಡಿ ವೇಣು (73) ಸೋಮವಾರ ನಿಧನರಾದರು.
ಭಾರತೀಯ ಚಿತ್ರರಂಗದ ಅತ್ಯಂತ ಪ್ರತಿಭಾವಂತ ನಟರಲ್ಲಿ ಒಬ್ಬರಾದ ಇವರು 500 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಮೂರು ಬಾರಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಮತ್ತು ಆರು ಬಾರಿ ರಾಜ್ಯ ಚಲನಚಿತ್ರ ಪ್ರಶಸ್ತಿ ಪುರಸ್ಕೃತರಾಗಿರುವ ವೇಣು ಕೂಡ ಚಿತ್ರಕಥೆಗಳನ್ನೂ ಬರೆದಿದ್ದಾರೆ.
ಅರವಿಂದನ್, ಪದ್ಮರಾಜನ್, ಭರತನ್ ಮತ್ತು ಜಾನ್ ಅಬ್ರಹಾಂ ಮೊದಲಾದವರ ಸ್ನೇಹ ಸಂಪಾದಿಸಿದ ವೇಣು 1978 ರಲ್ಲಿ ಅರವಿಂದನ್ ಅವರ ‘ತಂಬಿ’ ಸಿನಿಮಾ ಮೂಲಕ ತಮ್ಮ ಚಲನಚಿತ್ರ ವೃತ್ತಿಜೀವನವನ್ನು ಆರಂಭಿಸಿದರು. ಭರತನ್ ಅವರ ಆರವಂ ಮತ್ತು ತಕರ ಸಿನಿಮಾದಲ್ಲಿ ವೇಣು ಅವರ ನಟನೆ ಗಮನಿಸಲ್ಪಟ್ಟಿತು. ತಿರುವನಂತಪುರಂ ದೂರದರ್ಶನ ಆರಂಭದ ದಿನಗಳಲ್ಲಿ ವೇಣು ಹಲವು ಧಾರಾವಾಹಿಗಳಲ್ಲಿ ನಟಿಸಿದರು. ವೇಣು ನಿರ್ದೇಶಿಸಿದ ಕೈರಳಿವಿಲಾಸಂ ಲಾಡ್ಜ್ ಧಾರಾವಾಹಿಗೆ ಉತ್ತಮ ಪ್ರತಿಕ್ರಿಯೆ ಬಂದಿತ್ತು.
ಚಾಮರಂ, ಒರಿಡತ್ತೊರು ಫೈಲ್ಮ್ಯಾನ್, ಕಳ್ಳ ಪಲಿತ್ರನ್, ವಿಡ ಪರಯುಂ ಮುಂಬೇ, ಯವನಿಕಾ, ಎನಿಕ್ಕು ವಿಷಕುನ್ನು,ಅಚ್ಚುವೇಟ್ಟನ್ಡೆ ವೀಡ್, ಅಪ್ಪುಣ್ಮಿ, ಗುರೂಜಿ ಒರು ವಾಕ್, ಪಂಚವಡಿಪ್ಪಾಲಂ, ಹಿಸ್ ಹೈನೆಸ್ ಅಬ್ದುಲ್ಲಾ, ಭರತಂ, ಸೈರಾ ಮೊದಲಾದ ಸಿನಿಮಾಗಳಲ್ಲಿ ವೇಣು ನಟಿಸಿದ್ದಾರೆ. ಇಂಡಿಯನ್, ಅನ್ಯನ್ ತಮಿಳು ಸಿನಿಮಾಗಳಲ್ಲಿಯೂ ಇವರು ನಟಿಸಿದ್ದಾರೆ. ಕಾಟ್ಟತ್ತೆ ಕಿಳಿಕ್ಕೂಡ್, ಒರು ಕಥ ಒಂದು ನುಣಕ್ಕಥ, ಸವಿದಂ, ತೀರ್ಥಂ ಮತ್ತು ಅಂಬಡ ಞಾನೇ ಮುಂತಾದ ಸಿನಿಮಾಗಳಿಗೆ ಕಥೆ ಬರೆದಿದ್ದು ಪೂರಂ ಚಿತ್ರವನ್ನು ನಿರ್ದೇಶಿಸಿದ್ದಾರೆ.