‘ರಂಜಾನ್’ ಚಿತ್ರ ವಿಮರ್ಶೆ: ಹಸಿವು ಮತ್ತು ಬದುಕಿನ ಗಂಭೀರ ಚಿತ್ರಣ
Team Udayavani, Apr 22, 2023, 3:28 PM IST
ತನ್ನದೇ ಆದ ಪುಟ್ಟ ಜಗತ್ತಿನಲ್ಲಿ ಬದುಕು ಕಟ್ಟಿಕೊಳ್ಳಲು ಹೋರಾಡುತ್ತಿರುವ ಬಡ ಮುಸ್ಲಿಂ ರೈತ ರಂಜಾನ್. ಬಡತನ, ಹಸಿವು, ಅಸಹಾಯಕತೆ ಎಲ್ಲದರ ನಡುವೆಯೂ ಪ್ರಮಾಣಿಕವಾಗಿ ಬದುಕಬೇಕೆಂಬ ಉತ್ಕಟ ಬಯಕೆ ಆತನದ್ದು. ಆದರೆ ರಂಜಾನ್ ಬದುಕಿಗೆ ಆಸರೆಯಾಗಿದ್ದ ತುಂಡು ಭೂಮಿ ಯನ್ನು ಕಬಳಿಸಲು ಸರ್ಕಾರ ಮುಂದಾಗುತ್ತದೆ. ಇದರಿಂದಾಗಿ ರಂಜಾನ್ ಬದುಕು ಹೇಗೆಲ್ಲ ಬದಲಾಗುತ್ತದೆ, ತನ್ನ ಭೂಮಿ ಕಬಳಿಸಲು ಹೊರಟ ಸರ್ಕಾರದ ವಿರುದ್ದ ಹೇಗೆ ಹೋರಾಡುತ್ತಾನೆ ಎಂಬುದೇ ಈ ವಾರ ತೆರೆಕಂಡಿರುವ “ರಂಜಾನ್’ ಸಿನಿಮಾದ ಕಥಾಹಂದರ.
“ರಂಜಾನ್’ ಸಿನಿಮಾದಲ್ಲಿ ನಟ ಸಂಗಮೇಶ್ ಉಪಾಸೆ ರಂಜಾನ್ ಎಂಬ ಹೆಸರಿನ ಬಡ ಮುಸ್ಲಿಂ ರೈತನಾಗಿ ಕಾಣಿಸಿಕೊಂಡಿ ದ್ದಾರೆ. ಸುಮಾರು 30ಕ್ಕೂ ಹೆಚ್ಚು ಸಿನಿಮಾ ಗಳಲ್ಲಿ ಮತ್ತು ಕಿರುತೆರೆಯ ಧಾರಾವಾಹಿ ಗಳಲ್ಲಿ ಹಾಸ್ಯನಟನಾಗಿ ರಂಜಿಸಿದ್ದ ಸಂಗಮೇಶ್ ಮೊದಲ ಬಾರಿಗೆ “ರಂಜಾನ್’ ಸಿನಿಮಾದಲ್ಲಿ ತುಂಬ ಗಂಭೀರ ಪಾತ್ರಕ್ಕೆ ಜೀವ ತುಂಬಿದ್ದಾರೆ. ತಮ್ಮ ಅಭಿನಯದ ಮೂಲಕ ಸಂಗಮೇಶ್ ಪ್ರೇಕ್ಷಕರ ಮನಮುಟ್ಟುವಲ್ಲೂ ಯಶಸ್ವಿಯಾಗಿದ್ದಾರೆ.
ಉಳಿದಂತೆ ಪ್ರೇಮಾವತಿ ಉಪಾಸೆ, ಬೇಬಿ ಈಶಾನಿ ಉಪಾಸೆ, ಮಾ. ವೇದಿಕ್, ಭಾಸ್ಕರ್, ಮಾ. ನೀಲ…, ಜಯಲಕ್ಷ್ಮೀ ಮಧುರಾಜ್, ಮಂಜುನಾಥ್ ಕರುವಿನಕಟ್ಟೆ, ಆರ್ಯನ್, ಆದ್ಯತಾ ಭಟ್ ಮೊದಲಾದ ಬಹುತೇಕ ಕಲಾವಿದರು ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.
“ಫಕೀರ್ ಮಹಮ್ಮದ್ ಕಟ್ಪಾಡಿ ಅವರ “ನೋಂಬು’ ಕಥೆ ಆಧಾರಿಸಿದ “ರಂಜಾನ್’ ಸಿನಿಮಾಕ್ಕೆ ಪಂಚಾಕ್ಷರಿ ಸಿ. ನಿರ್ದೇಶನವಿದ್ದು, ದಕ್ಷಿಣ ಕನ್ನಡ ಸೊಗಡಿನಲ್ಲಿ ಇಡೀ ಸಿನಿಮಾವನ್ನು ಕಟ್ಟಿಕೊಡಲಾಗಿದೆ. ಸಿನಿಮಾದಲ್ಲಿ ಒಂದಷ್ಟು ಗಂಭೀರ ವಿಷಯಗಳಿರಬೇಕು ಎಂದು ಬಯಸುವ ಪ್ರೇಕ್ಷಕರು ಒಮ್ಮೆ “ರಂಜಾನ್’ ನೋಡಿ ಬರಬಹುದು.