ಶಾಲೆಗೆ ಹೋಗಲು ಕಾರಣಗಳು ಒಂದಲ್ಲಾ ಎರಡಲ್ಲಾ…
Team Udayavani, Aug 25, 2018, 11:33 AM IST
ಐಸಿಯುನಲ್ಲಿ ಜನ ಇಲ್ಲ ಅಂದ್ರೆ ಆಸ್ಪತ್ರೆ ಮುಚ್ಚೋದಿಲ್ಲ. ಮಂತ್ರಿಗಳು ಸದನಕ್ಕೆ ಬರಲಿಲ್ಲ ಅಂದ್ರೆ ವಿಧಾನ ಸೌಧ ಮುಚ್ಚೋದಿಲ್ಲ. ಕನ್ನಡದಲ್ಲಿ ಕಲಿಯಬೇಕು ಎಂದು ಒಬ್ಬ ವಿದ್ಯಾರ್ಥಿ ಆಸೆಪಟ್ಟರೂ, ಅವನಿಗೆ ಶಿಕ್ಷಣ ಕೊಡುವುದು ಸರ್ಕಾರದ ಜವಾಬ್ದಾರಿ … ಹೀಗೆ ತಮ್ಮ ವಾದ ಮಂಡಿಸಿ ಮಾತು ಮುಗಿಸುತ್ತಾರೆ ಅನಂತ ಪದ್ಮನಾಭ. ಆ ನಂತರ ಏನಾಗುತ್ತದೆ? ತೀರ್ಪು ಯಾರ ಪರವಾಗಿ ಬರುತ್ತದೆ? ಕಾಸರಗೋಡಿನ ಕನ್ನಡ ಮಕ್ಕಳಿಗೆ ಕನ್ನಡ ಶಾಲೆಯಲ್ಲಿ ಕಲಿಯುವುದಕ್ಕೆ ಸಾಧ್ಯವಾಗುತ್ತದಾ? ಎಂಬ ಹಲವು ಪ್ರಶ್ನೆಗಳೇನಾದರೂ ಇದ್ದರೆ, ಅದನ್ನೆಲ್ಲಾ ತಲೆಯಿಂದ ತೆಗೆದುಹಾಕಿ.
ಇಲ್ಲಿ ನಿರ್ದೇಶಕ ರಿಷಭ್ ಶೆಟ್ಟಿ ಬಹಳ ಕ್ಲಿಯರ್ ಆಗಿದ್ದಾರೆ. ಪ್ರೇಕ್ಷಕರು ಸಂತೋಷದಿಂದ ಚಿತ್ರ ನೋಡಬೇಕು ಮತ್ತು ಸಂತೋಷದಿಂದಲೇ ಹೊರ ಹೋಗಬೇಕು ಎಂಬುದು ಅವರ ಉದ್ದೇಶ. ಹಾಗಾಗಿ ಚಿತ್ರದುದ್ದಕ್ಕೂ ಪ್ರೇಕ್ಷಕರು ಸಂತೋಷವಾಗಿರುವಂತೆ ನೋಡಿಕೊಳ್ಳುತ್ತಾರೆ ಮತ್ತು ಪ್ರೇಕ್ಷಕರನ್ನು ಸಂತೋಷದಿಂದಲೇ ಮನೆಗೆ ಕಳಿಸಿಕೊಡುತ್ತಾರೆ ರಿಷಭ್. “ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ’ಯದ್ದು ಬಹಳ ಸರಳವಾದ ಕಥೆ. ಚಿತ್ರದ ಟ್ರೇಲರ್ ಒಮ್ಮೆ ನೋಡಿಬಿಟ್ಟರೆ, ಕಥೆ ಏನು ಎಂದು ಗೊತ್ತಾಗಿಬಿಡುತ್ತದೆ.
ಇನ್ನು ಟ್ರೇಲರ್ ನೋಡದಿದ್ದವರಿಗೂ ಎರಡ್ಮೂರು ಸಾಲುಗಳಲ್ಲಿ ಸುಲಭವಾಗಿ ಕಥೆ ಹೇಳಿಬಿಡಬಹುದು. ಕಾಸರಗೋಡಿನಲ್ಲೊಂದು ಕನ್ನಡ ಶಾಲೆ. ಅದೊಂದು ದಿನ ಕನ್ನಡ ಶಾಲೆಯನ್ನು ಮುಚ್ಚಬೇಕು ಎಂದು ಶಿಕ್ಷಣ ಅಧಿಕಾರಿಯೊಬ್ಬ ತೀರ್ಮಾನ ತೆಗೆದುಕೊಳ್ಳುತ್ತಾನೆ. ಇದರಿಂದ ಬೇಸರಗೊಳ್ಳುವ ವಿದ್ಯಾರ್ಥಿಗಳು, ಆ ಶಾಲೆ ಪುನಃ ಶುರು ಮಾಡುವುದಕ್ಕೆ ಹೋರಾಟ ನಡೆಸುತ್ತಾರೆ. ಆ ಹೋರಾಟದಲ್ಲಿ ಏನೇನೆಲ್ಲಾ ಆಗುತ್ತದೆ ಎಂಬುದು ಗೊತ್ತಾಗಬೇಕಿದ್ದರೆ ಚಿತ್ರ ನೋಡಬಹುದು. ಕಲಾತ್ಮಕ ಅಥವಾ ಮಕ್ಕಳ ಚಿತ್ರವೊಂದಕ್ಕೆ ಹೇಳಿ ಮಾಡಿಸಿದ ಗಂಭೀರ ಕಥೆಯೊಂದು ಇಲ್ಲಿದೆ.
ಆದರೆ, ರಿಷಭ್ಗೆ ತಮ್ಮ ಚಿತ್ರ ಎಲ್ಲಾ ವರ್ಗದವರಿಗೂ ತಲುಪಿಸಬೇಕೆಂಬ ಆಸೆ. ಅದಕ್ಕಾಗಿಯೇ ಇದೇ ಕಥೆಯನ್ನು ಬೇರೆಯದೇ ರೂಟಿನಲ್ಲಿ ತೆಗೆದುಕೊಂಡು ಹೋಗುತ್ತಾರೆ. ಒಂದು ಕಮರ್ಷಿಯಲ್ ಚಿತ್ರ ಹೇಗಿರುತ್ತದೋ, ಅದೇ ನಿಟ್ಟಿನಲ್ಲಿ ಈ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ. ಯಾವುದೇ ಒಂದು ವರ್ಗಕ್ಕೆ ಅಂತ ಈ ಚಿತ್ರವನ್ನು ಸೀಮಿತಗೊಳಿಸದೆ, ಮನೆಮಂದಿಯೆಲ್ಲಾ ಕೂತು ನೋಡುವಂತಹ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ. ಇಲ್ಲಿ ಬರೀ ಸಮಸ್ಯೆ, ನೋವು, ಪರಿಹಾರ ಅಷ್ಟೇ ಅಲ್ಲ. ಅದೆಲ್ಲವನ್ನು ಮರೆಮಾಚುವ ನಗುವಿದೆ, ಮರೆಸುವ ಜನಜೀವನವಿದೆ,
ಖುಷಿಯಾಗಿಸುವ ಹಲವು ವಿಭಿನ್ನ ಪಾತ್ರಗಳಿವೆ. ಒಟ್ಟಾರೆ ಅದೊಂದು ಅದ್ಭುತ ಪರಿಸರವನ್ನು ಕಟ್ಟಿಕೊಟ್ಟಿದ್ದಾರೆ ರಿಷಭ್. ಇಲ್ಲಿನ ಭಾಷೆ ಕೇಳುವುದಕ್ಕೆ ಅದೆಷ್ಟು ಖುಷಿ ಕೊಡುತ್ತದೋ, ಪರಿಸರ ನೋಡುವುದಕ್ಕೂ ಅಷ್ಟೇ ಖುಷಿ ಕೊಡುತ್ತದೆ. ಇದೆಲ್ಲದರ ಮಧ್ಯೆ ಒಂದಕ್ಕಿಂತ ಒಂದು ವಿಭಿನ್ನ ಪಾತ್ರಗಳು. ಪೀಕಾಕ್ ಅನಂತ ಪದ್ಮನಾಭ, ದಡ್ಡ ಪ್ರವೀಣ, ಭುಜಂಗಣ್ಣ, ಮಮ್ಮೂಟ್ಟಿ, ಉಪಾಧ್ಯಾಯ … ಹೀಗೆ ತರಹೇವಾರಿ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತಾರೆ ರಿಷಭ್. ಒಂದೊಳ್ಳೆಯ ಪ್ರಯಾಣದಲ್ಲಿ ಒಂದೆರೆಡು ಹಂಪುಗಳೂ ಇವೆ. ಪ್ರಮುಖವಾಗಿ ಚಿತ್ರದ ನಿಜವಾದ ಕಥೆ ಶುರುವಾಗುವುದು ದ್ವಿತೀಯಾರ್ಧದಲ್ಲಿ.
ಮೊದಲಾರ್ಧವೆಲ್ಲಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳ ಜೀವನ ಮತ್ತು ಕನಸಿನ ಸುತ್ತಲೇ ಚಿತ್ರ ಸುತ್ತತ್ತದೆ. ಮಧ್ಯಂತರದ ಹೊತ್ತಿಗೆ ಶಾಲೆಯನ್ನು ಮುಚ್ಚುವ ಸುತ್ತೋಲೆ ಬರುವುದರಿಂದ ಚಿತ್ರ ಟೇಕಾಫ್ ಆಗುತ್ತದೆ. ಹಾಗಾಗಿ ಅಲ್ಲಿಯವರೆಗೂ ಪ್ರೇಕ್ಷಕ ಕಾಯಬೇಕು. ಚಿತ್ರದ ಮೊದಲಾರ್ಧವನ್ನು ನಗಿಸುತ್ತಾ, ರಂಜಿಸುತ್ತಾ, ವೇಗವಾಗಿ ಮುಗಿಸುತ್ತಾರೆ ರಿಷಭ್. ದ್ವಿತೀಯಾರ್ಧದಲ್ಲೂ ಅದು ಮುಂದುವರೆದಿದೆಯಾದರೂ, ಈ ಹಂತ ಸ್ವಲ್ಪ ನಿಧಾನ. ಆ ನಿಟ್ಟಿನಲ್ಲಿ ರಿಷಭ್ ಚಿತ್ರವನ್ನು ಇನ್ನಷ್ಟು ಬಿಗಿ ಮಾಡಬಹುದಿತ್ತು. ಬೇಡದ್ದನ್ನು ಸ್ವಲ್ಪ ಕತ್ತರಿಸಬಹುದಿತ್ತು.
ಇನ್ನು ಚಿತ್ರದಲ್ಲಿ ಮಾತು ಸ್ವಲ್ಪ ಜಾಸ್ತಿಯಾಯಿತು ಎನ್ನುವಷ್ಟರ ಮಟ್ಟಿಗೆ ಮಾತಿದೆ. ಈ ತರಹದ ಒಂದೆರೆಡು ಹಂಪುಗಳನ್ನು ಬಿಟ್ಟರೆ, ಮಿಕ್ಕಂತೆ ಪ್ರಯಾಣ ಖುಷಿ ಕೊಡುತ್ತದೆ. ಹಾಗೆ ಸುಖಕರವಾಗಿರುವುದಕ್ಕೆ ಹಲವರ ಕೊಡುಗೆ ಇದೆ. ರಿಷಭ್ ಚಿತ್ರಕಥೆ, ರಾಜ್ ಬಿ ಶೆಟ್ಟಿ ಮತ್ತು ಅಭಿಜಿತ್ ಮಹೇಶ್ ಸಂಭಾಷಣೆ, ವೆಂಕಟೇಶ್ ಅಂಗುರಾಜ್ ಅವರ ಛಾಯಾಗ್ರಹಣ, ವಾಸುಕಿ ಹಾಡುಗಳು, ರಿಥ್ವಿಕ್ ಮತ್ತು ಪ್ರತೀಕ್ ಶೆಟ್ಟಿ ಸಂಕಲನ, ಕಲ್ಯಾಣ್ ಅವರ ಸಾಹಿತ್ಯಸ ಎಲ್ಲವೂ ಚಿತ್ರವನ್ನು ಇನ್ನಷ್ಟು ಮಜಬೂತಾಗಿದೆ.
ಇನ್ನು ಕಲಾವಿದರ ಕೊಡುಗೆಯನ್ನು ಮರೆಯುವುದಕ್ಕೆ ಸಾಧ್ಯವೇ ಇಲ್ಲ. ಪಾತ್ರಕ್ಕೆ ತಕ್ಕ ಕಲಾವಿದರನ್ನು ಆಯ್ಕೆ ಮಾಡಿರುವುದೇ ಮೊದಲ ಹೆಗ್ಗಳಿಕೆ. ಆ ನಂತರ ಎಲ್ಲರೂ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಅನಂತ್ ನಾಗ್ ತಡವಾಗಿ ಬಂದರೂ, ಎಲ್ಲರಿಗೂ ಇಷ್ಟವಾಗುತ್ತಾರೆ. ಅದರಲ್ಲೂ ಕೊನೆಯಲ್ಲಿ 14 ನಿಮಿಷಗಳ ಒನ್ ಟೇಕ್ ದೃಶ್ಯದಲ್ಲಿ ಅವರ ಅಭಿನಯವನ್ನು ಮೆಚ್ಚದಿರುವುದಕ್ಕೆ ಸಾಧ್ಯವೇ ಇಲ್ಲ.
ಇನ್ನು ಅನಂತ್ ನಾಗ್ ಅವರನ್ನು ಬಿಟ್ಟರೆ ಭುಜಂಗಣ್ಣನ ಪಾತ್ರ ಮಾಡಿರುವ ಪ್ರಕಾಶ್ ತುಮಿನಾಡು ಮತ್ತು ಉಪಾಧ್ಯಾಯರ ಪಾತ್ರ ಮಾಡಿರುವ ಪ್ರಮೋದ್ ಶೆಟ್ಟಿ ತಮ್ಮ ಅಭಿನಯದಿಂದ ಚಿತ್ರ ಮುಗಿದರೂ ನೆನಪಿನಲ್ಲುಳಿಯುತ್ತಾರೆ. ಚಿತ್ರದಲ್ಲಿ ಹಲವು ಮಕ್ಕಳು ನಟಿಸಿದ್ದು, ಅವರೆಲ್ಲಾ ತಮ್ಮ ಪಾತ್ರಗಳನ್ನು ಬಹಳ ಚೆನ್ನಾಗಿ ನಿರ್ವಹಿಸಿದ್ದಾರೆ. ಮಕ್ಕಳ ಚಿತ್ರ ಎಂದರೆ ಬರೀ ಸಮಸ್ಯೆ, ಗೋಳು, ಹೋರಾಟ ಎಂಬಂತಾಗಿರುವ ಕಾಲದಲ್ಲಿ ರಿಷಭ್ ಒಂದು ಪಕ್ಕಾ ಮನರಂಜನೆಯ ಚಿತ್ರವನ್ನು ನೀಡಿದ್ದಾರೆ. ಈ ಶಾಲೆಗೆ ಹಾಜರಿ ಹಾಕಲಡ್ಡಿಯಿಲ್ಲ.
ಚಿತ್ರ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು
ನಿರ್ದೇಶನ: ರಿಷಭ್ ಶೆಟ್ಟಿ
ನಿರ್ಮಾಣ: ರಿಷಭ್ ಶೆಟ್ಟಿ
ತಾರಾಗಣ: ಅನಂತ್ ನಾಗ್, ಪ್ರಮೋದ್ ಶೆಟ್ಟಿ, ಪ್ರಕಾಶ್ ತುಮಿನಾಡು, ರಂಜನ್, ರಮೇಶ್ ಭಟ್ ಮುಂತಾದವರು
* ಚೇತನ್ ನಾಡಿಗೇರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮನೆ ರತ್ನಾಕರ್
BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ
Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!
Bidar; ಬಿರುಗಾಳಿ ಸಹಿತ ಭಾರಿ ಮಳೆ :ಸಿಡಿಲು ಬಡಿದು ರೈತ ಸಾವು
Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್