ಅಮೀನಗಡ: ಪ್ರಾಮಾಣಿಕತೆ ಮೆರೆದ ಐದನೇ ತರಗತಿ ಬಾಲಕಿ!
ನಾವು ಕಳೆದುಕೊಂಡ ಬಂಗಾರ ಮತ್ತೆ ನಮ್ಮ ಕೈ ಸೇರಿತು.
Team Udayavani, Mar 3, 2023, 11:35 AM IST
ಅಮೀನಗಡ: ಶಾಲಾ ಮೈದಾನದಲ್ಲಿ ಕಳೆದುಕೊಂಡಿದ್ದ 2 ಗ್ರಾಂ ಚಿನ್ನದ ಕಿವಿಯೋಲೆಯನ್ನು ಐದನೇ ತರಗತಿ ಬಾಲಕಿ ಚಿನ್ನ ಕಳೆದುಕೊಂಡವರಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾಳೆ.
ಹೊನ್ನರಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಾಲಕಿ ಅಮೃತಾ ಕೊಣ್ಣೂರ ಶಾಲಾ ಮೈದಾನದಲ್ಲಿ ಆಟವಾಡುತ್ತಿದ್ದಾಗ ಬಂಗಾರದ ಕಿವಿಯೋಲೆ ಸಿಕ್ಕಿತ್ತು. ಅದನ್ನು ತಂದು ಶಾಲಾ ಶಿಕ್ಷಕರಿಗೆ ನೀಡಿದ್ದಾಳೆ.
ಕೆಲವು ದಿನಗಳ ನಂತರ ಭಾಗ್ಯಶ್ರೀ ಸೂಳೇಭಾವಿ ಎಂಬ ಮಗುವಿನ ಪೋಷಕರು ಶಾಲೆಗೆ ಬಂದು ತಮ್ಮ ಮಗುವಿನ ಕಿವಿಯೋಲೆ ಕಳೆದಿದೆ ಎಂಬ ವಿಷಯವನ್ನು ಶಿಕ್ಷಕರ ಗಮನಕ್ಕೆ ತಂದರು. ಆಗ ನಿಜವಾದ ಫಲಾನುಭವಿಯ ಹುಡುಕಾಟದಲ್ಲಿ ಕಾರ್ಯಪ್ರವೃತ್ತರಾಗಿದ್ದ ಶಿಕ್ಷಕರು ಇನ್ನೊಂದು ಕಿವಿಯೋಲೆ ತಂದು ತೋರಿಸಿ ಎಂದು ತಿಳಿಸಿದರು. ಪೋಷಕರು ತಂದ ಕಿವಿಯೋಲೆಯನ್ನು ಶಿಕ್ಷಕರು ಕೂಲಂಕುಷವಾಗಿ ಪರಿಶೀಲಿಸಿದ ನಂತರ ಎರಡು ಕಿವಿಯೋಲೆ ಒಂದೆ ಜೋಡಿ ಎಂದು
ಖಚಿತಪಡಿಸಿಕೊಂಡು ನಂತರ ಅದನ್ನು ಸ್ವತಃ ವಿದ್ಯಾರ್ಥಿನಿ ಅಮೃತಾ ಕೊಣ್ಣೂರ ಕೈಯಿಂದಲೇ ಕಳೆದುಕೊಂಡ ಕುಟುಂಬಕ್ಕೆ ಮರಳಿಸಿದರು.
ಈ ವೇಳೆ ಬಂಗಾರದ ಕಿವಿಯೋಲೆ ಮರಳಿ ಪಡೆದ ಮಗುವಿನ ತಾಯಿ ರೇಣವ್ವ ಸೂಳೇಭಾವಿ ಮಾತನಾಡಿ, ಅಮೃತಾಳ ಪ್ರಾಮಾಣಿಕತೆಯಿಂದ ನಾವು ಕಳೆದುಕೊಂಡ ಬಂಗಾರ ಮತ್ತೆ ನಮ್ಮ ಕೈ ಸೇರಿತು. ಇಂತಹ ಮಕ್ಕಳ ಸಂಖ್ಯೆ ಹೆಚ್ಚಾಗಲಿ ಎಂದು ಪ್ರಾಮಾಣಿಕತೆ ಮೆರೆದ ಬಾಲಕಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಸ್ಥಳದಲ್ಲಿ ಶಿಕ್ಷಕರಾದ ಎಸ್.ಎಸ್. ಲಾಯದಗುಂದಿ, ಸುಭಾಸ ಹಣಗಿ, ಅಶೋಕ ಬಳ್ಳಾ ಸೇರಿದಂತೆ ಇನ್ನಿತರರು ಇದ್ದರು.