
ದೇಶಾಭಿಮಾನದಿಂದ ಬದಕನ್ನು ಕಟ್ಟಿಕೊಳ್ಳಬೇಕು: ಡಾ. ಮಹಾಂತೇಶ ಎಸ್. ಕಡಪಟ್ಟಿ
Team Udayavani, Aug 14, 2022, 12:53 PM IST

ಹುನಗುಂದ: 75 ವರ್ಷಗಳಲ್ಲಿ ಭಾರತೀಯರು ಸಾಧಿಸಿದ್ದೇನು? ಸಾಧಿಸಬೇಕಾಗಿರುವುದು ಏನಿದೆ? ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಹುತಾತ್ಮರಾದ ರಾಷ್ಟ್ರ ನಾಯಕರ ತ್ಯಾಗ ಬಲಿದಾನಗಳನ್ನು ಸದಾ ಸ್ಮರಿಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯವಾಗಿರಬೇಕು ಎಂದು ಡಾ. ಮಹಾಂತೇಶ ಎಸ್. ಕಡಪಟ್ಟಿ ಹೇಳಿದರು.
ವಿ.ಎಂ.ಕೆ.ಎಸ್.ಆರ್.ವಸ್ತ್ರದ ಕಲಾ, ವಿಜ್ಞಾನ ಹಾಗೂ ವಿ.ಎಸ್. ಬೆಳ್ಳಿಹಾಳ ವಾಣಿಜ್ಯ ಮಹಾವಿದ್ಯಾಲಯದ ಎನ್.ಸಿ.ಸಿ., ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಘಟಕಗಳ ಸಹಯೋಗದಲ್ಲಿ ಆಜಾದಿ ಕಾ ಅಮೃತ ಮಹೋತ್ಸವದ ಪ್ರಯುಕ್ತ ಆಯೋಜಿಸಿದ ಮಾಜಿ ಸೈನಿಕರ ಸನ್ಮಾನ, ಹರ್ ಘರ್ ತಿರಂಗಾ ಅಭಿಯಾನ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರತಿಯೊಬ್ಬರೂ ದೇಶಾಭಿಮಾನದಿಂದ ಬದುಕನ್ನು ಕಟ್ಟಿಕೊಳ್ಳುವ ಗುಣವನ್ನು ಬೆಳೆಸಿಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ಮಾಜಿ ಯೋಧರಾದ ಬಾಲಪ್ಪ ಕಿರಸೂರ, ಮಲ್ಲಪ್ಪ ಉಮಚಗಿ, ಪ್ರಶಾಂತ ಬನ್ನಟ್ಟಿ, ಸಂಗಪ್ಪ ಹಡಪದ, ವಿಜಯ ದಳವಾಯಿ, ಬಸನಗೌಡ ಮಾಲಿಪಾಟೀಲ, ಶ್ರೀಶೈಲ ಇದ್ದಲಗಿ, ವಿಜಯಕುಮಾರ ರೇವಣಕಿಮಠ, ಸಂಗನಬಸಪ್ಪ ಹುಲ್ಯಾಳ, ಶಿವುಕುಮಾರ ತೆಗ್ಗಿನಮನಿ ಅವರನ್ನ ಸನ್ಮಾನಿಸಿ ಅವರ ಸೇನಾ ಸೇವಾ ದಿನದ ಕಾರ್ಯಚಟುವಟಿಕೆಗಳನ್ನು ಸ್ಮರಿಸಲಾಯಿತು.
ಯಾವ ದೇಶದ ಯುವಕರು ಸದೃಢರಾಗಿರುತ್ತಾರೆಯೋ ಅಂತಹ ದೇಶ ಸದೃಢವಾಗಿರುತ್ತದೆ. ಯುವಕರು ಸದಾ ಕಾಲ ಆರೋಗ್ಯದಿಂದ ಇರಬೇಕಾದರೆ ನಡಿಗೆ, ಓಟ, ಯೋಗದಂತಹ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು ಎಂದು ಹೇಳಿದರು.
ದೇಹ ಸದೃಢವಾಗದಿದ್ದರೆ ಎಲ್ಲವನ್ನೂ ಕಳೆದುಕೊಂಡಂತೆ ಎಂದು ಲೆಪ್ಟಿನೆಂಟ್ ಎಸ್.ಬಿ.ಚಳಗೇರಿ ಹೇಳಿದರು.
ವೇದಿಕೆಯಲ್ಲಿ ವಿ.ಮ.ವಿ.ವ ಸಂಘದ ನಿರ್ದೇಶಕ ಮಹಾಂತೇಶ ಕತ್ತಿ, ವೀರಣ್ಣ ಬಳೂಟಗಿ, ಎಂ.ಎಸ್. ಮಠ ಮತ್ತು ವಿಜಯ ಮಹಾಂತೇಶ, ಉಚಿತ ಪ್ರಸಾದ ನಿಲಯದ ಕಾರ್ಯಾಧ್ಯಕ್ಷ ಸಂಗಣ್ಣ ಚಿನಿವಾಲರ, ಪ್ರಾಚಾರ್ಯ ಪ್ರೊ. ಎಸ್. ಕೆ. ಮಠ, ಪದವಿ ಪೂರ್ವ ಪ್ರಾಚಾರ್ಯ ಎಚ್. ಎಸ್. ಬೋಳಿ ಶೆಟ್ಟರ್ ಮಹಾವಿದ್ಯಾಲಯದ ಬೋಧಕ ಮತ್ತು ಬೋಧಕ ಸಿಬ್ಬಂದಿಯವರು ಉಪಸ್ಥಿತರಿದ್ದರು.
ಸವಿತಾ ಟಿ. ಪ್ರಾರ್ಥಿಸಿದರು. ತಿಪ್ಪೇಸ್ವಾಮಿ ಡಿ.ಎಸ್. ವಂದಿಸಿದರು. ಡಾ.ಎಸ್.ಆರ್.ನಾಗಣ್ಣವರ ನಿರೂಪಿಸಿದರು.
ಮಾಜಿ ಯೋಧರೊಂದಿಗೆ ಎನ್.ಸಿ.ಸಿ., ಎನ್.ಎಸ್.ಎಸ್., ರೋವರ್ಸ್ ಮತ್ತು ರೇಂಜರ್ಸ್ ಗಳೊಂದಿಗೆ ಸಂಘದ ಕಾರ್ಯಕಾರಿ ಮಂಡಳಿಯ ನಿರ್ದೇಶಕರು, ಮಹಾವಿದ್ಯಾಲಯದ ಸಿಬ್ಬಂದಿಯವರು ನಗರದ ಬೀದಿಗಳಲ್ಲಿ ಪ್ರೀಡಂ ರನ್ ಕೈಗೊಂಡರು.
ಟಾಪ್ ನ್ಯೂಸ್
