ಸರ್ಕಾರಗಳ ನಿರ್ಲಕ್ಷ್ಯದಿಂದ ಕೋವಿಡ್ ಹೆಚ್ಚಳ : ಎಸ್.ಜಿ.ನಂಜಯ್ಯನಮಠ
ಸರಕಾರಿ ಆಸ್ಪತ್ರೆಯಲ್ಲಿ ಆಯುರ್ವೇದ ವೈದ್ಯರ ಸೇವೆ ಅಗತ್ಯ | ತಾಂತ್ರಿಕ ಸಲಹಾ ಸಮಿತಿ ಶಿಫಾರಸು ನಿರ್ಲಕ್ಷ್ಯಕ್ಕೆ ಆಕ್ರೋಶ
Team Udayavani, May 16, 2021, 3:29 PM IST
ಬಾದಾಮಿ: ರಾಜ್ಯ ಸರಕಾರ ತಾಂತ್ರಿಕ ಸಲಹಾ ಸಮಿತಿ ಶಿಫಾರಸುಗಳನ್ನು ನಿರ್ಲಕ್ಷ್ಯ ಮಾಡಿರುವುದೇ ಕೊರೊನಾ ಉಲ್ಬಣಕ್ಕೆ ಕಾರಣವಾಗಿದೆ ಎಂದು ಮಾಜಿ ಶಾಸಕ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ ಆರೋಪಿಸಿದರು.
ಪಟ್ಟಣದ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ತಾಂತ್ರಿಕ ಸಲಹಾ ಸಮಿತಿಯ ಸಲಹೆಯಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಲ್ಲಿ ಸರಕಾರ ವಿಫಲವಾಗಿದೆ. ಕೋವಿಡ್ ಸೋಂಕು ತೀವ್ರಗೊಂಡ ನಂತರ ಕಠಿಣ ಕ್ರಮ ಜಾರಿಗೆ ತಂದಿದೆ. ಈ ಮೊದಲೇ ಕ್ರಮ ಕೈಗೊಳ್ಳಬೇಕಾಗಿತ್ತು ಎಂದರು. ರೋಗಿಗಳಿಗೆ ತಕ್ಕಂತೆ ವೈದ್ಯರಿಲ್ಲ. ಸರಕಾರ ಮುಂದಾಲೋಚನೆ ಮಾಡಿ ಸರಕಾರಿ ಆಸ್ಪತ್ರೆಯಲ್ಲಿ ಆಯುರ್ವೇದ ವೈದ್ಯರ ಸೇವೆ ಪಡೆಯಬೇಕಾಗಿತ್ತು. ಸರಕಾರ ಜಾತ್ರೆ, ಹಬ್ಬ ಹರಿದಿನ, ಚುನಾವಣೆ, ಮದುವೆ ನಿಯಂತ್ರಣ ಮಾಡದಿರುವುದೇ ರೋಗ ಉಲ್ಬಣಗೊಂಡು ಪ್ರಾಣ ಹಾನಿ ಸಂಭವಿಸಿತು ಎಂದರು.
ಮುಖ್ಯಮಂತ್ರಿ ಮತ್ತು ಸಚಿವರಲ್ಲಿ ಹೊಂದಾಣಿಕೆ ಇಲ್ಲ. ಬೆಡ್, ವೆಂಟಿಲೇಟರ್, ವ್ಯಾಕ್ಸಿನ್ಗೆ ಒಬ್ಬೊಬ್ಬ ಸಚಿವರನ್ನು ನೇಮಕ ಮಾಡಲಾಗಿದೆ. ಇದನ್ನು ಸರಿಯಾಗಿ ನಿರ್ವಹಣೆ ಮಾಡದ ಕಾರಣ ನ್ಯಾಯಾಂಗ ಭಾಗವಹಿಸಬೇಕಾಯಿತು. ಮಾಜಿ ಸಚಿವ ಸಿ.ಟಿ.ರವಿ, ಕೇಂದ್ರ ಸಚಿವ ಸದಾನಂದಗೌಡ ಜವಾಬ್ದಾರಿ ಮರೆತು ನ್ಯಾಯಾಲಯದ ವಿರುದ್ಧ ಹೇಳಿಕೆ ನೀಡಿರುವುದು ಖಂಡನೀಯ. ನ್ಯಾಯಾಂಗದ ಬಗ್ಗೆ ಗೌರವವಿಲ್ಲ ಎಂದು ಹೇಳಿದರು. 45 ವರ್ಷ ಮೇಲ್ಪಟ್ಟವರಿಗೆ ಸಮರ್ಪಕವಾಗಿ ಲಸಿಕೆ ನೀಡಿಲ್ಲ. 18 ರಿಂದ 44 ವಯೋಮಾನದವರಿಗೆ ಲಸಿಕೆ ಇಲ್ಲ. ಇದು ಸರಕಾರದ ಅವ್ಯವಸ್ಥೆಯನ್ನು ಎತ್ತಿ ತೋರಿಸುತ್ತದೆ. ಈಗಾಗಲೇ ಎಲ್ಲರಿಗೂ ಲಸಿಕೆ ಕೊಡಬೇಕಾಗಿತ್ತು ಎಂದು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪುರಸಭೆ ಸದಸ್ಯ ರಾಜಮಹ್ಮದ ಬಾಗವಾನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಡಿ.ಯಲಿಗಾರ ಹಾಜರಿದ್ದರು.