ರೈತರ ವಿಷಯದಲ್ಲಿ ಕಣ್ಣು ಹೃದಯವಿಲ್ಲದ ರಾಜ್ಯ ಸರ್ಕಾರ: ಉಮಾಶ್ರೀ
Team Udayavani, Nov 14, 2022, 7:52 PM IST
ಮಹಾಲಿಂಗಪುರ: ರೈತರ ಕಬ್ಬು ದರ ನಿಗದಿ ವಿಷಯದಲ್ಲಿ ಕಣ್ಣು ಹೃದಯವಿಲ್ಲದಂತೆ ರಾಜ್ಯ ಸರ್ಕಾರವು ಮೌನವಾಗಿರುವದರಿಂದ ಇಂದು ಕಬ್ಬು ದರ ನಿಗದಿಗಾಗಿ ರೈತರು ಬೀದಿಗಿಳಿದು ಹೋರಾಟ ಮಾಡುವಂತಹ ಸ್ಥಿತಿಯು ನಿರ್ಮಾಣವಾಗಿದೆ ಎಂದು ಮಾಜಿ ಸಚಿವೆ ಉಮಾಶ್ರೀ ಆರೋಪಿಸಿದರು.
ಸೋಮವಾರ ಪಟ್ಟಣದ ಜಿಎಲ್ಬಿಸಿ ಅತಿಥಿ ಗೃಹದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ರೈತರ ಸಹಾಯಕ್ಕೆ ಬರುವುದು ಸರ್ಕಾರದ ಆದ್ಯ ಕರ್ತವ್ಯ. ಹಿಂದಿನ ನಮ್ಮ ಕೇಂದ್ರ ಕಾಂಗ್ರೆಸ್ ಸರ್ಕಾರ 75 ಸಾವಿರ, ಮತ್ತು ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸಿದ್ದರಾಮಯ್ಯನವರು 50 ಸಾವಿರ ಸಾಲಮನ್ನಾ ಮಾಡಿ ರೈತರಿಗೆ ನೆರವಾಗಿದ್ದರು, ಅಲ್ಲದೇ ರೈತರಿಗೆ ಪ್ರತಿ ಟನ್ಗೆ 350ರೂ ಸಹಾಯಧನ ವಿತರಿಸಿ ರೈತರ ಸಂಕಷ್ಟಕ್ಕೆ ಸ್ಪಂದಿಸಿದ್ದರು.
ರಾಜ್ಯ ಬಿಜೆಪಿ ಸರ್ಕಾರವು ರೈತರ ವಿಷಯದಲ್ಲಿ ಕಲ್ಲು ಹೃದಯದ ಸರ್ಕಾರವಾಗಿದೆ. ಕಬ್ಬು ದರ ನಿಗದಿಯ ದರ ಸಮರದಲ್ಲಿ ಜಿಲ್ಲೆಯ ಕಾರ್ಖಾನೆಗಳು ಬಂದಾಗಿರುವ ಕಾರಣ, ದಿನಗಳೆದಂತೆ ರೈತರ ಬದುಕು ಮತ್ತಷ್ಟು ಅಸಹನೀಯವಾಗುತ್ತದೆ. ಸಕಾಲಕ್ಕೆ ಕಬ್ಬು ಕಟಾವು ಆಗದೇ ಇದ್ದರೆ ಮುಂದೆ ನೀರಿನ ಸಮಸ್ಯೆ, ಇಳುವರಿ ಕಡಿಮೆ, ಸಾಗಾಣಿಕೆ ಮತ್ತು ಕಟಾವು ವೆಚ್ಚ ಹೆಚ್ಚಳದೊಂದಿಗೆ ಮತ್ತೆ ರೈತರಿಗೆ ಇನ್ನಷ್ಟು ನಷ್ಟವಾಗುವುದು ನಿಶ್ಚಿತ. ಪೆಟ್ರೋಲ್, ಡಿಸೇಲ್, ರಸಗೊಬ್ಬರ ದರ ಏರಿಕೆ, ಅತಿವೃಷ್ಟಿ, ಅನಾವೃಷ್ಟಿ ಸೇರಿದಂತೆ ಎಲ್ಲಾ ಸಂದರ್ಭದಲ್ಲಿಯೂ ರೈತನಿಗೆ ಹೆಚ್ಚಿನ ನಷ್ಟವಾಗುವುದರಿಂದ ರಾಜ್ಯ ಸರ್ಕಾರವು ರೈತರ ಕಬ್ಬು ದರ ನಿಗದಿಯಲ್ಲಿ ತಕ್ಷಣ ಸೂಕ್ತ ನಿರ್ಧಾರ ಕೈಗೊಳ್ಳುವುದು ತುರ್ತು ಅಗತ್ಯವಾಗಿದೆ ಎಂದರು.
ಬಹುಮುಖ್ಯವಾಗಿ ಬಾಗಲಕೋಟೆ ಜಿಲ್ಲಾಧಿಕಾರಿಗಳು, ಸಂಬಂಧಿಸಿದ ಜಿಲ್ಲೆಯ ಸಚಿವರು ಮಧ್ಯಸ್ಥಿಕೆವಹಿಸಿ ರೈತರಿಗೆ ಆಧಾರವಾಗಬೇಕು. ಅದೇ ರೀತಿಯಲ್ಲಿ ಕಾರ್ಖಾನೆಗಳು ಸಹ ಹಟಮಾರಿ ಧೋರಣೆಯನ್ನು ಬಿಟ್ಟು ಸೌಹಾರ್ದಯುತವಾಗಿ ಕಬ್ಬಿಗೆ ಸೂಕ್ತ ದರ ನಿಗದಿಗೊಳಿಸಿ, ಶೀಘ್ರದಲ್ಲೇ ಕಾರ್ಖಾನೆಗಳನ್ನು ಪ್ರಾರಂಭಿಸಬೇಕು ಎಂದರು.
ನೇಕಾರ ಹೋರಾಟಗಾರರನ್ನು ಅವಮಾನಿಸಿದ್ದು ಖಂಡನೀಯ:
ನೇಕಾರರಿಗೆ ಮೂಲಭೂತ ಸೌಲಭ್ಯಗಳಿಗಾಗಿ ಒತ್ತಾಯಿಸಿ ಬೆಳಗಾವಿ, ಬಾಗಲಕೋಟೆ, ಗದಗ ಭಾಗದಿಂದ ಸರ್ಕಾರಕ್ಕೆ ನಿರಂತರವಾಗಿ ಮನವಿ ಸಲ್ಲಿಸಿದ್ದರು ಸಹ, ರಾಜ್ಯ ಸರ್ಕಾರದಿಂದ ನೇಕಾರರಿಗೆ ಮತ್ತು ನೇಕಾರ ಕೂಲಿಕಾರ್ಮಿಕರಿಗೆ ನಾಲ್ಕುವರೆ ವರ್ಷಗಳಿಂದ ದೊಡ್ಡ ಪ್ರಮಾಣದಲ್ಲಿ ಸರ್ಕಾರದಿಂದ ಕೆಲಸ ಆಗಿಲ್ಲ. ಸರ್ಕಾರದ ಒಳಗೆ ಇರುವ ಜನಪ್ರತಿನಿಧಿಗಳು ನೇಕಾರ ಹೋರಾಟಗಾರರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ.
ಮೊನ್ನೆ ನಮ್ಮ ತೇರದಾಳ ಮತಕ್ಷೇತ್ರದ ಶಾಸಕರು ನೇಕಾರ ಹೋರಾಟಗಾರರನ್ನು ಅವಮಾನಿಸಿದ ಘಟನೆಯನ್ನು ಖಂಡಿಸುತ್ತೇನೆ. ನೇಕಾರರ ಕುರಿತು ಹೋರಾಟ ಮಾಡುವವರು ನೇಕಾರ ಸಮುದಾಯದವರೇ ಆಗಿರಬೇಕೆಂಬ ನಿಯಮವಿಲ್ಲ. ರಾಜ್ಯಮಟ್ಟದಲ್ಲಿ ಎಚ್.ಕೆ.ಪಾಟೀಲ, ಆರ್.ಬಿತಿಮ್ಮಾಪೂರ ಅವರು, ಮಹಾಲಿಂಗಪುರ ಭಾಗದಲ್ಲಿ ದಿ.ಮಹ್ಮದಸಾಬ ಬಾಗವಾನ್, ದಿ.ಡಾ| ಕಲಾಲ, ಸಂಗಪ್ಪ ಹಲ್ಲಿ, ಮಹಾಲಿಂಗಪ್ಪ ಲಾತೂರ, ಬಾಂಗಿ ವಕೀಲರು ಸೇರಿದಂತೆ ಹಲವರು ನೇಕಾರ ಸಮಸ್ಯೆಗಳ ಕುರಿತು ಧ್ವನಿಎತ್ತಿ, ಹೋರಾಟ ಮಾಡಿಕೊಂಡು ಬಂದಿದ್ದಾರೆ.
ರಾಜ್ಯದಲ್ಲಿ ನೇಕಾರ ಹೋರಾಟಗಾರರು ಯಾರೇ ಇರಲಿ, ಅವರು ಬಡ ನೇಕಾರ ಮೂಲಭೂತ ಸೌಲಭ್ಯಗಳಿಗಾಗಿ ಹೋರಾಟ ಮಾಡುತ್ತಿದ್ದಾರೆ ಹೊರತು ಅಧಿಕಾರದ ಆಸೆಗಾಗಿ ಅಲ್ಲ. ನೇಕಾರರು ತಮಗೆ ಮತನೀಡಿ ಚುನಾಯಿಸಿದ್ದಾರೆ, ಶಾಸಕರು ಸಂಯಮ ಕಳೆದುಕೊಳ್ಳದೇ ಹೋರಾಟಗಾರರು ಮತ್ತು ನೇಕಾರರ ಬೇಡಿಕೆಗಳನ್ನು ಆಲಿಸಿ, ಕಾನೂನು ಚೌಕಟ್ಟಿನಲ್ಲಿರುವ ಕೆಲಸಗಳನ್ನು ಮಾಡಬೇಕು. ಕಾನೂನು ಚೌಕಟ್ಟು ಮೀರಿ ಇರುವಂತಹ ಸಮಸ್ಯೆಗಳನ್ನು ಸಂಬಂಧಿಸಿದಂತೆ ಇಲಾಖೆ, ಸಚಿವರು, ಸರ್ಕಾರದೊಂದಿಗೆ ಚರ್ಚಿಸಿ ಸೂಕ್ತ ಪರಿಹಾರ ಒದಗಿಸಲು ಪ್ರಯತ್ನಿಸಬೇಕೆ ಹೊರತು, ಹೋರಾಟಗಾರರ ಮೇಲೆ ದಬ್ಬಾಳಿಕೆ ಮಾಡುವಂತಹ ನಡುವಳಿಕೆಗಳು ತಮಗೆ ಶೋಭೆ ತರುವುದಿಲ್ಲ. ಬನಹಟ್ಟಿಯಲ್ಲಿ ನೇಕಾರ ಹೋರಾಟಗಾರರು ಮತ್ತು ಬಡ ನೇಕಾರರ ಮೇಲೆ ನಡೆದ ಘಟನೆಯನ್ನು ಖಂಡಿಸುತ್ತೇನೆ ಎಂದರು.
ಕಾಂಗ್ರೆಸ್ ರೈತ ಮುಖಂಡರಾದ ಮಲ್ಲಪ್ಪ ಸಿಂಗಾಡಿ, ಶ್ರೀಶೈಲ ಮೇಣಿ, ದುಂಡಪ್ಪ ಪಟ್ಟಣಶೆಟ್ಟಿ, ಸುರೇಶ ಬಿದರಿ ಮಾತನಾಡಿ ರಾಜ್ಯ ಸರ್ಕಾರವು ಪ್ರತಿಟನ್ ಕಬ್ಬಿಗೆ 500 ರೂಗಳ ಸಹಾಯಧನ ನೀಡಬೇಕೆಂದು ಒತ್ತಾಯಿಸಿದರು.
ಕಾಂಗ್ರೆಸ್ ಮುಖಂಡರಾದ ಈಶ್ವರ ಚಮಕೇರಿ, ಬಸವರಾಜ ರಾಯರ, ಬಲವಂತಗೌಡ ಪಾಟೀಲ, ಸಿದ್ರಾಮ ಯರಗಟ್ಟಿ, ಸಿದ್ದು ಬೆನ್ನೂರ, ಅರ್ಜುನ ದೊಡಮನಿ, ಲಕ್ಷ್ಮಣ ಮಾಂಗ, ರವಿ ಬಿದರಿ, ಮಹಾದೇವಪ್ಪ ಬರಗಿ, ಹೊಳೆಪ್ಪ ಬಾಡಗಿ, ವಿನೋದ ಸಿಂಪಿ, ಕಿರಣ ಕರ್ಲಟ್ಟಿ, ಮಹಾಲಿಂಗ ಮಾಳಿ, ಈರಪ್ಪ ಸೊನ್ನದ ಸೇರಿದಂತೆ ಹಲವರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls; ಕಂಬಳಿ ಹೊತ್ತು ನಾಮಪತ್ರ ಸಲ್ಲಿಸಿದ ಸಂಯುಕ್ತಾ ಪಾಟೀಲ್
Bagalkote Lok Sabha Election: ಈ ಬಾರಿ ಯಾರೇ ಗೆದ್ರೂ ಹೊಸ ಇತಿಹಾಸ
Bilagi ಭೀಕರ ಅಪಘಾತ; ಯಮನಂತೆ ಬಂದ ಟಿಪ್ಪರ್ ; ಒಂದೇ ಕುಟುಂಬದ ಐವರು ಸಾವು
ತಾಕತ್ತಿದ್ದರೆ ಯತ್ನಾಳ್ ನನ್ನ ವಿರುದ್ಧ ಪಕ್ಷೇತರರಾಗಿ ಸ್ಪರ್ಧಿಸಲಿ: ಪಾಟೀಲ್
Bagalkote; ಯತ್ನಾಳ್ ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ…: ಶಿವಾನಂದ ಪಾಟೀಲ್ ಸವಾಲು