ಬಾಂಬ್,ಬಂದೂಕಿನಿಂದ ಸ್ವಾತಂತ್ರ್ಯ ಬಂದಿದ್ದು;ನೆಹರು,ಗಾಂಧಿಯಿಂದಲ್ಲ!
Team Udayavani, Mar 24, 2018, 10:11 AM IST
ಬಾಗಲಕೋಟೆ: ರಾಜ್ಯದಲ್ಲಿ ಜನಪರವಾದ ಆಡಳಿತವಿಲ್ಲ. ಹಿಟ್ಲರ್ ಆಡಳಿತವಿದೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆರೋಪಿಸಿದ್ದಾರೆ.
ಭಗತಸಿಂಗ್ ಬಲಿದಾನ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಹನುಮ ಜಯಂತಿ, ರಾಮ ನವಮಿ ಜಯಂತಿ ಆಚರಣೆ ಸೇರಿದಂತೆ ಹಲವು ದೇಶಭಕ್ತಿ ಕಾರ್ಯಕ್ರಮ ನಡೆಸಲು ಸರ್ಕಾರ ತಡೆಯುತ್ತಿದೆ. ಇದು ಹಿಟ್ಲರ್ ಆಡಳಿತ. ದೇಶಭಕ್ತಿ ಕಾರ್ಯಕ್ರಮ ಎಲ್ಲಿಯೇ ನಡೆದರೂ ನಾನು ಅಲ್ಲಿಗೆ ಹೋಗುತ್ತೇನೆ. ಹೋಗಬಾರದು ಎನ್ನಲು ಈಗ ಚುನಾವಣೆ ನೀತಿ ಸಂಹಿತೆ ಜಾರಿ ಆಗಿದೆಯೇ? ಬರುವ ವಿದಾನಸಭೆ ಚುನಾವಣೆಯಲ್ಲಿ ನಾನು ತೇರದಾಳ ಅಥವಾ ಜಮಖಂಡಿ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಕುರಿತು ಮಾ.29ರಂದು ಅಂತಿಮ ನಿರ್ಧಾರ ಪ್ರಕಟಿಸುತ್ತೇನೆ ಎಂದರು.
ನೆಹರು, ಗಾಂಧಿಯಿಂದ ಸ್ವಾತಂತ್ರ್ಯ ಸಿಕ್ಕಿಲ್ಲ
ಈ ದೇಶಕ್ಕೆ ಮಹಾತ್ಮ ಗಾಂಧೀಜಿ, ಜವಾಹರಲಾಲ್ ನೆಹರು ಅವರಿಂದ ಸ್ವಾತಂತ್ರ್ಯ ಸಿಕ್ಕಿಲ್ಲ. ಬಾಂಬ್, ಬಂದೂಕಿನಿಂದ ಭಾರತಕ್ಕೆ ಸ್ವಾತಂತ್ರ್ಯ ಬಂದಿದೆ ಎಂದು ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. ಈ ದೇಶಕ್ಕೆ ಗಾಂಧೀಜಿ, ನೆಹರು ಅವರಿಂದ ಸ್ವಾತಂತ್ರ್ಯ ಬಂದಿದೆ ಎಂದು ಬಿಂಬಿಸಲಾಗಿದೆ. ಚಿಕ್ಕ ಮಕ್ಕಳಿಗೆ ಗೊತ್ತಿರುವುದು ಕೇವಲ ಗಾಂಧೀಜಿ ಮತ್ತು ಇನ್ನೊಂದು ನೆಹರುಜೀ. ಇವರಿಂದ ನಮ್ಮ ದೇಶಕ್ಕೆ ಸ್ವಾತಂತ್ರ್ಯಸಿಕ್ಕಿಲ್ಲ. ಭಗತ್ ಸಿಂಗ್, ರಾಜಗುರು, ಸುಖದೇವ, ಚಂದ್ರಶೇಖರ ಆಜಾದ್ ಅವರಿಂದ ಸ್ವಾತಂತ್ರ್ಯ ಸಿಕ್ಕಿದೆ. ದೇಶಭಕ್ತಿ, ಬಲಿದಾನ ಕಾರ್ಯಕ್ರಮದಲ್ಲಿ ಭಾಗವಹಿಸಲು ನನಗೆ ಅಡ್ಡಿಪಡಿಸಲಾಗುತ್ತಿದೆ. ನನಗೇಕೆ ತೊಂದರೆ ಕೊಡುತ್ತಿದ್ದೀರಿ. ನನಗೆ ಮದುವೆಯಿಲ್ಲ. ಮಕ್ಕಳಿಲ್ಲ. ಆಸ್ತಿ ಗಳಿಸಿಲ್ಲ. ದೇಶಭಕ್ತಿ, ಹಿಂದುತ್ವಕ್ಕಾಗಿ ನಾನು
ಕೊನೆವರೆಗೂ ಹೋರಾಡುತ್ತೇನೆ ಎಂದರು.