ಗುಳೇದಗುಡ್ಡ: ಕೈಮಗ್ಗ ನೇಕಾರಿಕೆಗೆ ಪುನಶ್ಚೇತನ ಅಗತ್ಯ- ಹೆಗಡೆ
ಒಂದು ಕಾಲದಲ್ಲಿ ಗುಳೇದಗುಡ್ಡ ನೇಕಾರಿಕೆಗೆ ರಾಷ್ಟ್ರಮಟ್ಟದಲ್ಲಿ ಖ್ಯಾತಿ ಗಳಿಸಿತ್ತು.
Team Udayavani, Aug 8, 2023, 3:05 PM IST
ಗುಳೇದಗುಡ್ಡ: ಆಧುನಿಕತೆಯ ಕಾಲಘಟ್ಟದಲ್ಲಿ ಕರಕುಶಲ ಕಲೆಯಿಂದ ಕೂಡಿರುವ ಕೈಮಗ್ಗ ನೇಕಾರಿಕೆ ನಶಿಸಿ ಹೋಗುತ್ತಿದೆ. ಕೈಮಗ್ಗ ನೇಕಾರಿಕೆಯನ್ನೇ ನಂಬಿಕೊಂಡಿರುವ ಅನೇಕ ನೇಕಾರರು ಇಂದು ಬಹಳಷ್ಟು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಸರಕಾರ ಕೈಮಗ್ಗ ನೇಕಾರಿಕೆಗೆ ಪುನಃಶ್ಚೇತನ ನೀಡುವ ಅಗತ್ಯವಿದೆ ಎಂದು ನೇಕಾರ ಮುಖಂಡ ಹಾಗೂ ರಾಠಿ ಮತ್ತು ಕಾವಡೆ ಆಂಗ್ಲ ಮಾಧ್ಯಮ ಶಾಲೆ ಚೇರಮನ್ ಅಶೋಕ ಹೆಗಡೆ ಹೇಳಿದರು.
ಪಟ್ಟಣದ ಕೈಮಗ್ಗ ನೇಕಾರರ ಮನೆಯಲ್ಲಿ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ನಿಮಿತ್ತವಾಗಿ ಪಟ್ಟಣದ ರಾಠಿ, ಕಾವಡೆ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿಗಳ ಕೈಮಗ್ಗ ನೇಕಾರಿಕೆ ಪ್ರಾತ್ಯಕ್ಷಿಕೆ ಮತ್ತು ಹಿರಿಯ ಕೈಮಗ್ಗ ನೇಕಾರರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.. ಒಂದು ಕಾಲದಲ್ಲಿ ಗುಳೇದಗುಡ್ಡ ನೇಕಾರಿಕೆಗೆ ರಾಷ್ಟ್ರಮಟ್ಟದಲ್ಲಿ ಖ್ಯಾತಿ ಗಳಿಸಿತ್ತು.
ಆದರೆ, ಇಂದು ಇಲ್ಲಿನ ಕೈಮಗ್ಗ ನೇಕಾರಿಕೆ ಸಂಪೂರ್ಣ ನಶಿಸಿ ಹೋಗುತ್ತಿದೆ. ಇದರಿಂದ ನೇಕಾರರ ಬದುಕು ಕೂಡ ಸಂಪೂರ್ಣ ಸಂಕಷ್ಟಕ್ಕೆ ಈಡಾಗಿದೆ. ಸರಕಾರ ಕೈಮಗ್ಗ ನೇಕಾರಿಕೆಗೆ ವಿಶೇಷ ಯೋಜನೆಗಳನ್ನು ರೂಪಿಸಿ ಕೈ ಮಗ್ಗಗಳನ್ನು ಮತ್ತಷ್ಟು ಉನ್ನತೀಕರಣಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ಹೇಳಿದರು.
ರಾಷ್ಟ್ರೀಯ ಕೈಮಗ್ಗ ನೇಕಾರಿಕೆ ದಿನಾಚರಣೆ ನಿಮಿತ್ತವಾಗಿ ಪಟ್ಟಣದ ಹಿರಿಯ ಕೈಮಗ್ಗ ನೇಕಾರರಾದ ಬಸಪ್ಪ ಹರ್ತಿ ಹಾಗೂ ದಾನಪ್ಪ ಬಂಡಿ ಅವರನ್ನು ರಾಠಿ ಮತ್ತು ಕಾವಡೆ ಆಂಗ್ಲ ಶಾಲೆ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ನೇಕಾರ ಮುಖಂಡ ಶ್ರೀಕಾಂತ ಹುನಗುಂದ, ಶಿವಪ್ಪ ಕಲಬುರ್ಗಿ, ನಿಂಗಪ್ಪ ಅಲದಿ, ಭದ್ರು ಪರಗಿ, ಪ್ರವೀಣ ಹರ್ತಿ, ಶಿಕ್ಷಕರಾದ ಜಿ.ಎ.ಬನ್ನಿ, ಎಸ್ .ಬಿ.ಕೋತ, ಸಿ.ಎ.ಪರಗಿ ಹಾಗೂ ನೇಕಾರರು ಮತ್ತು ಶಾಲಾ ವಿದ್ಯಾರ್ಥಿಗಳು ಇದ್ದರು.