ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ
Team Udayavani, Jan 11, 2020, 12:19 PM IST
ತೇರದಾಳ: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪೌರತ್ವ ತಿದ್ದುಪಡಿ ಕುರಿತು ಹಿಂದೂ ಸಂಘನೆ ಮುಖ್ಯಸ್ಥ ಹಾಗೂ ಜನಪ್ರತಿನಿಧಿಗಳು ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮ ಖಂಡಿಸಿ ಮುಸ್ಲಿಂ ಸಂಘಟನೆಗಳು ಶುಕ್ರವಾರ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದವು.
ಹಿಂದೂ ಸಂಘಟನೆ ಮುಖ್ಯಸ್ಥ ಬನಹಟ್ಟಿಯ ನಂದು ಗಾಯಕವಾಡ, ನಗರದ ಪುರಸಭೆ ಸದಸ್ಯರಾದ ವಿನಾಯಕ ಬಂಕಾಪುರ, ಲಕ್ಷ್ಮಣ ನಾಯಕ, ಬಿಜೆಪಿ ನಗರ ಘಟಕ ಅಧ್ಯಕ್ಷ ಪ್ರಭಾಕರ ಬಾಗಿ, ರಾಮಣ್ಣ ಹಿಡಕಲ್ ಸರ್ಕಾರಿ ಕಾಲೇಜಿನಲ್ಲಿ ಎನ್ಆರ್ಸಿ ಹಾಗೂ ಸಿಎಎ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿ ಸಹಿ ಸಂಗ್ರಹಿಸುತ್ತಿದ್ದರು. ಸುದ್ದಿ ತಿಳಿಯುತ್ತಿದ್ದಂತೆ ಮುಸ್ಲಿಂ ಸಂಘಟನೆ ಯುವಕರು ಕಾಲೇಜಿಗೆ ತೆರಳಿ ಉಪನ್ಯಾಸಕರಾದ ಆರ್.ವಿ. ಕಡಪಟ್ಟಿ ಹಾಗೂ ಸುರೇಶ ಪಟ್ಟದ ಅವರ ಜೊತೆವಾಗ್ವಾದ ನಡೆಸಿದ್ದಾರೆ. ಕಾ
ಲೇಜಿನಲ್ಲಿ ಈ ಕುರಿತು ಕಾರ್ಯಕ್ರಮ ನಡೆಸಲು ಹೇಗೆ ಅನುಮತಿ ನೀಡಿದ್ದೀರಿ? ಎಂದು ತರಾಟೆಗೆ ತಗೆದುಕೊಂಡಿದ್ದಾರೆ. ನಂತರ ಘಟನೆ ಖಂಡಿಸಿ ಪೊಲೀಸ್ ಠಾಣೆಯಲ್ಲಿ ನೂರಾರು ಸಂಖ್ಯೆಯ ಮುಸ್ಲಿಮ ಬಾಂಧವರು ಜಮಾಯಿಸಿದ್ದರಿಂದ ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಯಿತು. ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಪೌರತ್ವದ ಬಗ್ಗೆ ಹೇಳುವ ಮೂಲಕ ದಾರಿ ತಪ್ಪಿಸುವ ಕೆಲಸ ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಜಮಿಯತೆ ಉಲ್ಮಾ ತೇರದಾಳ ಸಂಘಟನೆ ವತಿಯಿಂದ ಪಿಎಸೈ ರವೀಂದ್ರಕುಮಾರ ಧರ್ಮಟ್ಟಿ ಅವರಿಗೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ಪಿಎಸೈ, ಘಟನೆ ಕುರಿತು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.