ಉರ್ದು ವಿಭಾಗದಲ್ಲಿ ಒಬ್ಬಳೇ ವಿದ್ಯಾರ್ಥಿನಿ!
ನನ್ನ ಗೆಳೆತಿಯರು ಬಂದಿಲ್ಲ. ಯಾಕೆ ಎಂದು ಕೇಳಿದರೆ ಈಗ ಎಲ್ಲ ಜಗಳ ಮುಗಿಲಿ ಎಂದು ಹೇಳುತ್ತಿದ್ದಾರೆ.
Team Udayavani, Feb 16, 2022, 6:01 PM IST
ಬಾಗಲಕೋಟೆ: ನಿತ್ಯ ನೂರಾರು ಮಕ್ಕಳು ಬರುತ್ತಿದ್ದ ನಗರದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಗೆ ಈಗ ಮಕ್ಕಳೇ ಬರುತ್ತಿಲ್ಲ. ಮಂಗಳವಾರ ಈ ಶಾಲೆಯ ಉರ್ದು ವಿಭಾಗದಲ್ಲಿ ಒಟ್ಟು 19 ವಿದ್ಯಾರ್ಥಿಗಳಿದ್ದು, ಮಂಗಳವಾರ ಜಬೀನ್ ಮಕಾನದಾರ ವಿದ್ಯಾರ್ಥಿನಿ ಮಾತ್ರ ಶಾಲೆಗೆ ಬಂದಿದ್ದಳು.
ನನ್ನ ಗೆಳೆತಿಯರು ಬಂದಿಲ್ಲ. ಯಾಕೆ ಎಂದು ಕೇಳಿದರೆ ಈಗ ಎಲ್ಲ ಜಗಳ ಮುಗಿಲಿ ಎಂದು ಹೇಳುತ್ತಿದ್ದಾರೆ. ಅದೆಲ್ಲ ನಮಗೆ ಬೇಡ. ನಾವು ಶಿಕ್ಷಣ ಕಲಿಯಬೇಕಷ್ಟೆ. ಅದಕ್ಕಾಗಿ ಎಲ್ಲರೂ ಶಾಲೆಗೆ ಬನ್ನಿ ಎಂದು ನಾನೂ ಕೇಳಿಕೊಂಡಿದ್ದೇನೆ ಎಂದಳು ಜಬೀನ್ ಮಕಾನದಾರ.
ಇದೇ ಶಾಲೆಯಲ್ಲಿ 8,9 ನೇ ತರಗತಿಗೂ ಕೂಡ ಪ್ರತಿಶತ ನೂರರಷ್ಟು ಉರ್ದು ಮಾಧ್ಯಮ ವಿದ್ಯಾರ್ಥಿನಿಯರು ಬರುತ್ತಿಲ್ಲ. ಕೆಲವರು ಹಿಜಾಬ್ ಧರಿಸಿಕೊಂಡು ಶಾಲೆವರೆಗೂ ಬಂದು ನಂತರ ಅದನ್ನು ತೆಗೆದು ಕೊಠಡಿಯೊಳಗೆ ಹೋಗುತ್ತಿದ್ದಾರೆ. ಇನ್ನೂ ಕೆಲವರು ಶಾಲೆ ಕಡೆ ತಿರುಗಿಯೂ ನೋಡುತ್ತಿಲ್ಲ.
ಡಿಡಿಪಿಐ ಶ್ರೀಶೈಲ ಎಸ್. ಬಿರಾದಾರ ಮಂಗಳವಾರ ಈ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಿದ್ಯಾರ್ಥಿಗಳ ಜತೆ ಮಾತನಾಡಿ, ನಿಮ್ಮ ಸಹಪಾಠಿಗಳನ್ನು ಶಾಲೆಗೆ ಕರೆದುಕೊಂಡು ಬನ್ನಿ, ಯಾರೂ ಭಯ ಪಡುವ ಅವಶ್ಯಕತೆಯಿಲ್ಲ ಎಂದರು.