ಅಪಾಯಕ್ಕೆ ಆಹ್ವಾನ ನೀಡುವಂತಿದೆ ರಸ್ತೆ
ಅತಿ ವೇಗವಾಗಿ ವಾಹನ ಚಲಾಯಿಸುವವರ ಮೇಲೆ ಕಡಿವಾಣ ಹಾಕಬೇಕಿದೆ.
Team Udayavani, Mar 11, 2022, 6:28 PM IST
ಗುಳೇದಗುಡ್ಡ: ಪಟ್ಟಣದ ಬಾದಾಮಿ ನಾಕಾದ ರಸ್ತೆಯನ್ನು ಮೂರ್ನಾಲ್ಕು ತಿಂಗಳುಗಳ ಹಿಂದೆ ಸಂಕೇಶ್ವರ-ಸಂಗಮ ರಾಜ್ಯ ಹೆದ್ದಾರಿ ಯೋಜನೆ ಅಡಿಯಲ್ಲಿ ನಿರ್ಮಿಸಿದ್ದು, ಇಲ್ಲಿ ಅಪಘಾತಗಳು ಸಂಭವಿಸುತ್ತಿವೆ. ಇದರಿಂದ ಪಾದಚಾರಿಗಳು ಹಾಗೂ ಬರುವ ಸವಾರರು ಸಹ ಸಂಚರಿಸಲು ಭಯ ಪಡುವಂತಾಗಿದೆ.
ಬಾದಾಮಿ ನಾಕಾದಲ್ಲಿನ ರಸ್ತೆಯ ತಿರುವು ಇರುವುದರಿಂದ ಬಸ್ ನಿಲ್ದಾಣದ ಕಡೆಯಿಂದ ಬರುವ ವಾಹನ ಸವಾರರು ರಸ್ತೆ ಖಾಲಿ ಇದೆ ಎಂದು ವೇಗವಾಗಿ ಬರುತ್ತಾರೆ. ಇಲ್ಲಿ ತಿರುವು ಇರುವುದನ್ನು ದೀಢಿರ್ನೆ ನೋಡಿ, ವಾಹನ ವೇಗ ಕಡಿಮೆ ಮಾಡಲು ಹೋಗಿ ಡಿವೈಡರ್ಗೆ ಟಚ್ ಆಗಿ ಇಲ್ಲವೇ ಸ್ಕೀಡ್ ಆಗಿ ಬೀಳುತ್ತಾರೆ. ಇನ್ನೂ ಕೆಲವರು ರಸ್ತೆಯ ಮೇಲೆ ಸಂಚರಿಸುವವರಿಗೆ ಹಾಯಿಸಿದ ಘಟನೆಗಳು ಹಲವು ಬಾರಿ ನಡೆದಿವೆ.
ಬಾದಾಮಿ ನಾಕಾದಲ್ಲಿ ತಹಶೀಲ್ದಾರ್ ಕಚೇರಿ, ನೋಂದಣಿ ಕಚೇರಿ ಇರುವುದರಿಂದ ಇಲ್ಲಿ ಜನರ ಸಂಚಾರ ನಿತ್ಯವು ಕಂಡು ಬರುತ್ತದೆ. ಆದರೆ ಈ ರಸ್ತೆಯಲ್ಲಿಯೇ ವಾಹನ ಸವಾರರು ವೇಗವಾಗಿ ಬೈಕ್, ಕಾರು ಸೇರಿದಂತೆ ಇನ್ನಿತರ ವಾಹನಗಳನ್ನು ವೇಗವಾಗಿ ಚಲಾಯಿಸಿಕೊಂಡು ಬರುತ್ತಾರೆ. ಏನಾದರೂ ಅನಾಹುತ ಸಂಭವಿಸಿದರೆ ಯಾರು ಹೊಣೆ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡುತ್ತಿದೆ.
ತೋಗುಣಶಿ ಕ್ರಾಸ್ ಹತ್ತಿರವು ಇದೆ ಸ್ಥಿತಿ: ಪಟ್ಟಣದ ಬಾದಾಮಿ ನಾಕಾದಷ್ಟೇ ಅಲ್ಲ 5 ಕಿ.ಮೀ. ದೂರದಲ್ಲಿರುವ ತೋಗುಣಶಿ ಪಾಲಿಟೆಕ್ನಿಕ್ ಕಾಲೇಜಿನ ರಸ್ತೆಯಲ್ಲಿಯೂ ಇದೇ ಸ್ಥಿತಿ ಇದ್ದು, ಅಲ್ಲಿ ಮೂರು ರಸ್ತೆ ಸೇರುವುದರಿಂದ ಅಲ್ಲಿಯೂ ಅಪಘಾತಗಳು ಸಂಭವಿಸುವುದುಂಟು. ಕಳೆದ ತಿಂಗಳು ಹಾಲಿನ ಗಾಡಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ನಡೆದಿದೆ. ಆದ್ದರಿಂದ ಇಲ್ಲಿಯೂ ವೇಗ ಕಡಿವಾಣಕ್ಕೆ ಬ್ರೇಕ್ ಹಾಕುವ ಅಗತ್ಯವಿದೆ.
ಬೇಕಿದೆ ವೇಗಕ್ಕೆ ಕಡಿವಾಣ: ಬೈಕ್ ಸವಾರರು ಅದರಲ್ಲೂ ಯುವಕರಂತೂ ಅತಿ ವೇಗವಾಗಿ ವಾಹನ ಚಲಾಯಿಸಿಕೊಂಡು ಈ ರಸ್ತೆಯಲ್ಲಿ ಸಂಚರಿಸುತ್ತಾರೆ. ತಿರುವು ಇದೇ ಎಂಬುದನ್ನು ಸಹ ನೋಡುವದಿಲ್ಲ. ಇದರಿಂದ ಯುವಕರ ಅತಿಯಾದ ವೇಗದ ಚಾಲನೆ ನೋಡಿ, ಪಾದಚಾರಿಗಳಂತು ಹಿಡಿಶಾಪ ಹಾಕುತ್ತಿದ್ದಾರೆ.
ಅತಿ ವೇಗವಾಗಿ ವಾಹನ ಚಲಾಯಿಸುವವರ ಮೇಲೆ ಕಡಿವಾಣ ಹಾಕಬೇಕಿದೆ. ಅಲ್ಲದೇ 18 ವಯಸ್ಸು ಆಗದೇ ಇರುವ ಯುವಕರು ಸಹ ವಾಹನ ಚಲಾಯಿಸುತ್ತಾರೆ. ಅವರಿಗೂ ಎಚ್ಚರಿಸುವ ಕೆಲಸವಾಗಬೇಕಿದೆ.
ರೋಡ್ಬ್ರೇಕರ್ಗೆ ಆಗ್ರಹ: ಈ ಬಾದಾಮಿ ನಾಕಾ ಹತ್ತಿರದ ರಸ್ತೆ ತಿರುವು ಇರುವುದರಿಂದ ವೇಗ ವಾಗಿ ಬರುವ ವಾಹನಗಳ ವೇಗಕ್ಕೆ ಕಡಿವಾಣ ಹಾಕಲು ರೋಡ್ಬ್ರೇಕರ್ನ ಅವಶ್ಯಕತೆಯಿದ್ದು, ಲೋಕೋಪ ಯೋಗಿ ಇಲಾಖೆ ಅಧಿ ಕಾರಿಗಳು ಇಲ್ಲಿ ರೋಡ್ ಬ್ರೇಕರ್ ಅಳವಡಿಸಬೇಕು. ಇದರಿಂದ ಮುಂದೆ ಉಂಟಾಗುವ ಅನಾಹುತ ತಪ್ಪಿಸಲು ಸಾಧ್ಯವಾಗುತ್ತದೆ ಎಂಬುದು ಸಾರ್ವಜನಿಕರ ಆಗ್ರಹ.
ಪಟ್ಟಣದಲ್ಲಿ ನೂರಾರು ವಾಹನಗಳ ಸಂಚಾರವಿ ದ್ದರೂ ಅವುಗಳನ್ನು ನಿಯಂತ್ರಿಸಲು ಪೊಲೀಸ್ ಇಲಾಖೆ ನಿರ್ಲಕ್ಷ ವಹಿಸಿದೆ. ಅಡ್ಡಾ ದಿಡ್ಡಿ ಓಡಾಟ ಮಾಡುವ ಯುವಕರಿಗೆ ಕಡಿವಾಣ ಹಾಕುವ ಪೊಲೀಸ್ ಅಧಿಕಾರಿ, ಸಿಬ್ಬಂದಿ ಕಣ್ಣು ಕಾಣದಂತೆ ಇದ್ದಾರೆ. ಟ್ರಾಫಿಕ್ ಪೊಲೀಸ್ ಕಾವಲು ಹಾಕಲು ನಾಗರಿಕರು ಒತ್ತಾಯಿಸಿದ್ದಾರೆ.
ಕೋಟೆಕಲ್, ತಹಶೀಲ್ದಾರ್ ಕಚೇರಿ, ಬಾದಾಮಿ ನಾಕಾ, ತೋಗುಣಸಿ ಕ್ರಾಸ್ ಬಳಿ ಹಂಪ್ ಹಾಕುವ ಉದ್ದೇಶವಿದೆ. ಸುಮಾರು 10 ಕಡೆ ಡಾಂಬರ್ ಹಂಪ್ ಹಾಕಬೇಕು. ಸದ್ಯ ಡಾಂಬರ ಪ್ಲಾಂಟ್ ಬಂದಾಗಿವೆ. ಅವು ಪ್ರಾರಂಭವಾದ ಕೂಡಲೇ ಅಳವಡಿಸಲಾಗುವುದು.
ಅಸ್ಲಾಮ ಮಕಾಂದರ,
ಅಭಿಯಂತರರು ಗುಳೆದಗುಡ್ಡ