ಸಂಚಾರಿ ನಿಯಮ ಪಾಲಿಸಿ, ಅಪಘಾತ ತಪ್ಪಿಸಿ
ಪೊಲೀಸ್ ಸಿಬ್ಬಂದಿ ಮುಂದೆ ನಿಂತು ಭದ್ರತೆ ನೀಡಿ ಸಹಕರಿಸಿದರು. ಸಾರ್ವಜನಿಕರು ಮಕ್ಕಳ ಕಲೆ ಕಂಡು ಬೆರಗಾದರು.
Team Udayavani, Mar 7, 2022, 6:18 PM IST
ಮಹಾಲಿಂಗಪುರ: ಪ್ರತಿಯೊಂದು ವಾಹನಗಳ ಸವಾರರು ಮತ್ತು ಪಾದಚಾರಿಗಳು ಕಡ್ಡಾಯವಾಗಿ ರಸ್ತೆ ನಿಯಮ ಪಾಲಿಸಿ, ಅಪಘಾತ ತಪ್ಪಿಸಬೇಕೆಂದು ಸ್ಥಳೀಯ ಪೊಲೀಸ್ ಠಾಣೆಯ ಎಎಸ್ಐ ಎಸ್.ಬಿ. ಹಿರೇಕುರುಬರ ಹೇಳಿದರು.
ರನ್ನಬೆಳಗಲಿ ಸರಹದ್ದಿನ ಢಪಳಾಪುರ ವಿದ್ಯಾವಿಹಾರ ಶಾಲೆಯ ಮಕ್ಕಳು ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಹಮ್ಮಿಕೊಂಡಿದ್ದ ರಸ್ತೆ ಸುರಕ್ಷತಾ ಜಾಗೃತಿ ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಾಹನ ಸವಾರರು ಅವಸರದ ಪ್ರಯಾಣ ಮತ್ತು ರಸ್ತೆ ನಿಯಮ ಪಾಲಿಸದೇ ಇರುವುದೇ ಅಪಘಾತಕ್ಕೆ ಕಾರಣವಾಗಿದೆ. ಢಪಳಾಪುರ ಶಾಲೆಯ ಮಕ್ಕಳು ಸುರಕ್ಷತಾ ಸಂದೇಶ ಸಾರುವ ಮನೋಜ್ಞ ಬೀದಿ ನಾಟಕ ಪ್ರದರ್ಶಿಸುವ ಮೂಲಕ ಸಂಚಾರಿಗಳಿಗೆ ಸಂಚಾರ ನಿಯಮಗಳ ಮನವರಿಕೆ ಮಾಡಿದ್ದು ಸ್ವಾಗತಾರ್ಹ ಎಂದರು.
ಹೆಲ್ಮೇಟ್ ಧರಿಸಿ ಜೀವ ಉಳಿಸಿ, ಶಾಲೆ ಹತ್ತಿರವಿದೆ ನಿಧಾನ ಚಲಿಸಿ, ರಸ್ತೆ ದಾಟುವಾಗ ಎಚ್ಚರ, ಸಂಚಾರ ನಿಯಮಗಳನ್ನು ಪಾಲಿಸಿ, ವಾಹನ ಭದ್ರತೆ, ಸುರಕ್ಷತೆಗೆ ಮೊದಲ ಆದ್ಯತೆ ಇರಲಿ ಎಂಬ ಹತ್ತಾರು ಘೊಷಣಾ ಫಲಕ ಪ್ರದರ್ಶಿಸಿದರು. ಅಪಘಾತ ಸ್ಥಳ ಮತ್ತು ದೃಶ್ಯಗಳ ಅಣಕು ಪ್ರದರ್ಶನ ಮಾಡಿ ಅರಿವು ಮೂಡಿಸಿದರು. ಬಾಲಕನೊಬ್ಬ ಟ್ರಾμಕ್ ಸಿಗ್ನಲ್ ಬಾಕ್ಸ್ ವೇಷದಲ್ಲಿ ಗಮನ ಸೆಳೆದನು.
ಪೊಲೀಸ್ ಸಿಬ್ಬಂದಿ ಮುಂದೆ ನಿಂತು ಭದ್ರತೆ ನೀಡಿ ಸಹಕರಿಸಿದರು. ಸಾರ್ವಜನಿಕರು ಮಕ್ಕಳ ಕಲೆ ಕಂಡು ಬೆರಗಾದರು. ನಂತರ ಮಕ್ಕಳು ಪೊಲೀಸ್ ಠಾಣೆಗೆ ತೆರಳಿ ಅಲ್ಲಿನ ಕಾರ್ಯ ಚಟುವಟಿಕೆಗಳ ಬಗ್ಗೆ ಠಾಣಾಧಿಕಾರಿಯೊಂದಿಗೆ ಸಮಾಲೋಚನೆ ನಡೆಸಿದರು. ಸಂಸ್ಥೆಯ ಸಂಚಾಲಕ ವಿವೇಕ ಢಪಳಾಪುರ ಪ್ರಾಂಶುಪಾಲ ರಾಜಕುಮಾರ, ಉಪಪ್ರಾಂಶುಪಾಲ ಜಪರ ಯರಗಟ್ಟಿ, ಕೋ ಆರ್ಡಿನೇಟರ್ ರಾಚಯ್ಯ ಹಿರೇಮಠ, ಅಶೋಕ ಪವಾರ, ಪ್ರಶಾಂತ ಬುಡರಕಟ್ಟಿ, ವೀರಯ್ಯ ಹಿರೇಮಠ, ಬಸಯ್ಯ ಅಂಬಿ, ಠಾಣಾಧಿ ಕಾರಿ ವಿಜಯ ಕಾಂಬಳೆ ಇದ್ದರು.