ಬಾಗಲಕೋಟೆ: ಕಾರು ಢಿಕ್ಕಿ ಹೊಡೆದು ಇಬ್ಬರು ವಿದ್ಯಾರ್ಥಿಗಳು ಸಾವು, ಮೂವರಿಗೆ ಗಾಯ; ಚಾಲಕ ಪರಾರಿ
Team Udayavani, May 25, 2022, 7:12 PM IST
ಬಾಗಲಕೋಟೆ: ಶಾಲೆ ಮುಗಿಸಿ ಮನೆಗೆ ಹೋಗುತ್ತಿದ್ದ ವಿದ್ಯಾರ್ಥಿಗಳಿಗೆ ಕಾರು ಢಿಕ್ಕಿ ಹೊಡೆದು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿ,ಮೂವರು ಗಾಯಗೊಂಡಿರುವ ಘಟನೆ ಹುನಗುಂದ ತಾಲೂಕಿನ ಕ್ಯಾದಿಗೇರಿ ಕ್ರಾಸ್ ನಲ್ಲಿ ಬುಧವಾರ ಸಂಜೆ (ಮಾ.25ರಂದು) ನಡೆದಿದೆ.
ನೇತ್ರಾವತಿ ರಗಟಿ (14) ,ಅಂಜಲಿ ಸೂಡಿ (14) ಮೃತ ವಿದ್ಯಾರ್ಥಿನಿಯರು ಎಂದು ತಿಳಿದು ಬಂದಿದೆ.
ಶಾಲೆ ಮುಗಿಸಿ ಐಹೊಳೆಯಿಂದ -ಚಿಲ್ಲಾಪುರಕ್ಕೆ ಮನೆಯ ಕಡೆ ವಿದ್ಯಾರ್ಥಿಗಳು ಬರುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಕಾರು ವಿದ್ಯಾರ್ಥಿಗಳಿಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಎಂಟನೇ ತರಗತಿ ವಿದ್ಯಾರ್ಥಿಗಳಿಬ್ಬರು ಮೃತಪಟ್ಟಿದ್ದು, ಇನ್ನು ಮೂವರಿಗೆ ಗಾಯಗಳಾಗಿವೆ. ಅವರನ್ನು ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ಸಂತೋಷ ಅಮರಿ ಎಂಬುವರ ಹೆಸರಲ್ಲಿ ಕಾರು ಇದ್ದು, ಕಾರು ಚಾಲಕ ಘಟನೆಯ ಬಳಿಕ ಪರಾರಿ ಆಗಿದ್ದಾನೆ. ಚಾಲಕ ಕುಡಿದ ಮತ್ತಿನಲ್ಲಿದ್ದ ಎನ್ನಲಾಗಿದೆ. ಅಮೀನಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.