ಗಣರಾಜ್ಯೋತ್ಸವ ಮಹತ್ವದ ಅರಿವಿಲ್ಲದಿರುವುದು ಬೇಸರ
Team Udayavani, Jan 27, 2017, 11:30 AM IST
ಬೆಂಗಳೂರು: “ದೇಶದ ಕಟ್ಟಕಡೆಯ ವ್ಯಕ್ತಿಗೂ ಅಭಿವ್ಯಕ್ತಿ ಮತ್ತು ವಾಕ್ ಸ್ವಾತಂತ್ರ್ಯ ತಂದುಕೊಟ್ಟ ಸಂವಿಧಾನ ಜಾರಿಗೆ ಬಂದಿರುವ ಗಣರಾಜ್ಯೋತ್ಸವದ ಕುರಿತು ಬಹುತೇಕ ಜನರಿಗೆ ಅರಿವೇ ಇಲ್ಲ,” ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.
ಗಣರಾಜ್ಯೋತ್ಸವದ ಅಂಗವಾಗಿ ಬೆಂಗಳೂರಿನ ರಾಜಾಜಿನಗರ ಬಡಾವಣೆಯಲ್ಲಿ ಗುರುವಾರ ಆಯೋಜಿಸಲಾಗಿದ್ದ “ದೇಶ ಮೊದಲು ಧ್ವಜ ಮಿಗಿಲು’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಸಂವಿಧಾನವೇ ನಮ್ಮ ದೇಶದ ಧರ್ಮಗ್ರಂಥ. ಸಂವಿಧಾನದ ಆಶಯವನ್ನು ಪಾಲಿಸಬೇಕಾಗಿರುವುದು ನಮ್ಮೆಲ್ಲರ ಆದ್ಯ ಕರ್ತವ್ಯ,” ಎಂದರು.
“ಇಂದು ಗಣರಾಜ್ಯೋತ್ಸವದ ಮಹತ್ವದ ಬಗ್ಗೆ ಬಹುತೇಕರಿಗೆ ಅರಿವಿಲ್ಲ. ಗಣರಾಜ್ಯೋತ್ಸವ ನಮಗೆ ಹೆಮ್ಮೆ ತರುವ ರಾಷ್ಟ್ರೀಯ ಹಬ್ಬ. ನಮ್ಮ ದೇಶದ ಜನ ಸಾಮಾನ್ಯರ ಹಕ್ಕುಗಳ ಬಗ್ಗೆ ಜಾಗೃತಿ ಉಂಟು ಮಾಡುವ ದಿನ. ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಇಂದು ಅಭಿವ್ಯಕ್ತಿ ಮತ್ತು ವಾಕ್ ಸ್ವಾತಂತ್ರ್ಯ ಇದ್ದರೆ ಅದಕ್ಕೆ ಸಂವಿಧಾನವೇ ಕಾರಣ. ಅದರ ದಿನಾಚರಣೆ ಬಗ್ಗೆ ಜನರಿಗೆ ಮಾಹಿತಿ ಇಲ್ಲದಾಗಿದೆ. ಗಣರಾಜ್ಯೋತ್ಸವ ದಿನ ಎಂದರೆ ಇದೊಂದು ರಜಾ ದಿನ ಎಂಬ ಭಾವನೆ ಬಂದಿದೆ,” ಎಂದು ವಿಷಾದ ವ್ಯಕ್ತಪಡಿಸಿದರು.
ಆರ್ಎಸ್ಎಸ್ ಕಾರ್ಯಕರ್ತ ಜಿ.ಆರ್.ಸಂತೋಷ್ ಅವರು ಬರೆದಿರುವ “ಧ್ವಜ ಎಂದರೆ ಬಟ್ಟೆಯಲ್ಲ’ ಎಂಬ ಕೃತಿಯ 3ನೇ ಆವೃತ್ತಿಯನ್ನು ಯಡಿಯೂರಪ್ಪ ಅವರು ಲೋಕಾರ್ಪಣೆ ಮಾಡಿದರು. ಸಂಗೀತಾ ಕಟ್ಟಿ ಸಂಗೀತ ನಿರ್ದೇಶನ ಮಾಡಿರುವ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಂದ ಪ್ರಶಂಸೆಗೆ ಪಾತ್ರವಾಗಿರುವ “ಜುಲೈ 22, 1947′ ಕನ್ನಡ ಚಲನಚಿತ್ರವನ್ನು ಈ ವೇಳೆ ಪ್ರದರ್ಶಿಸಲಾಯಿತು.