ಸಾಧಕರಿಗೆ ನಮ್ಮ ಬೆಂಗಳೂರು ಪ್ರತಿಷ್ಠಾನದ ಪ್ರಶಸ್ತಿ
Team Udayavani, Apr 28, 2019, 3:01 AM IST
ಬೆಂಗಳೂರು: ಸಮಾಜ ಸೇವೆ ಪರಿಕಲ್ಪನೆಯಡಿ ಬೆಂಗಳೂರಿನ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದ ಸಾಧಕರಿಗೆ ನಮ್ಮ ಬೆಂಗಳೂರು ಪ್ರತಿಷ್ಠಾನದಿಂದ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆದ 10ನೇ ವರ್ಷದ ನಮ್ಮ ಬೆಂಗಳೂರು ಪ್ರಶಸ್ತಿ ವಿತರಣೆ ಸಮಾರಂಭದಲ್ಲಿ ವರ್ಷದ ಸರ್ಕಾರಿ ಅಧಿಕಾರಿ ವಿಭಾಗದಲ್ಲಿ ರವಿಂದ್ರ ಕುಮಾರ್, ನಾಗರಿಕ ವಿಭಾಗದಲ್ಲಿ ಪಿ.ಎಲ್.ಉದಯ ಕುಮಾರ್, ಉದಯೋನ್ಮುಖ ತಾರೆ ವಿಭಾಗದಲ್ಲಿ ಮೇಘನಾ ಮೂರ್ತಿ, ಮಾಧ್ಯಮ ವಿಭಾಗದಲ್ಲಿ ಬಿ.ಆರ್.ರೋಹಿತ್, ಸಾಮಾಜಿಕ ಉದ್ಯಮಿ ವಿಭಾಗದಲ್ಲಿ ರಾಜೇಶ್ ಬಾಬು ಮತ್ತು ವಿಕ್ಟೋರಿಯಾ ಜೋಸ್ಲಿನ್ ಡಿ’ಸೋಜಾ ಪ್ರಶಸ್ತಿಗೆ ಭಾಜನರಾಗಿದ್ದು,
2019ನೇ ಸಾಲಿನ ನಮ್ಮ ಬೆಂಗಳೂರಿಗರಾಗಿ ಅಶೋಕ್ ಕಾಮತ್ ಹೊರಹೊಮ್ಮಿದ್ದಾರೆ.
ಈ ವರ್ಷ ವಿಶೇಷವಾಗಿ ಬೆಂಗಳೂರಿನ ಚಾಂಪಿಯನ್ಸ್ ವಿಭಾಗದಲ್ಲಿ 6 ಜನರನ್ನು ಗುರುತಿಸಿ ಪ್ರಶಸ್ತಿ ನೀಡಲಾಯಿತು. ಜನವರಿ ತಿಂಗಳಲ್ಲಿ ಜಿಕೆವಿಕೆ ಕ್ಯಾಂಪಸ್ನಲ್ಲಿ ಅನಾಥವಾಗಿ ಸಿಕ್ಕ ನವಜಾತ ಶಿಶುವಿಗೆ ಎದೆ ಹಾಲುಣಿಸಿ ಮಾನವೀಯತೆ ಮೆರೆದ ಯಲಹಂಕ ಪೋಲಿಸ್ ಠಾಣೆಯ ಮಹಿಳಾ ಪೊಲೀಸ್ ಪೇದೆ ಸಂಗೀತ ಎಸ್.ಹಲಿಮನಿ, ಏರೋ ಇಂಡಿಯಾದ ತರಬೇತಿಯಲ್ಲಿ ಪತನಗೊಂಡಿದ್ದ ಸೂರ್ಯಕಿರಣ್ ಪೈಲೆಟ್ಗಳಿಗೆ ಸಮಯೋಚಿತ ಆರೈಕೆ ನೀಡಿದ ಉದಯ್ಕುಮಾರ್, ಚೇತನ್ ಕುಮಾರ್, ಪ್ರಜ್ವಲ್, ಶಿವಕುಮಾರ್ ಮತ್ತು ತಂಡ, 200 ಪ್ರಾಣಿಗಳಿಗೆ ಆಶ್ರಯ ಕಲ್ಪಿಸಿರುವ ಚಾರ್ಲಿಸ್ ಅನಿಮಲ್ ರೆಸ್ಕೂ ಸೆಂಟರ್ನ ಸುಧಾ ನಾರಾಯಣರವರಿಗೆ ಬೆಂಗಳೂರಿನ ಚಾಂಪಿಯನ್ಸ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಳೆದ 10 ವರ್ಷಗಳಲ್ಲಿ 2.5 ಲಕ್ಷಕ್ಕೂ ಹೆಚ್ಚು ನಾಮನಿರ್ದೇಶನಗಳನ್ನು ಸ್ವೀಕರಿಸಿದ್ದು, ಇದುವರೆಗೂ 87 ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಈ ವರ್ಷ ಬಂದಿದ್ದ ಸಾವಿರಾರು ನಾಮನಿರ್ದೇಶನಗಳ ಪೈಕಿ 28 ಸಾಧಕರನ್ನು ಅಂತಿಮಗೊಳಿಸಲಾಗಿತ್ತು.
16 ಶ್ರೆಷ್ಠ ತೀರ್ಪುಗಾರರ ತಂಡವು 6 ವಿಭಾಗದಲ್ಲಿ ಪುರಸ್ಕೃತರನ್ನು ಆಯ್ಕೆ ಮಾಡಿದ್ದಾರೆ. ಮೈಕ್ರೋಲ್ಯಾಂಡ್ನ ಮುಖ್ಯಸ್ಥ ಪ್ರದೀಪ್ ಕರ್ ತೀರ್ಪುಗಾರರ ತಂಡದ ಅಧ್ಯಕ್ಷರಾಗಿದ್ದು, ನಟ ರಮೇಶ್ ಅರವಿಂದ್ ಪ್ರಶಸ್ತಿಗಳ ರಾಯಭಾರಿಗಳಾಗಿದ್ದರು. ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯರವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದರು.
ಮಾನ್ಯತೆ, ಪ್ರತಿಫಲ ಬಯಸದೆ ತೆರೆಯ ಹಿಂದೆಯೇ ಉಳಿದುಕೊಂಡು ನಗರದ ಏಳಿಗೆಗೆ ನಿಸ್ವಾರ್ಥ ಸೇವೆ ಸಲ್ಲಿಸುವ ಅನೇಕ ಸಾಧಕರು ನಮ್ಮ ಮಧ್ಯದಲ್ಲಿದ್ದಾರೆ. ಅಸಾಮಾನ್ಯವಾದದ್ದನ್ನು ಸಾಧಿಸುತ್ತಿರುವ ಇವರ ವೈಯಕ್ತಿಕ ಮತ್ತು ಸಾಮೂಹಿಕ ಪ್ರಯತ್ನ, ಬದ್ಧತೆ, ಕಠಿಣ ಪರಿಶ್ರಮ ಮತ್ತು ಸ್ವಯಂ ಸ್ಫೂರ್ತಿಯನ್ನು ಗುರುತಿಸಿ ಗೌರವಿಸಿ ಪ್ರೋತ್ಸಾಹಿಸುವ ಕಾರ್ಯವನ್ನು ನಮ್ಮ ಬೆಂಗಳೂರು ಪ್ರತಿಷ್ಠಾನ ಮಾಡುತ್ತಿದೆ.
-ಎನ್.ಆರ್.ಸುರೇಶ್, ವ್ಯವಸ್ಥಾಪಕ ಟ್ರಸ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ
Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ
Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ
CN Ashwath Narayan: ಕಾಂಗ್ರೆಸ್ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ
Bengaluru: ಅತಿಕ್ರಮಿಸಿ ಏರ್ಪೋರ್ಟ್ನಲ್ಲಿ ವಿಡಿಯೋ: ಯುಟ್ಯೂಬರ್ ಬಂಧನ