ಬೇಕೆಂದೇ ವಾಹನಗಳಿಗೆ ಢಿಕ್ಕಿ ಹೊಡೆದು ಸುಲಿಗೆ
Team Udayavani, Sep 17, 2022, 1:41 PM IST
ಬೆಂಗಳೂರು: ಅಮಾಯಕರನ್ನೇ ಗುರಿ ಯಾಗಿಸಿ ದ್ವಿಚಕ್ರವಾಹನದಲ್ಲಿ ಡಿಕ್ಕಿ ಹೊಡೆ ದು ತಮ್ಮ ವಾಹನದ ರಿಪೇರಿಗೆ ಹಣ ಕೊಡುವಂತೆ ಚೂರಿ ತೋರಿಸಿ ಬೆದರಿಸಿ ಮೊಬೈಲ್ ಸುಲಿಗೆ ಮಾಡುತ್ತಿದ್ದ ಇಬ್ಬರು ಖತರ್ನಾಕ್ ಕಳ್ಳರನ್ನು ವಿಲ್ಸನ್ ಗಾರ್ಡನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಶಿವಾಜಿನಗರದ ಮುಜುಮಿಲ್ ಹುಸೇನ್ (27), ಜೆ.ಸಿ.ನಗರದ ಫೈಜ್ ಹುಸೇನ್ (25) ಬಂಧಿತರು. ಆರೋಪಿ ಗಳಿಂದ 2.5 ಲಕ್ಷ ರೂ. ಮೌಲ್ಯದ 1 ದ್ವಿಚಕ್ರವಾಹನ, 11 ಮೊಬೈಲ್ಗಳನ್ನು ವಶ ಪಡಿಸಿಕೊಳ್ಳಲಾಗಿದೆ.
ವಿಲ್ಸನ್ ಗಾರ್ಡನ್ ವ್ಯಾಪ್ತಿಯಲ್ಲಿ ದ್ವಿಚಕ್ರವಾಹನದಲ್ಲಿ ಹೋಗುವ ಅಮಾಯಕರನ್ನು ಗುರಿಯಾಗಿಸುತ್ತಿದ್ದ ಆರೋಪಿ ಗಳು, ತಮ್ಮ ದ್ವಿಚಕ್ರವಾಹನದಲ್ಲಿ ಅವರನ್ನು ಹಿಂಬಾಲಿಕೊಂಡು ಹೋಗುತ್ತಿದ್ದರು. ನಂತರ ತಮ್ಮ ದ್ವಿಚಕ್ರವಾಹನವನ್ನು ಬೇಕೆಂದೇ ಅಮಾಯಕರ ದ್ವಿಚಕ್ರವಾಹನಕ್ಕೆ ಢಿಕ್ಕಿ ಹೊಡೆದು ರಿಪೇರಿಗೆ ಸಾವಿರಾರು ರೂ. ಹಣ ಕೊಡುವಂತೆ ಬೆದರಿಸುತ್ತಿದ್ದರು. ಹಣ ಕೊಡಲು ಒಪ್ಪದಿದ್ದರೆ ಚೂರಿ ತೋರಿಸಿ ಮೊಬೈಲ್ ಕಸಿದುಕೊಂಡು ಪರಾರಿಯಾಗುತ್ತಿದ್ದರು. ಇದಲ್ಲದೇ, ಮೊಬೈಲ್ನಲ್ಲಿ ಮಾತನಾಡಿಕೊಂಡು ಹೋಗುವ ಸಾರ್ವಜನಿಕರನ್ನು ಹಿಂಬಾಲಿಸಿಕೊಂಡು ಅವರ ಮೊಬೈಲ್ ಕಸಿದು ಪರಾರಿಯಾಗುತ್ತಿದ್ದರು. ಬಳಿಕೆ ಕಡಿಮೆ ಬೆಲೆಗೆ ಮಾರುತ್ತಿದ್ದರು.