ರಾಜ್ಯಕ್ಕೆ ಸಿಕ್ಕಷ್ಟು ಸಡಿಲಿಕೆ ಭಾಗ್ಯ ರಾಜಧಾನಿಗಿಲ್ಲ!
Team Udayavani, Apr 23, 2020, 12:10 PM IST
ಬೆಂಗಳೂರು: ಹೊಸ ಮಾರ್ಗಸೂಚಿಯಿಂದ ರಾಜ್ಯಾದ್ಯಂತ ಸುದೀರ್ಘ ಒಂದು ತಿಂಗಳ “ಗೃಹ ಬಂಧನ’ಕ್ಕೆ ತುಸು ಬಿಡುಗಡೆ ದೊರೆತಂತಾಗಿದೆ. ಆದರೆ, ಉಳಿದ ಜಿಲ್ಲೆಗಳಿಗೆ ಹೋಲಿಸಿದರೆ ರಾಜಧಾನಿ ಬೆಂಗಳೂರಿಗರಿಗೆ ನಿರೀಕ್ಷಿತ ಮಟ್ಟದ “ಸಡಿಲಿಕೆ’ ಭಾಗ್ಯ ಸಿಕ್ಕಿಲ್ಲ.
ಐಟಿ-ಬಿಟಿ ಕೇಂದ್ರವಾಗಿರುವುದರಿಂದ ಕನಿಷ್ಠ ಪ್ರಮಾಣದ ಸಿಬ್ಬಂದಿಯು ಕಚೇರಿಗೆ ತೆರಳಿ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗಿದೆ. ಲಭ್ಯವಿರುವ ಸ್ಥಳೀಯ ಕಾರ್ಮಿಕರೊಂದಿಗೆ ಮೆಟ್ರೋ ಕಾಮಗಾರಿ ಪುನಾರಂಭ ಮಾಡಲು ಅನುಮತಿ ನೀಡಲಾಗಿದೆ. ಅದೇ ರೀತಿ, ವಿವಿಧ ಇಲಾಖೆಗಳ ಸರ್ಕಾರಿ ನೌಕರರೂ ಕರ್ತವ್ಯಕ್ಕೆ ಹಾಜರಾಗಲು ಸೂಚಿಸಲಾಗಿದೆ. ಜತೆಗೆ ಕಟ್ಟಡ ಕಾಮಗಾರಿ ಪುನಾರಂಭ, ಕೃಷಿ ಮತ್ತು ತೋಟಗಾರಿಕೆ ಚಟುವಟಿಕೆಗಳು, ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ (ಎಂ-ನರೇಗ) ಅಡಿ ಕಾಮಗಾರಿಗಳು, ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕೆಗಳಿಗೆ ಲಾಕ್ಡೌನ್ನಿಂದ ಅಲ್ಪಮಟ್ಟಿಗೆ ಸಡಿಲಿಕೆ ನೀಡಲಾಗಿದ್ದು, ಬುಧವಾರದಿಂದ ಅವೆಲ್ಲವೂ ಕಾರ್ಯಾರಂಭ ಮಾಡಲಿವೆ. ಇವು ಯಾವುವೂ ನಗರಕ್ಕೆ ಅನ್ವಯ ಆಗುವುದಿಲ್ಲ!
ಹೇಗೆಂದರೆ, ನಗರದ ಹೊರವಲಯದಲ್ಲಿ ಮಾತ್ರ ಕಟ್ಟಡ ಕಾಮಗಾರಿ ಕೈಗೊಳ್ಳಲು ಸೂಚಿಸಲಾಗಿದೆ. ಅದೇ ರೀತಿ, ಕೃಷಿ-ತೋಟಗಾರಿಕೆ ಚಟುವಟಿಕೆಗಳು, ಎಂ-ನರೇಗ ಕಾಮಗಾರಿಗಳು ಬೆಂಗಳೂರಿನಲ್ಲಿ ಇಲ್ಲವೇ ಇಲ್ಲ. ಇದ್ದರೂ, ಹೊರವಲಯದಲ್ಲಿ ಕಾಣಬಹುದು. ಇನ್ನು ಇಲ್ಲಿನ ಬೀಜ, ರಸಗೊಬ್ಬರ ಮಾರಾಟಗಾರರಿಗೆ ಇದು ಅನುಕೂಲ ಆಗಲಿದೆ. ಆದರೆ, ಬೇಸಿಗೆ ಇರುವುದರಿಂದ ಪ್ರಸ್ತುತ ಕೃಷಿ ಚಟುವಟಿಕೆಗಳು ಈಗ ವಿರಳ. ಸಿದ್ಧ ಉಡುಪು ಕೈಗಾರಿಕೆಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅಲ್ಲಿ ಸಾಧ್ಯವಿಲ್ಲದಿರುವುದರಿಂದ ಅವಕಾಶ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಹೊರಗಿರುವವರಿಗೆ ಸಿಕ್ಕಷ್ಟು ಸಡಿಲಿಕೆ ಸಿಕ್ಕಿಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ.
19 ವಾರ್ಡ್ಗಳಿಗೆ ಅನ್ವಯವಿಲ್ಲ
ನಗರದಲ್ಲಿ 34 ವಾರ್ಡ್ಗಳು ಹಾಟ್ಸ್ಪಾಟ್ಗಳಾಗಿ ಗುರುತಿಸಿದ್ದು, ಈ ಪೈಕಿ 19 ಕಂಟೈನ್ಮೆಂಟ್ ಝೋನ್ (ನಿಯಂತ್ರಿತ ವಲಯ)ಗಳಾಗಿವೆ. ಸೀಲ್ಡೌನ್ಗೆ ಅನುಸರಿಸುವ ಎಲ್ಲ ನಿಯಮಗಳೂ ಈ ನಿಯಂತ್ರಿತ ವಲಯಕ್ಕೂ ಅನ್ವಯ ಆಗುತ್ತವೆ. ಹಾಗಾಗಿ, ಅಲ್ಲೆಲ್ಲಾ ಸರ್ಕಾರದ ಹೊಸ ಮಾರ್ಗಸೂಚಿ ಅನ್ವಯ ಆಗದು. ಅದರಂತೆ “ಬಿಡುಗಡೆ ಭಾಗ್ಯ’ಕ್ಕೆ ಆ ಭಾಗದ ಜನ ಮೇ 3ರವರೆಗೆ ಕಾಯುವುದು ಅನಿವಾರ್ಯ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್ ಕುಮಾರ್ ತಿಳಿಸಿದ್ದಾರೆ.