ಜೈಲಿನಿಂದಲೇ ಹತ್ಯೆಗೆ ರೌಡಿಶೀಟರ್ ಸಂಚು : ರೌಡಿ ತಂದೆ, ತಾಯಿ ಸೇರಿ 9 ಮಂದಿ ಸೆರೆ
Team Udayavani, Mar 20, 2022, 1:01 PM IST
ಬೆಂಗಳೂರು: ತನ್ನ ಪತ್ನಿ ಜತೆ ಸಲುಗೆ ಇಟ್ಟುಕೊಂಡಿದ್ದಾನೆ ಎಂಬ ಅನುಮಾನದಲ್ಲಿ ಜೈಲಿನಿಂದಲೇ ಆಟೋ ಚಾಲಕನ ಕೊಲೆಗೆ ಸಂಚು ರೂಪಿಸಿದ ರೌಡಿಶೀಟರ್ನ ಸಂಚು ಭೇದಿಸಿರುವ ಸಿಸಿಬಿ ಪೊಲೀಸರು, ರೌಡಿಯ ತಂದೆ-ತಾಯಿ, ಸಹೋದರ ಸೇರಿ 9 ಮಂದಿಯನ್ನು ಬಂಧಿಸಿದ್ದಾರೆ.
ಲಗ್ಗೆರೆ ನಿವಾಸಿಗಳಾದ ಸವಿತಾ (56), ಅವರ ಪತಿ ಸತೀಶ್(60), ಪುತ್ರ ವಿನಯ್ (23) ಹಾಗೂ ಸಹಚರರಾದ ರಾಘವೇಂದ್ರ, ಬಾಲರಾಜ್, ನವೀನ್, ಹರೀಶ್, ದರ್ಶನ್, ಅಜಯ್ ಬಂಧಿತರು.
ಮಹಾಲಕ್ಷ್ಮೀ ಲೇಔಟ್ ಠಾಣೆ ರೌಡಿಶೀಟರ್ ಮಣಿ, ಜೈಲಿನಿಂದಲೇ ಆಟೋ ಚಾಲಕ ನಂದಿನಿ ಲೇಔಟ್ನ ಜೈಮಾರುತಿನಗರ ನಿವಾಸಿ ಗಿರೀಶ್ ಹತ್ಯೆಗೆ ಸಂಚು ರೂಪಿಸಿದ್ದ. ಈತನ ಸೂಚನೆ
ಮೇರೆಗೆ ಮಾ.17ರಂದು ರಾತ್ರಿ 10 ಗಂಟೆ ಸುಮಾರಿಗೆ ನಂದಿನಿಲೇಔಟ್ ನಿವಾಸಿ ಜೈಮಾರುತಿನಗರ ನಿವಾಸಿ, ಆಟೋ ಚಾಲಕ ಗಿರೀಶ್ನನ್ನು ಯಶವಂತಪುರ ಆಟೋ ನಿಲ್ದಾಣದಲ್ಲಿ ಅಪಹರಿಸಿದ್ದರು.
ನಂತರ ಲಗ್ಗೆರೆಯಲ್ಲಿರುವ ಮಣಿಯ ಸ್ನೇಹಿತನ ಗ್ಯಾರೆಜ್ನಲ್ಲಿ ಕೈ,ಕಾಲು ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿಸಿದ್ದರು. ನಂತರ ಲಗ್ಗೆರೆಯಲ್ಲಿರುವ ಮನೆ ಯಲ್ಲಿ ಕೂಡಿ ಹಾಕಿದ್ದರು. ಮರು ದಿನ ಮೈಸೂರಿಗೆ ಕರೆದೊಯ್ದು ಹತ್ಯೆಗೈದು, ಮೃತದೇಹ ಎಸೆಯಲು ಸಿದ್ಧತೆ ನಡೆಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದರು.
ಇದನ್ನೂ ಓದಿ :ರಂಗಭೂಮಿ ಕಲಾವಿದೆ ಮೇಲೆ ಆ್ಯಸಿಡ್ ದಾಳಿ : ಮನೆಯಲ್ಲಿ ರಾತ್ರಿ ಮಲಗಿದ್ದ ವೇಳೆ ನಡೆಯಿತು ಕೃತ್ಯ
2017ರಲ್ಲಿ ಆ್ಯಂಡ್ರೋಸ್ ಎಂಬಾತನ ಕೊಲೆ ಪ್ರಕರಣದಲ್ಲಿ ರೌಡಿಶೀಟರ್ ಮಣಿ, ಆತನ ಸಹೋದರ ವಿನಯ್, ರಾಕೇಶ್, ರಾಜಶೇಖರ್ ಸೇರಿ 6 ಮಂದಿ ಜೈಲು ಸೇರಿದ್ದರು. ಬಂಧನದ ವೇಳೆ
ವಿನಯ್ ಅಪ್ರಾಪ್ತನಾಗಿದ್ದರಿಂದ ಜಾಮೀನು ಸಿಕ್ಕಿತ್ತು. ಮಣಿಗೆ ಮದುವೆಯಾಗಿದ್ದು, ಎಂಟು ವರ್ಷದ ಮಗಳು ಇದ್ದಾಳೆ. ಪತ್ನಿ ಪ್ರತ್ಯೇಕವಾಗಿ ವಾಸವಾಗಿದ್ದು, ಗಾರ್ಮೆಂಟ್ಸ್ ಕೆಲಸಕ್ಕೆ ಹೋಗುತ್ತಾರೆ. ಈ ಮಧ್ಯೆ ಆಕೆಗೆ ಗಿರೀಶ್ ಪರಿಚಯವಾಗಿ, ನಿತ್ಯ ಆಟೋದಲ್ಲಿ ಕೆಲಸಕ್ಕೆ ಕರೆದುಕೊಂಡು ಹೋಗುತ್ತಿದ್ದ. ಹೀಗಾಗಿ ಇಬ್ಬರ ನಡುವೆ ಆತ್ಮೀಯತೆ ಇತ್ತು ಎಂದು ಹೇಳಲಾಗಿದೆ.
ಈ ವಿಚಾರ ತಿಳಿದು ಮಣಿ, ಜೈಲಿನಿಂದಲೇ ಸಹೋದರ ವಿನಯ್ ಹಾಗೂ ತನ್ನ ಸಹಚರರಿಗೆ ಮಾಹಿತಿ ನೀಡಿ, ಗಿರೀಶ್ ಹತ್ಯೆಗೆ ಸೂಚಿಸಿದ್ದ. ಕೃತ್ಯಕ್ಕೆ ಮಣಿ ತಾಯಿ ಸವಿತಾ, ತಂದೆ ಸತೀಶ್ ಸಹಕಾರ ನೀಡಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಗಿರೀಶ್ನನ್ನು ತಮ್ಮ ಮನೆಯಲ್ಲಿ ಇರಿಸುಕೊಂಡು ಮರು ದಿನ ಮೈಸೂರಿಗೆ ಕಳುಹಿಸಲು ಸಿದ್ಧತೆ ನಡೆಸಿದ್ದರು.
ಈ ಮಾಹಿತಿ ಮೇರೆಗೆ ಬಂಧಿಸಲಾಗಿದೆ ಎಂದು ಸಿಸಿಬಿ ಪೊಲೀಸರು ಹೇಳಿದರು.