ಮುಂದಿನ 25 ವರ್ಷದಲ್ಲಿ ರಾಜ್ಯಕ್ಕೆ ಜಾಗತಿಕ ಪ್ರತಿಷ್ಠೆ: ಸಚಿವ ಅಶ್ವತ್ಥ ನಾರಾಯಣ
Team Udayavani, Jun 26, 2022, 9:16 PM IST
ಬೆಂಗಳೂರು : ಮುಂದಿನ 25 ವರ್ಷಗಳಲ್ಲಿ ಕರ್ನಾಟಕವು ಪರಿಪೂರ್ಣ ವಿಕಸನ ಕಾಣಲಿದ್ದು, ಜಾಗತಿಕ ಮಟ್ಟದಲ್ಲಿ ಪ್ರತಿಷ್ಠಿತ ಸ್ಥಾನಮಾನ ಗಳಿಸಲಿದೆ. ಇದಕ್ಕೆ ಶೃಂಗೇರಿ ಶಾರದಾ ಪೀಠದ ಹಿರಿಯ ಮತ್ತು ಕಿರಿಯ ಶ್ರೀಗಳ ಸಂಪೂರ್ಣ ಆಶೀರ್ವಾದ ಮತ್ತು ಮಾರ್ಗದರ್ಶನ ಇದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಹೇಳಿದ್ದಾರೆ.
ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿರುವ ದಕ್ಷಿಣಾಮ್ನಾಯ ಶ್ರೀ ಶೃಂಗೇರಿ ಪೀಠದ ಕಿರಿಯ ಶ್ರೀಗಳಾದ ವಿಧುಶೇಖರ ಭಾರತಿ ಸ್ವಾಮಿಗಳಿಗೆ ಭಾನುವಾರ ಇಲ್ಲಿ ಏರ್ಪಡಿಸಿದ್ದ ಗುರು ವಂದನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಾರದಾ ಪೀಠವು ಆದಿಶಂಕರಾಚಾರ್ಯರ ಅದ್ವೈತ ಪರಂಪರೆಗೆ ನೇರವಾಗಿ ಸೇರಿದೆ. ಇಲ್ಲಿಯ ಗುರುಗಳು ತಮ್ಮ ಆಧ್ಯಾತ್ಮಿಕ ಅರಿವಿನ ಬಲದಿಂದ ದೇಶದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ನೀಡುತ್ತ ಬಂದಿದ್ದಾರೆ ಎಂದು ಅವರು ಬಣ್ಣಿಸಿದರು.
ಶಂಕರಾಚಾರ್ಯರ ಪರಂಪರೆಯು ಬಮ್ಮ ಸನಾತನ ಧರ್ಮ ಮತ್ತು ಸಂಸ್ಕೃತಿಯನ್ನು ಉಳಿಸಿಕೊಂಡು ಬರುವಲ್ಲಿ ನಿರ್ಣಾಯಕ ಪಾತ್ರ ವಹಿಸಿಕೊಂಡು ಬಂದಿದೆ ಎಂದು ಅವರು ನುಡಿದರು.
ಬಿಜೆಪಿ ಸರಕಾರವು ದೇಶದ ಧರ್ಮ ಮತ್ತು ಸಂಸ್ಕೃತಿಗಳ ರಕ್ಷಣೆಗೆ ಕಟಿಬದ್ಧವಾಗಿ ದುಡಿಯುತ್ತಿದೆ. ಇದಕ್ಕಾಗಿ ನಾವೆಲ್ಲರೂ ಸಮರ್ಪಣಾ ಭಾವದಿಂದ ದುಡಿಯಲು ಸಿದ್ಧರಾಗಿದ್ದೇವೆ ಎಂದು ಅವರು ತಿಳಿಸಿದರು.
ಪರಕೀಯರ ಆಳ್ವಿಕೆ ಮತ್ತು ಆಕ್ರಮಣಗಳು ಎದುರಾದಾಗಲೂ ಆತಂಕಕ್ಕೆ ಒಳಗಾಗದೆ, ಧರ್ಮ ಸಂರಕ್ಷಣೆ ಮಾಡಿದ ಶ್ರೇಯಸ್ಸು ಶೃಂಗೇರಿ ಪೀಠದ್ದಾಗಿದೆ ಎಂದು ಅಶ್ವತ್ಥ ನಾರಾಯಣ ಹೇಳಿದರು.
ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಭಾರತೀಯ ವಿದ್ಯೆಗಳನ್ನು ಕಲಿಸಲು ಒತ್ತು ಕೊಡಲಾಗಿದೆ. ಇದರಿಂದ ಮುಂಬರುವ ತಲೆಮಾರುಗಳಲ್ಲಿ ಸಾಂಸ್ಕೃತಿಕ ಮನ್ವಂತರವೇ ಸೃಷ್ಟಿ ಆಗಲಿದೆ ಎಂದು ಸಚಿವರು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮದಲ್ಲಿ ಶೃಂಗೇರಿ ಕಿರಿಯ ಶ್ರೀಗಳಾದ ವಿಧುಶೇಖರ ಭಾರತಿ ಸ್ವಾಮಿಗಳು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಇದನ್ನೂ ಓದಿ : ಚಾರ್ಮಾಡಿ ಘಾಟ್ ನಲ್ಲಿ ರಸ್ತೆ ಮಧ್ಯೆಯೇ ಪ್ರವಾಸಿಗರ ಸೆಲ್ಪಿ : ವಾಹನ ಸವಾರಿಗೆ ತೊಂದರೆ