ಕಡತದ ಬೆಂಕಿ ಹಿಂದೆ ಬಿಲ್ಡರ್ಗಳ ಕೈವಾಡ?
Team Udayavani, May 5, 2019, 3:10 AM IST
ಬೆಂಗಳೂರು: ಬಿಬಿಎಂಪಿಯಲ್ಲಿ ನಡೆದಿರುವ ಟಿಡಿಆರ್ ಹಗರಣ ಬಿಚ್ಚಿಕೊಳ್ಳುತ್ತಲೇ ಇದ್ದು, ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಹಗರಣದಲ್ಲಿ ಪ್ರತಿಷ್ಠಿತ ಕಟ್ಟಡ ನಿರ್ಮಾಣ ಸಂಸ್ಥೆಗಳ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ.
ತನಿಖೆ ಪ್ರಗತಿಯಲ್ಲಿರುವಾಗಲೇ ಎಸಿಬಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದ ಬೆಳ್ಳಂದೂರು ಬಿಬಿಎಂಪಿ ಕಚೇರಿಯ ಎಂಜಿನಿಯರಿಂಗ್ ಕೊಠಡಿಯಲ್ಲಿ ಶುಕ್ರವಾರ ಬೆಳಗ್ಗೆ ಬೆಂಕಿ ಅವಘಡ ಸಂಭವಿಸಿತ್ತು. ಈ ವೇಳೆ ಹಲವು ಮಹತ್ವ ಕತಡಗಳು ಸುಟ್ಟು ಕರಕಲಾಗಿದ್ದು, ಹಗರಣಕ್ಕೆ ಸಂಬಂಧಿಸಿದ ಕಡತಗಳನ್ನು ನಾಶಪಡಿಸುವ ಪ್ರಯತ್ನ ನಡೆಯುತ್ತಿದೆಯೇ ಎಂಬ ಸಂಶಯ ಮೂಡಿಸಿದೆ.
ಇತ್ತೀಚೆಗೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬಿಡಿಎ ಅಧಿಕಾರಿ ಕೃಷ್ಣಲಾಲ್ ಎಂಬುವರ ಮನೆ ಮೇಲೆ ದಾಳಿ ನಡೆಸಿದಾಗ ಟಿಡಿಆರ್ ಹಗರಣಕ್ಕೆ ಸಂಬಂಧಿಸಿದ ಹಲವು ಮಹತ್ವದ ದಾಖಲೆಗಳು ಸಿಕ್ಕಿದ್ದವು. ಜತೆಗೆ ಮಹದೇವಪುರ ವಲಯದ ಹಲವು ಕಚೇರಿಗಳಲ್ಲಿ ಎಸಿಬಿ ತಂಡ ಪರಿಶೀಲನೆ ನಡೆಸಿ ಕೆಲವೊಂದು ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿತ್ತು.
ಅದರ ನಡುವೆಯೇ ಶನಿವಾರವೂ ದಾಳಿ ಮುಂದುವರಿಸಿರುವ ಎಸಿಬಿ ಅಧಿಕಾರಿಗಳು, ವಾಲ್ಮಾರ್ಕ್ ಸಂಸ್ಥೆಯ ಪ್ರತಿನಿಧಿಗಳ ಮೇಲೆ ದಾಳಿ ನಡೆಸಿ ಟಿಡಿಆರ್ಗೆ ಸಂಬಂಧಿದ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಟಿಡಿಆರ್ ಹೆಸರಿನಲ್ಲಿ ಸಾವಿರಾರು ಕೋಟಿ ರೂ.ಗಳ ಅವ್ಯವಹಾರ ನಡೆದಿದೆಯೇ ಎಂಬ ಅನುಮಾನಗಳು ಕಾಡತೊಡಗಿವೆ.
ಅತಿ ಹೆಚ್ಚಿನ ಸಂಖ್ಯೆಯ ಮಾಹಿತಿ ತಂತ್ರಜ್ಞಾನ ಕಂಪನಿಗಳು ಮಹದೇವಪುರ ವಲಯದಲ್ಲಿದ್ದು, ಸುತ್ತಮುತ್ತಲಿನ ವಾರ್ಡ್ಗಳು ವೇಗವಾಗಿ ಬೆಳೆಯುತ್ತಿವೆ. ಇದರಿಂದಾಗಿ ಈ ಭಾಗದಲ್ಲಿ ಅಪಾರ್ಟ್ಮೆಂಟ್ ಹಾಗೂ ವಿಲ್ಲಾಗಳಿಗೆ ಭಾರಿ ಬೇಡಿಕೆಯಿದೆ. ಆ ಹಿನ್ನೆಲೆಯಲ್ಲಿ ರಸ್ತೆ ವಿಸ್ತರಣೆ ವೇಳೆ ಪಾಲಿಕೆಯಿಂದ ನೀಡುವ ಟಿಡಿಆರ್ನ್ನು ಕಟ್ಟಡ ನಿರ್ಮಾಣ ಸಂಸ್ಥೆಗಳು ಪಡೆದು ಬೃಹತ್ ಕಟ್ಟಡಗಳನ್ನು ನಿರ್ಮಿಸುತ್ತಿವೆ ಎಂಬ ಆರೋಪಗಳಿವೆ.
ಟಿಡಿಆರ್ ಕಡತಗಳು ಇರಲಿಲ್ಲ – ಜಂಟಿ ಆಯುಕ್ತರ ವರದಿ: ಬೆಳ್ಳಂದೂರು ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಅವರ ಕೊಠಡಿಯಲ್ಲಿ ಶುಕ್ರವಾರ ಫಾಲ್ಸೀಲಿಂಗ್ ಹೊತ್ತಿ ಉರಿದು ಬೆಂಕಿ ಅವಘಡ ಸಂಭವಿಸಿದೆ. ಕೊಠಡಿಯಲ್ಲಿ ಹೊಸದಾಗಿ ಖರೀದಿಸಿದ್ದ ಪೀರೋಪಕರಣಗಳು ಟೇಬಲ್ಫ್ಯಾನ್ ಮತ್ತು ಟೇಬಲ್ ಮೇಲೆ ಇರಿಸಲಾಗಿದ್ದ ಸುಮಾರು 15-20 ಕತಡಗಳು ಹಾಗೂ ರ್ಯಾಕ್ನಲ್ಲಿ ಜೋಡಿಸಿದ್ದ ಹಲವು ಕಡತಗಳು ಉರಿದುಹೋಗಿವೆ.
ಕೊಠಡಿಯಲ್ಲಿ ಮಂಜೂರಾದ ನಕ್ಷೆಗಳ ಕಡತಗಳು, ಕೋರ್ಟ್ ಕಚೇರಿಗೆ ಸಂಬಂಧಿಸಿದ ಹಾಗೂ ಲೋಕಾಯುಕ್ತ ಕಚೇರಿಗೆ ಸಂಬಂಧಿಸಿ ವರದಿಗಳ ಕಡತಗಳು ಮತ್ತು ಆರ್ಟಿಐಗೆ ಸಂಬಂಧಿಸಿದ ಕತಡಗಳನ್ನು ಮಾತ್ರ ಇರಿಸಲಾಗಿದ್ದು, ಟಿಡಿಆರ್ಗೆ ಸಂಬಂಧಿಸಿದ ಯಾವುದೇ ಕಡತಗಳು ಕಚೇರಿಯಲ್ಲಿ ಇರಲಿಲ್ಲ ಎಂದು ಮಹದೇವಪುರ ವಲಯ ಜಂಟಿ ಆಯುಕ್ತರಾದ ಶೋಭಾ, ಬಿಬಿಎಂಪಿ ಆಯುಕ್ತರಿಗೆ ಶನಿವಾರ ವರದಿ ಸಲ್ಲಿಸಿದ್ದಾರೆ.
ಕಡತಕ್ಕೆ ಬೆಂಕಿ ಕುರಿತು ಪ್ರತ್ಯೇಕ ತನಿಖೆ: ಮಹದೇವಪುರ ವಲಯದ ಬೆಳ್ಳಂದೂರು ಉಪ ವಿಭಾಗದ ಎಂಜಿನಿಯರಿಂಗ್ ಕಚೇರಿಗೆ ಬೆಂಕಿ ಬಿದ್ದಿರುವ ಪ್ರಕರಣ ಸಂಬಂಧ ಬಿಬಿಎಂಪಿ ಆಯುಕ್ತರ ಜತೆ ಚರ್ಚಿಸಿ ಕಡತಗಳಿಗೆ ಹೆಚ್ಚಿನ ಭದ್ರತೆ ನೀಡುವಂತೆ ಸೂಚಿಸಲಾಗಿದೆ. ಹಾಗೇ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಪ್ರತ್ಯೇಕವಾಗಿ ಎಸಿಬಿ ತನಿಖೆ ನಡೆಸಲಿದೆ. ಮತ್ತೂಂದೆಡೆ ನಾಪತ್ತೆಯಾಗಿರುವ ಪ್ರಕರಣದ ಪ್ರಮುಖ ಆರೋಪಿ ಕೃಷ್ಣಲಾಲ್ ಪತ್ತೆಗೆ ಎರಡು ವಿಶೇಷ ತಂಡ ರಚಿಸಲಾಗಿದೆ ಎಂದು ಎಸಿಬಿ ಐಜಿಪಿ ಎಂ.ಚಂದ್ರಶೇಖರ್ ಮಾಹಿತಿ ನೀಡಿದ್ದಾರೆ.
ವಾಲ್ಮಾರ್ಕ್ ಕಂಪನಿ ಮೇಲೆ ಎಸಿಬಿ ದಾಳಿ:ಬಿಬಿಎಂಪಿಯಲ್ಲಿ ನಡೆದಿದೆ ಎನ್ನಲಾದ ಅಭಿವೃದ್ಧಿ ಹಕ್ಕು ವರ್ಗಾವಣೆ (ಟಿಡಿಆರ್) ಅವ್ಯವಹಾರ ಕುರಿತು ಇತ್ತೀಚೆಗೆ ಬಿಡಿಎ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕೃಷ್ಣಲಾಲ್ ಮೇಲಿನ ದಾಳಿಗೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು, ಶನಿವಾರ ನಗರದ ಪ್ರತಿಷ್ಠಿತ ವಾಲ್ಮಾರ್ಕ್ ಕಂಪನಿ ಮತ್ತು ಅದರ ನಿರ್ದೇಶಕರು ಹಾಗೂ ಸಿಬ್ಬಂದಿ ಇದ್ದ ಸ್ಥಳ ಸೇರಿ ಐದು ಕಡೆ ದಾಳಿ ನಡೆಸಿದ್ದಾರೆ.
ಮುಂಜಾನೆ ಐದು ಗಂಟೆ ಸುಮಾರಿಗೆ ಎಸಿಬಿಯ ಐದು ವಿಶೇಷ ತಂಡಗಳು ರೆಸಿಡೆನ್ಸಿ ರಸ್ತೆಯಲ್ಲಿರುವ ವಾಲ್ಮಾರ್ಕ್ ರಿಯಾಲಿಟಿ ಹೋಲ್ಡಿಂಗ್ ಪ್ರೈ.ಲಿ ಸಂಸ್ಥೆಯ ಕಚೇರಿ, ಹಳೇ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಕಂಪನಿಯ ನಿರ್ದೇಶಕ ರತನ್ ಬಾಬುಲಾಲ್ ಲಾಥ್ ಅವರ ನಿವಾಸ, ಕಂಪನಿ ಸಿಬ್ಬಂದಿ ಅಮಿತ್ ಜೆ. ಬೋಳಾರ್ ಅವರ ಇಂದಿರಾನಗರದ ಮನೆ,
ಹೊರಮಾವುನ ಕಲ್ಕೆರೆ ಮಖ್ಯರಸ್ತೆಯಲ್ಲಿರುವ ಕೆ.ಗೌತಮ್ ಅವರ ಮನೆ ಹಾಗೂ ಮುನಿರಾಜಪ್ಪ ಅವರ ನಿವಾಸಗಳ ಮೇಲೆ ದಾಳಿ ನಡೆಸಿದ್ದು, ಅವ್ಯವಹಾರಕ್ಕೆ ಸಂಬಂಧಿಸಿದಂತೆ ಕೆಲ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದೆ. ಅಲ್ಲದೆ, ಹಗರಣದಲ್ಲಿ ವಾಲ್ಮಾರ್ಕ್ ಕಂಪನಿಯ ನಿರ್ದೇಶಕರು ಸೇರಿ ಕೆಲ ಸಿಬ್ಬಂದಿ ಹಗರಣದಲ್ಲಿ ಭಾಗಿಯಾಗಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ದಾಳಿ ಸಂದರ್ಭದಲ್ಲಿ ವಾಲ್ಮಾರ್ಕ್ ಕಂಪನಿಯ ಕಂಪ್ಯೂಟರ್ನಲ್ಲಿದ್ದ ಕೆಲ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ ಹಾಗೂ ದಾಳಿಗೊಳಗಾದ ವ್ಯಕ್ತಿಗಳ ಮನೆಗಳಲ್ಲಿ ಟಿಡಿಆರ್ ದಾಖಲೆಗಳು ಪತ್ತೆಯಾಗಿವೆ. ವಾಲ್ಮಾರ್ಕ್ ಕಂಪನಿಯಿಂದ ವ್ಯವಹರಿಸಲಾದ ಎಲ್ಲ ಟಿಡಿಆರ್ಗೂ ಕಂಪನಿ ನೌಕರ ಅಮೀತ್ ಜೆ.ಬೋಳಾರ್ ಅಧಿಕೃತ ಸಹಿ ಹಾಕಿದ್ದಾರೆ ಎಂದು ಎಸಿಬಿ ತಿಳಿಸಿದೆ.
ಇದೇ ಹಗರಣಕ್ಕೆ ಸಂಬಂಧಿಸಿದಂತೆ ಇದುವರೆಗೂ ಎಂಟಕ್ಕೂ ಹೆಚ್ಚು ಆರೋಪಿತ ವ್ಯಕ್ತಿಗಳ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಲಾಗಿದ್ದು, ಕೆಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದುವರೆಗೂ ನಡೆಸಿರುವ ದಾಳಿಯಲ್ಲಿ 20ಕ್ಕೂ ಹೆಚ್ಚು ಡಿಆರ್ಸಿ ದಾಖಲೆಗಳು ಪತ್ತೆಯಾಗಿವೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ
MUST WATCH
ಹೊಸ ಸೇರ್ಪಡೆ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ