ಬಾಲಕಿ ಅಪಹರಿಸಿ, ರಸ್ತೆ ಮಧ್ಯೆ ಬಿಟ್ಟು ಹೋದ್ರು!
Team Udayavani, Feb 18, 2017, 12:05 PM IST
ಬೆಂಗಳೂರು: ಬೈಕ್ನಲ್ಲಿ ಬಂದಿದ್ದ ದುಷ್ಕರ್ಮಿಗಳಿಬ್ಬರು ಪರಿಚಿತರು ಎಂದು ಹೇಳಿಕೊಂಡು ಬಾಲಕಿಯನ್ನು ಅಪಹರಿಸಿ ಕೊಲೆಗೆ ಯತ್ನಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಶಿವಾಜಿನಗರ ನಿವಾಸಿ ಅಬ್ದುಲ್ ಎಂಬುವರ 10 ವರ್ಷದ ಪುತ್ರಿಯನ್ನು ಆರೋಪಿಗಳು ಅಪಹರಿಸಿ ಕೊಲೆಗೆ ಯತ್ನಿಸಿದ್ದಾರೆ. ಬಾಲಕಿ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯವಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಹೆಬ್ಟಾಳ ಠಾಣೆಯಲ್ಲಿ ಅಪಹರಣ, ಹಲ್ಲೆ ಪ್ರಕರಣ ದಾಖಲಾಗಿದೆ. ಅಬ್ದುಲ್ ಅವರು ಕಲ್ಯಾಣ ನಗರದ ಬಟ್ಟೆ ಅಂಗಡಿ ವ್ಯಾಪಾರಿಯಾಗಿದ್ದಾರೆ. ಫೆ.15 ರಂದು ರಾತ್ರಿ 8.30ರ ಸುಮಾರಿಗೆ ಬಾಲಕಿಗೆ ಶಿವಾಜಿನಗರದಲ್ಲೆ ಇರುವ ತನ್ನ ಸ್ನೇಹಿತೆಯ ಮನೆಗೆ ಶಾಲೆಯ ನೋಟ್ಸ್ ತರಲು ತೆರಳುತ್ತಿದ್ದಳು. ಈ ವೇಳೆ ರಸ್ತೆಯಲ್ಲಿ ಬಾಲಕಿಗೆ ಎದುರಾದ ಆರೋಪಿಗಳು ನಿಮ್ಮ ತಂದೆ ಪರಿಚಯವಿರುವವರು ಎಂದು ಹೇಳಿಕೊಂಡಿದ್ದಾರೆ.
ಬಳಿಕ ಆಕೆಯನ್ನು ಪುಸಲಾಯಿಸಿ ಬೈಕ್ನಲ್ಲಿ ಕರೆದುಕೊಂಡು ಹೋಗಿದ್ದಾರೆ. ಹೆಬ್ಟಾಳದ ಬಳಿ ಬಾಲಕಿಯ ಕತ್ತು ಹಿಸುಕಿ ದುಷ್ಕರ್ಮಿಗಳು ಕೊಲೆಗೆ ಯತ್ನಿಸಿದ್ದಾರೆ. ಬಳಿಕ ಬಾಲಕಿಯನ್ನು ಹೆಬ್ಟಾಳದ ಭುವನೇಶ್ವರಿ ನಗರದ ಬಳಿ ಬಿಟ್ಟು ಪರಾರಿಯಾಗಿದ್ದರು.
ಸ್ಥಳೀಯರು ಬಾಲಕಿಯನ್ನು ಕಂಡು ಪೊಲೀಸರಿಗೆ ವಿಷಯ ಮುಟ್ಟಿಸಿ, ಆಸ್ಪತ್ರೆಗೆ ಸೇರಿಸಿದ್ದರು. ಯಾವ ಕಾರಣಕ್ಕೆ ಯುವತಿಯನ್ನು ಅಪಹರಿಸಿದ್ದರು. ಕೊಲೆಗೆ ಯತ್ನಿಸಿದ್ದು, ನಿಜನಾ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಆಕೆಯಿಂದ ಹೇಳಿಕೆ ಪಡೆದು ಆರೋಪಿಗಳನ್ನು ಪತ್ತೆ ಹಚ್ಚಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.