Maheshwari Nagar ಯುವತಿ ಕೊಲೆ; ಕೆಲವೇ ಗಂಟೆಯಲ್ಲಿ ಆರೋಪಿ ಪತ್ತೆ
ರೇಪ್ ಯತ್ನ... ಪಾದ ಕೊಟ್ಟ ಸಾಕ್ಷಿ... ಮಹದೇವಪುರ ಪೊಲೀಸರ ಕಾರ್ಯಾಚರಣೆ
Team Udayavani, Aug 12, 2023, 9:00 PM IST
ಮಹದೇವಪುರ : ಮಹೇಶ್ವರಿ ನಗರದಲ್ಲಿ ನಡೆದಿದ್ದ ಮಹಾನಂದ ಎಂಬ ಯುವತಿ ಕೊಲೆ ಪ್ರಕರಣದ ಆರೋಪಿಯನ್ನು ಮಹದೇವಪುರ ಪೊಲೀಸರು ಕೆಲವೇ ಗಂಟೆಯಲ್ಲಿ ಪತ್ತೆ ಮಾಡಿದ್ದಾರೆ.
ಮೃತದೇಹದ ಪಾದ ಕೊಟ್ಟ ಸಾಕ್ಷಿಯಿಂದ ಹಾಗೂ ಪಕ್ಕದ ಮನೆ ಮಗುವಿನ ಹೇಳಿಕೆಯಿಂದ ಆರೋಪಿ ಕೃಷ್ಣ ಚಂದ ಸೇತಿಯನ್ನು ಬಂಧಿಸಿದ್ದಾರೆ.
ಕೊಲೆ ಮಾಡಿ ಬಳಿಕ ದೇಹವನ್ನು ಡ್ರಮ್ ವೊಂದರಲ್ಲಿ ಇಟ್ಟು ಬೆಳಗ್ಗೆ ಐದು ಗಂಟೆ ಸುಮಾರಿಗೆ ಮನೆ ಮುಂದೆ ಬಿಸಾಡಿದ್ದ.ರಾತ್ರಿ ಯುವತಿ ನಾಪತ್ತೆ ಎಂದು ದೂರು ಬಂದಿತ್ತು. ಮರುದಿನ ಬೆಳಿಗ್ಗೆ ಶವ ಪತ್ತೆಯಾಗಿತ್ತು. ಮೃತದೇಹವನ್ನು ಪರಿಶೀಲಿಸಿದಾಗ ಯುವತಿಯ ಪಾದ ನೋಡಿ ಪೊಲೀಸರು ಯುವತಿಯ ಕೊಲೆಯಾಗಿದೆ ಹೊರಗಡೆ ಹೋಗಿಲ್ಲ ಅನ್ನುವುದನ್ನ ಖಚಿತ ಮಾಡಿಕೊಂಡಿದ್ದರು.
ಈ ವೇಳೆ ಅಕ್ಕಪಕ್ಕದ ಮನೆಯವರ ಬಗ್ಗೆ ಮಾಹಿತಿ ಕಲೆ ಹಾಕಿದಾಗ ಕೊಲೆಯಾದ ಮಹಾನಂದ ಪಕ್ಕದ ಮನೆಯಲ್ಲಿಯೇ ಇದ್ದ ಆರೋಪಿ ಕೃಷ್ಣ ಆಕೆಯ ಮನೆಗೆ ಹೋಗಿದ್ದ ಎಂದು ಬಾಲಕಿಯೊಬ್ಬಳು ಪೊಲೀಸರಿಗೆ ಮಾಹಿತಿ ನೀಡಿದ್ದಳು.
ಶವ ಪತ್ತೆಯಾಗಿ ಹಲವು ಗಂಟೆಗಳ ಕಾಲ ಕೃಷ್ಣ ಹೊರಗೆ ಬಂದಿರಲಿಲ್ಲ. ಈ ವೇಳೆ ತಮಗಿದ್ದ ಅನುಮಾನದ ಜತೆ ಬಾಲಕಿಯ ಹೇಳಿಕೆ ಅನುಮಾನ ಹೆಚ್ಚಿಸಿದ್ದರಿಂದ ಕೂಡಲೇ ಆರೋಪಿ ಕೃಷ್ಣನನ್ನು ವಶಕ್ಕೆ ಪಡೆದಾಗ ವಿಚಾರ ಬಯಲಿಗೆ ಬಂದಿದೆ.
ಒಡಿಶಾ ಮೂಲದ ಕೃಷ್ಣ ಚಂದ ಸೇತಿ ಟೆಕ್ ಪಾರ್ಕ್ ನಲ್ಲಿ ಸೆಕ್ಯುರಿಟಿ ಗಾರ್ಡ್ ಕೆಲಸ ಮಾಡ್ತಿದ್ದ. ಕೃಷ್ಣ ಮಹಾನಂದಳನ್ನು ಬಲವಂತವಾಗಿ ಮನೆಯೊಳಗೆ ಎಳೆದುಕೊಂಡು ಹೋಗಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ವೇಳೆ ನಿರಾಕರಿಸಿ ಕಿರುಚಾಡಲು ಯತ್ನಿಸಿದ್ದಾಳೆ. ಇದರಿಂದ ಭಯಗೊಂಡ ಕೃಷ್ಣ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ತನಿಖೆ ವೇಳೆ ತಿಳಿದು ಬಂದಿದೆ.