ಬ್ರೇಕ್ ಬದಲು ಆಕ್ಸಿಲೆಟರ್ ಒತ್ತಿದ್ದಕ್ಕೆ ಕಂಡಕ್ಟರ್ ಸಾವು
Team Udayavani, May 10, 2023, 12:36 PM IST
ಸಾಂದರ್ಭಿಕ ಚಿತ್ರ
ಬೆಂಗಳೂರು: ಬಿಎಂಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಬಸ್ ನಿರ್ವಾಹಕರೊಬ್ಬರು ಮೃತಪಟ್ಟಿರುವ ಘಟನೆ ಯಲಹಂಕದ ಬಿಎಂಟಿಸಿ 30ರ ಘಟಕದಲ್ಲಿ ಮಂಗಳವಾರ ಸಂಜೆ ನಡೆದಿದೆ.
ಸೋಮಶೇಖರಯ್ಯ(59) ಮೃತ ನಿರ್ವಾಹಕರು. ಸಂಜೆ 4.30ರ ಸುಮಾರಿಗೆ ಯಲಹಂಕದ ಡಿಪೋ 30ಕ್ಕೆ ಎಲೆಕ್ಟ್ರಿಕ್ ಬಸ್ ಬಂದಿದ್ದು, ಅದರ ನಿರ್ವಾಹಕರಾಗಿರುವ ಸೋಮಶೇಖರಯ್ಯ ನಿಲ್ದಾಣದ ಹಿರಿಯ ಅಧಿಕಾರಿಗಳಿಗೆ ಟಿಕೆಟ್ ಲೆಕ್ಕ ಕೊಟ್ಟು ವಾಪಸ್ ಬರುತ್ತಿದ್ದರು. ಅದೇ ವೇಳೆ ಮತ್ತೂಂದು ಎಲೆಕ್ಟ್ರಿಕ್ ಬಸ್ ಬಂದಿದ್ದು, ಬಸ್ ಚಾಲಕ ಬ್ರೇಕ್ ಒತ್ತುವ ಬದಲು ಆಕ್ಸಿಲೆಟರ್ ಒತ್ತಿದ್ದರಿಂದ ವೇಗವಾಗಿ ಬಂದ ಬಸ್ ಸೋಮಶೇಖರಯ್ಯಗೆ ಡಿಕ್ಕಿ ಹೊಡೆದಿದೆ.
ಪರಿಣಾಮ ಅವರ ಹೊಟ್ಟೆಗೆ ಬಲವಾದ ಪೆಟ್ಟು ಬಿದ್ದು, ಮುಂಭಾಗದ ಗೋಡೆಗೆ ಗುದ್ದಿದರಿಂದ ದೇಹದ ಕೆಲ ಭಾಗಗಳು ಹೊರ ಬಂದಿವೆ. ಇದೇ ವೇಳೆ ಸೋಮಶೇಖರಯ್ಯರ ಹೃದಯ ಕೂಡ ಹೊರಬಂದಿದ್ದು, 3-4 ನಿಮಿಷಗಳ ಕಾಲ ಅದು ಜೀವಂತವಾಗಿತ್ತು ಎಂದು ಹೇಳಲಾಗಿದೆ. ಅದನ್ನು ಕಂಡ ಸಹೋದ್ಯೋಗಿಗಳು ವಿಡಿಯೋ ಮಾಡಿಕೊಂಡಿದ್ದಾರೆ. ಕೃತ್ಯ ಎಸಗಿದ ಬಸ್ ಚಾಲಕ ಪರಾರಿಯಾಗಿದ್ದು, ಪ್ರಕರಣ ದಾಖಲಿಸಿಕೊಂಡು ಆತನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.
ಇನ್ನು ಒಂದೆರಡು ತಿಂಗಳಲ್ಲಿ ಸೋಮಶೇಖರಯ್ಯ ನಿವೃತ್ತಿ ಆಗುತ್ತಿದ್ದರು ಎಂಬುದು ಗೊತ್ತಾ ಗಿದೆ ಎಂದು ಸಂಚಾರ ಠಾಣೆ ಪೊಲೀಸರು ಹೇಳಿದರು. ಯಲಹಂಕ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.