ಪುತ್ರಿ ಜತೆ ಮದುವೆಗಾಗಿ ಬ್ಲ್ಯಾಕ್ಮೇಲ್ ಮಾಡಿದ ಯುವಕನ ಕೊಂದ ತಂದೆ
Team Udayavani, Nov 22, 2023, 9:56 AM IST
ಬೆಂಗಳೂರು: ಪುತ್ರಿಯೊಂದಿಗೆ ಆತ್ಮೀಯವಾಗಿ ರುವ ವಿಡಿಯೋ ವೈರಲ್ ಮಾಡುವುದಾಗಿ ಬ್ಲ್ಯಾಕ್ಮೇಲ್ ಮಾಡಿದ ಯುವಕನನ್ನು ಯುವತಿಯ ತಂದೆ ರಾಡ್ನಿಂದ ಹಲ್ಲೆ ನಡೆಸಿ ಚೂರಿಯಿಂದ ಇರಿದು ಕೊಂದಿರುವ ಘಟನೆ ಅಶೋಕ್ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಡೇವಿಡ್ (22) ಕೊಲೆಯಾದವನು. ಯುವತಿ ತಂದೆ ಮಂಜುನಾಥ್ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ವಿಲ್ಸನ್ ಗಾರ್ಡನ್ ವಿನಾಯಕ ನಗರದಲ್ಲಿ ಮಂಜುನಾಥ್ ಕುಟುಂಬಸ್ಥರ ಜೊತೆಗೆ ವಾಸಿಸುತ್ತಿದ್ದಾರೆ. ಆಟೋ ಚಾಲಕನಾಗಿದ್ದ ಡೇವಿಡ್ ಹಾಗೂ ಮಂಜುನಾಥ್ ಪುತ್ರಿ ಪರಸ್ಪರ ಪ್ರೀತಿಸುತ್ತಿದ್ದರು. ನಿಮ್ಮ ಮಗಳನ್ನು ಮದುವೆ ಮಾಡಿಸಿಕೊಡುವಂತೆ ಡೇವಿಡ್ ಆಗಾಗ ಮಂಜುನಾಥ್ಗೆ ಕೇಳಿಕೊಂಡಿದ್ದ. ಮದುವೆ ಮಾಡಿಸಿಕೊಡದಿದ್ದರೆ ನಿಮ್ಮ ಮಗಳೊಂದಿಗೆ ಆತ್ಮಿಯವಾಗಿರುವ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಸಲು ಆರಂಭಿಸಿದ್ದ.
ಇದರಿಂದ ಮಗಳ ಮರ್ಯಾದೆ ಹಾಳಾಗುವ ಭೀತಿಯಲ್ಲಿದ್ದ ಮಂಜುನಾಥ್ ಹೇಗಾದರೂ ಮಾಡಿ ಡೇವಿಡ್ನನ್ನು ಮುಗಿಸಬೇಕು ಎಂದು ಸಂಚು ರೂಪಿಸಿದ್ದ. ಮಾತನಾಡುವ ನೆಪದಲ್ಲಿ ಡೇವಿಡ್ ನನ್ನು ಅಶೋಕನಗರ ಠಾಣಾ ವ್ಯಾಪ್ತಿಯ ಸುಬ್ಬಣ್ಣ ಗಾರ್ಡನ್ ಬಳಿ ಕರೆಸಿಕೊಂಡಿದ್ದ. ಡೇವಿಡ್ ಎಂಟ್ರಿ ಕೊಡುತ್ತಿದ್ದಂತೆ ಮಂಜುನಾಥ್ ರಾಡ್ನಿಂದ ಹಲ್ಲೆ ನಡೆಸಿದ್ದಾನೆ. ಹಲ್ಲೆಗೊಳಗಾಗಿ ಡೇವಿಡ್ ಕೆಳಗೆ ಬೀಳುತ್ತಿದ್ದಂತೆ ಚೂರಿಯಿಂದ ಇರಿದು ಪಕ್ಕದಲ್ಲಿ ಬಿದ್ದಿದ್ದ ಹಾಲೋಬ್ರಿಕ್ಸ್ ಕಲ್ಲನ್ನು ಆತನ ಮೇಲೆ ಎತ್ತಿ ಹಾಕಿ ಕೊಲೆ ಮಾಡಿದ್ದಾನೆ. ಅಶೋಕ್ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.