ಸಿಹಿ-ಕಹಿ ನಡುವೆ ವರ್ಕ್ ಫ್ರಂ ಹೋಂ : ವರ್ಕ್ ಫ್ರಂ ಹೋಂಗೆ ಒನ್ ಇಯರ್
Team Udayavani, Mar 1, 2021, 11:08 AM IST
ಸಾಂದರ್ಭಿಕ ಚಿತ್ರ
ಆರಂಭದಲ್ಲಿ ವೇತನ ಮತ್ತು ಉದ್ಯೋಗಕ್ಕೆ ಕತ್ತರಿ, ಇಂಟರ್ನೆಟ್ ಸಮಸ್ಯೆ, ಕಾರ್ಯಕ್ಷೇತ್ರ ಬದಲಾವಣೆಯ ಒತ್ತಡದಂತಹ ಹಲವು ಕಹಿ ಅನುಭವಗಳ ಜತೆಗೆ ಆರಂಭವಾದ ವರ್ಕ್ ಫ್ರಂ ಹೋಂ ಆ ನಂತರ ಕೌಟುಂಬಿಕ ಸಂಬಂಧ, ಸದಸ್ಯರ ಬಾಂಧವ್ಯಗಳನ್ನು ಹೆಚ್ಚಿಸಿತು. ತಂತ್ರಜ್ಞಾನದ ಪರಿಣಾಮಕಾರಿ ಬಳಕೆಯನ್ನು ತೋರಿಸಿಕೊಟ್ಟಿತು. ಮಹಿಳೆಯರ ಸುರಕ್ಷತೆಗೆ ಮಾದರಿಯಾಯಿತು. ಜತೆಗೆ ಕೋವಿಡ್ ವೇಳೆಯಲ್ಲಿಯೂ ಉದ್ಯೋಗಿಗಳಿಂದ ಪರಿಣಾಮಕಾರಿ ಕೆಲಸ ಪಡೆದು ಕಂಪನಿಗಳು ಲಾಭ ಗಳಿಸಲು ಸಾಧ್ಯವಾಗಿದೆ. ಈ ಎಲ್ಲ ವಿವರವಿರುವ ಸುದ್ದಿ ಸುತ್ತಾಟ ಈ ವಾರದ ವಿಶೇಷ.
ಬೆಂಗಳೂರು: ದೇಶಾದ್ಯಂತ ಮನೆಯಿಂದಲೇ ಕೆಲಸ ಮಾಡುವ ವಿನೂತನ ವ್ಯವಸ್ಥೆ ವರ್ಕ್ ಫ್ರಂ ಹೋಂಗೆ ನಾಂದಿ ಹಾಡಿ ಇಂದಿಗೆ (ಮಾ.1) ಬರೋಬ್ಬರಿ ಒಂದು ವರ್ಷ. ಈ ಪದ್ಧತಿ ವಿವಿಧೆಡೆ ಶಾಶ್ವತಗೊಳಿಸುವ ಸಾಧ್ಯತೆಗಳು ಹೆಚ್ಚಾಗಿವೆ. 2020ರ ಜ. 30ಕ್ಕೆ ಭಾರತದಲ್ಲಿ ಮೊದಲ ಕೋವಿಡ್ ಸೋಂಕು ಪ್ರಕರಣ ದೃಢಪಟ್ಟಿತು. ಫೆಬ್ರವರಿ ಅಂತ್ಯಕ್ಕೆ ಪ್ರಕರಣ ಗಳ ಸಂಖ್ಯೆ ಬೆರಳೆಣಿಕೆ ದಾಟಿತ್ತು. ಆದರೆ, ಕರ್ನಾಟಕಕ್ಕಿನ್ನು ಕೋವಿಡ್ ಕಾಲಿಟ್ಟಿರಲಿಲ್ಲ. ಆ ಕೂಡಲೇ ಎಚ್ಚೆತ್ತುಕೊಂಡ ರಾಜಧಾನಿ ಬೆಂಗಳೂರಿನ ಐಟಿ, ಬಿಟಿ ವಲಯ ಸೇರಿದಂತೆ ಖಾಸಗಿ ಕಂಪನಿಗಳು ತನ್ನ ಉದ್ಯೋಗಗಳ ಸುರಕ್ಷತೆಗಾಗಿ ವರ್ಕ್ ಫ್ರಂ ಹೋಂ ವ್ಯವಸ್ಥೆಗೆ ನಿರ್ಧರಿಸಿದವು. ಶೇ.80ಕ್ಕೂ ಹೆಚ್ಚು ಐಟಿ, ಬಿಟಿ ಕಂಪನಿಗಳು ಮಾರ್ಚ್ ಒಂದರಿಂದಲೇ ಜಾರಿಗೊಳಿಸಿದವು.
ವರ್ಕ್ ಫ್ರಂ ಹೋಮ್ ಜಾರಿಗೊಂಡಿದ್ದ ಕಂಪನಿಗಳ ಪೈಕಿ ಶೇ. 30 ಮಾತ್ರ ಕೋವಿಡ್ ಪ್ರಕರಣಗಳು ಇಳಿಕೆಯಾದ ಕೂಡಲೇ ಕಚೇರಿ ಬಾಗಿಲು ತೆರೆದವು. ಶೇ. 70 ಕಂಪನಿಗಳು ಒಂದು ವರ್ಷ ಪೂರ್ಣಗೊಳಿಸ ವೆ. ಸದ್ಯ ಮಾರ್ಚ್ನಿಂದ ಶೇ.20 ಕಂಪನಿಗಳು ತನ್ನ ಉದ್ಯೋಗಿಗಳನ್ನು ಕಚೇರಿಗೆ ಆಹ್ವಾನಿಸಿವೆ. ಉಳಿದಂತೆ ಕೆಲ ಕಂಪನಿಗಳು ಏಪ್ರಿಲ್, ಜೂನ್, ಆಗಸ್ಟ್ವರೆಗೂ ಈ ವ್ಯವಸ್ಥೆ ಮುಂದುವರಿಸುವುದಾಗಿ ತಿಳಿಸಿವೆ.
ಶಾಶ್ವತ ವರ್ಕ್ ಫ್ರಂ ಹೋಂ ಜಾರಿ: ವಿಪ್ರೋ, ಇನ್ಫೋಸಿಸ್ ನಂತಹ ಪ್ರಮುಖ ಕಂಪನಿಗಳು ಸೀಮಿತ ಉದ್ಯೋಗಿಗಳಿಗೆ ಶಾಶ್ವತವಾಗಿ ವರ್ಕ್ ಫ್ರಂ ಹೋಂ ಜಾರಿ ಇಂಗಿತ ವ್ಯಕ್ತಪಡಿಸಿವೆ. ಈ ಕುರಿತು ಐಟಿ ದಿಗ್ಗಜರೂ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಕಂಪನಿಗಳ ಉನ್ನತ ಮಟ್ಟದ ಸಭೆಗಳಲ್ಲಿ ಈ ವಿಚಾರಗಳು ಮುನ್ನೆಲೆಗೆ ಬಂದಿವೆ. ಆದರೆ, ಯಾವುದೇ ಕಂಪನಿಗಳು ಅಧಿಕೃತ ಘೋಷಣೆಯನ್ನುನೀಡಿಲ್ಲ. ವಿದೇಶ ಮೂಲ, ಭಾರತೀಯ ಉದ್ಯೋಗಿಗಳನ್ನು ಹೊಂದಿರುವ ಕೆಲ ಐಟಿ ಕಂಪನಿಗಳು ಮನೆಯಿಂದಲೇ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲು ಸೂಚಿಸಿವೆ. ಜತೆಗೆ ಅಗತ್ಯ ಸಲಕರಣೆಗಳ ಕೊಂಡುಕೊಳ್ಳಲು ವೆಚ್ಚ ನೀಡಿವೆ.
ಯಾರಿಗೆಷ್ಟು ಖರ್ಚು ಉಳಿತಾಯ?: ಪರಿಣಿತರು, ಕಂಪನಿ ಆಡಳಿತ ಸಿಬ್ಬಂದಿ ಹಾಗೂ ಉದ್ಯೋಗಿಗಳ ಪ್ರಕಾರ, ಈ ವ್ಯವಸ್ಥೆಯು ಕಂಪನಿ ಮತ್ತು ಉದ್ಯೋಗಿ ಇಬ್ಬರ ಖರ್ಚನ್ನು ಉಳಿಸಿದೆ. ಕಂಪನಿಗಳಿಗೆ ಕಚೇರಿಯಲ್ಲಿ ಇಂಟರ್ನೆಟ್, ಉದ್ಯೋಗಿಗಳ ಕಾಫಿ, ಟೀ, ತಿಂಡಿ, ಊಟ, ಕ್ಯಾಬ್ ಸೇವೆ , ವಿಶೇಷ ಸಭೆ ಸಮಾರಂಭಕ್ಕಾಗಿ ಮಾಡುತ್ತಿದ್ದ ಖರ್ಚಿನಿಂದ ವಿನಾಯ್ತಿ ಸಿಕ್ಕಿದ್ದು, ಶೇ. 20ಕ್ಕಿಂತಲೂ ಕಚೇರಿ ವೆಚ್ಚ ಉಳಿತಾಯವಾಗಿದೆ. ಉದ್ಯೋಗಿಗಳು ಬಹುತೇಕರು ಸ್ವಯಂ ಊರು ಮನೆಗಳನ್ನು ಸೇರಿಕೊಂಡಿದ್ದು, ಸಂಚಾರ, ಬಾಡಿಗೆ ಸೇರಿದಂತೆ ಅನೇಕ ಖರ್ಚುಗಳಿಗೆ ಕತ್ತರಿ ಬಿದ್ದಿದೆ. ಇನ್ನು ಬ್ಯಾಚುಲರ್ಸ್ಗಳಿಗೆ ಶೇ.70 ವೆಚ್ಚ ಉಳಿತಾಯವಾಗಿದೆ.
ಇದನ್ನೂ ಓದಿ : ನಿನ್ನೆ ಮದುವೆ.. ಇಂದು ಮುಂಜಾನೆ ಮದುಮಗಳು ಹೃದಯಾಘಾತದಿಂದ ನಿಧನ!
ಟ್ರಾಫಿಕ್ ಸಮಸ್ಯೆಗೆ ಪರಿಹಾರ :
ನಗರದಲ್ಲಿ ಐಟಿ, ಬಿಟಿ ಕಂಪನಿಗಳಿರುವ ಮಹದೇವಪುರ, ಎಲೆಕ್ಟ್ರಾನಿಕ್ ಸಿಟಿ, ವರ್ತೂರು, ವೈಟ್ ಫೀಲ್ಡ್ , ವರ್ತುಲ ರಸ್ತೆ, ಕೋರಮಂಗಲ ಸೇರಿದಂತೆ ಅನೇಕ ಕಡೆಗಳಲ್ಲಿ ಸಂಚಾರ ದಟ್ಟಣೆ ತುಸು ಕಡಿಮೆಯಾಗಿದೆ. ಇದಕ್ಕೆ ಕಂಪನಿಗಳ ವರ್ಕ್ ಫ್ರಂ ಹೋಂ ವ್ಯವಸ್ಥೆ ಎಂದು ಬೆಂಗಳೂರು ಟ್ರಾಫಿಕ್ ಪೊಲೀಸ್ ಹೇಳುತ್ತಾರೆ. ಕೊರೊನಾ ಪೂರ್ವದಲ್ಲಿ ಬೆಳಗ್ಗೆ ಮತ್ತು ಸಂಜೆ (ಪೀಕ್ ಅವರ್) ಈ ರಸ್ತೆಗಳಲ್ಲಿ ಸಂಚರಿಸಲು ಸಾರ್ವಜನಿಕರು ಹರಸಾಹಸ ಪಡುತ್ತಿದ್ದರು.
ಹಳ್ಳಿಯಲ್ಲೇ ಐಟಿ -ಬಿಟಿ ಕೆಲಸ :
ದಶಕಗಳಿಂದಲೂ ಐಟಿ ಬಿಟಿ ಉದ್ಯೋಗ ಎಂದರೆ ಸಿಲಿಕಾನ್ ಸಿಟಿ ಬೆಂಗಳೂರಿಗೆ ಮಾತ್ರ ಸೀಮಿತ. ಸಾಪ್ಟ್ವೇರ್ ಕೆಲಸ ಮಾಡುವವರು ಬೆಂಗಳೂರಿಗೆ ಹೋಗಬೇಕು. ಅಲ್ಲಿಯೇ ಇರಬೇಕು ಎಂಬ ಸ್ಥಿತಿ ಇತ್ತು. ಸದ್ಯ ವರ್ಕ್ ಫ್ರಂ ಹೋಂ ಅದನ್ನುಬದಲಾಯಿಸಿದ್ದು, ಉದ್ಯೋಗಿಗಳು ತಮ್ಮ ಹಳ್ಳಿ ಮನೆಗಳಲ್ಲಿ ಕುಳಿತು ಐಟಿ ಕೆಲಸ ನಿರ್ವಹಿಸುತ್ತಿದ್ದಾರೆ. ಇಷ್ಟು ಮಾತ್ರವಲ್ಲದೆ ಹಳ್ಳಿಗಳಿಗೂ ಹೈಸ್ಪೀಡ್ ಇಂಟರ್ನೆಟ್ ಬರಲು ಪ್ರಮುಖ ಕಾರಣವಾಗಿದ್ದಾರೆ. ಕೆಲವರು ಗ್ರಾಮದ ಅಭಿವೃದ್ಧಿ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದಾರೆ. ಶಾಲೆಗಳಲ್ಲಿ ಮಕ್ಕಳಿಗೆ ತರಬೇತಿ ನೀಡುತ್ತಿದ್ದಾರೆ. ಸ್ಥಳೀಯರಿಗೆ ಕಂಪ್ಯೂಟರ್,ಇಂಟರ್ನೆಟ್ ಪರಿಚಯಿಸುತ್ತಿದ್ದಾರೆ.
ಅವಲಂಬನಾ ಕ್ಷೇತ್ರಕ್ಕೆ ದೊಡ್ಡ ಪೆಟ್ಟು :
ವರ್ಕ್ ಫ್ರಂ ಹೋಂನಿಂದಾಗಿ ಉದ್ಯೋಗಿಗಳು ಮನೆ ಸೇರಿಕೊಂಡಿದ್ದು, ಇವರನ್ನೇ ಆಧರಿಸಿದ್ದ ಹೋಟೆಲ್ ರೆಸ್ಟೋರೆಂಟ್ ಉದ್ಯಮ, ಕ್ಯಾಬ್ ಸೇರಿದಂತೆ ಸಾರ್ವಜನಿಕ ಸಾರಿಗೆ ವಲಯ, ಪೇಯಿಂಗ್ ಗೆಸ್ಟ್(ಪಿಜಿ) ಮನೆ, ಅಪಾರ್ಟ್ಮೆಂಟ್, ಶಾಂಪಿಗ್ ಕಾಂಫ್ಲೆಕ್ಸ್ ಗಳಿಗೆ ದೊಡ್ಡ ಪೆಟ್ಟುಕೊಟ್ಟಂತಾಗಿದೆ. ಮಹದೇವಪುರ, ಎಲೆಕ್ಟ್ರಾನಿಕ್ ಸಿಟಿ, ವರ್ತೂರು, ವೈಟ್ ಫೀಲ್ಡ್ , ವರ್ತುಲ ರಸ್ತೆ, ಕೋರಮಂಗಲ ಸೇರಿದಂತೆ ವಿವಿಧ ಭಾಗಗಳ ಅನೇಕ ಹೋಟೆಲ್, ಮೆಸ್ಗಳು, ಕ್ಯಾಂಟೀನ್, ಗೂಡಂಗಡಿಗಳು ಸಂಪೂರ್ಣ ಬಂದ್ ಆಗಿವೆ. ಹೀಗಾಗಿ, ಈ ವ್ಯವಸ್ಥೆಯನ್ನು ತೆರವು ಮಾಡಬೇಕು ಎಂದು ಬೆಂಗಳೂರು ಹೋಟೆಲ್ ಉದ್ಯಮದಾರರ ಸಂಘವು ಆಗ್ರಹಿಸಿದೆ.
ಕಚೇರಿ ಪುನಾರಂಭಕ್ಕೆ ಅಪಸ್ವರ! :
ಸದ್ಯ ಕೆಲ ಕಂಪನಿಗಳು ವರ್ಕ್ ಫ್ರಂ ಹೋಂ ಮುಕ್ತಾಯಗೊಳಿಸಿ ತನ್ನ ಉದ್ಯೋಗಿ ಕಂಪನಿಗೆ ಆಗಮಿಸುವಂತೆ ಕರೆಕೊಟ್ಟಿದೆ. ಈ ಹಿನ್ನೆಲೆಮಹಿಳಾ ಉದ್ಯೋಗಿಗಳನ್ನು ಒಳಗೊಂಡು ಹಲವರು ಬೇಸರ ವ್ಯಕ್ತಪಡಿಸಿದ್ದಾರೆ. ವರ್ಕ್ ಫ್ರಂ ಹೋಂ ಮುಂದುವರಿಸಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಉದ್ಯೋಗಿ ಮತ್ತು ಸಂಸ್ಥೆಗಳಿಗಾದ ಉಪಯೋಗ :
- ಉದ್ಯೋಗಿ ಮತ್ತು ಕಂಪನಿಯ ಖರ್ಚು ವೆಚ್ಚ ಉಳಿತಾಯ
- ಅನಗತ್ಯ ಕಚೇರಿ ಅಲೆದಾಟ, ಸಭೆ, ಸಮಾರಂಭ ತಡೆ
- ಉತ್ಪಾದನಾ ಪ್ರಮಾಣ ಶೇ.20 ಹೆಚ್ಚಳ
- ಆಧಿಕಗೊಂಡ ಉದ್ಯೋಗಿಗಳ ಕೌಟುಂಬಿಕ ಬಾಂಧವ್ಯ
- ಮಹಿಳಾ ಉದ್ಯೋಗಿಗಳಿಗೆ ರಕ್ಷಣೆಗೆ ಆದ್ಯತೆ
- ಉತ್ತಮ ಜೀವನಶೈಲಿ, ಹವ್ಯಾಸಗಳಿಗೆ ಅವಕಾಶ
ಉದ್ಯೋಗಿ, ಸಂಸ್ಥೆಗಳಿಗಾದ ಸಮಸ್ಯೆ :
- ಕೆಲವೆಡೆ ಇಂಟರ್ನೆಟ್ ಸಮಸ್ಯೆಯಿಂದ ಉತ್ಪಾದನೆ ಕಡಿತ
- ನಿಗದಿತ ಸಮಯವಿಲ್ಲದೆ ಕೆಲಸ
- ವೈಯಕ್ತಿಕ ಸಮಯಕ್ಕೆ ತೊಂದರೆ (ವರ್ಕ್ ಲೋಡ್ ಅಧಿಕ)
- ಶೇಕಡಾವಾರು ಸಂಬಳಕ್ಕೆ ಕತ್ತರಿ
- ಔದ್ಯೋಗಿಕ ಒತ್ತಡದಿಂದ ಮಾನಸಿಕ ಸಮಸ್ಯೆ ಸೃಷ್ಟಿ
- ಉದ್ಯೋಗಿಗಳು ಕಂಪನಿ ಬದಲಿಸುತ್ತಿರುವುದು.
ಸಮಾಜಕ್ಕಾದ ಅನುಕೂಲ :
- ರಾಜಧಾನಿ ಸಂಚಾರ ದಟ್ಟಣೆ ತುಸು ಕಡಿತ
- ಹಳ್ಳಿಗಳಿಗೂ ಹೈ ಸ್ಪೀಡ್ ಇಂಟರ್ ನೆಟ್ ಸೌಲಭ್ಯ ವಿಸ್ತರಣೆ.
- ಐಟಿ ಉದ್ಯೋಗಿಗಳ ಸಾಮಾಜಿಕ ಕಾರ್ಯಗಳಿಗೆ ಅನುಕೂಲ
- ಕೋವಿಡ್ ಸೋಂಕು ನಿಯಂತ್ರಣ
ವರ್ಕ್ ಫ್ರಂ ಹೋಮ್ ಪ್ರಮುಖ ವಲಯಗಳು :
- ಐಟಿ, ಬಿಟಿ
- ಬಿಪಿಒ
- ಡಾಟಾ ಎಂಟ್ರಿ
- ಇಂಟೀರಿಯರ್ ಡಿಸೈನ್
- ಖಾಸಗಿ ಬ್ಯಾಂಕ್, ಲೆಕ್ಕ ಪರಿಶೋಧನಾ ಕಂಪನಿಗಳು
ನಗರದಲ್ಲಿ ಕಾರ್ಯಾಚರಣೆ :
- 67 ಸಾವಿರ ಐಟಿ ಕಂಪನಿಗಳು ನೋಂದಾಯಿತ
- 12 ಸಾವಿರ ಪೂರ್ಣ ಪ್ರಮಾಣ ಕಾರ್ಯಾಚರಣೆ
- 20ಲಕ್ಷ ಐಟಿ ವಲಯದ ಉದ್ಯೋಗಿಗಳ ಸಂಖ್ಯೆ
2020 ನಮಗೆ ತಂತ್ರಜ್ಞಾನವು ನಿತ್ಯ ಜೀವನ, ವ್ಯವಹಾರದ ಭಾಗ ಎಂದು ತಿಳಿಸಿದೆ. ಕೋವಿಡ್ ದಿಂದ ಹೈಬ್ರೀಡ್ ಮಾದರಿ ಕಾರ್ಯವೈಖರಿ ಹೊಸ ಹುಟ್ಟು ಪಡೆದಿದೆ. ಜಾಗತಿಕ ಸಾಂಕ್ರಾಮಿಕದ ವೇಳೆ ಶೇ.90 ಐಟಿ ಉದ್ಯೋಗಿಗಳು ಮನೆಯಿಂದಲೇ ಕಾರ್ಯನಿರ್ವಹಿಸುತ್ತಿದ್ದರು. ಈಗಲೂ ಆ ಪದ್ಧತಿ ಮುಂದುವರಿದಿದೆ. ಇದರಿಂದ ದೇಶದ ಬೇರೆ ಬೇರೆ ಭಾಗಗಳ ಜನ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಸಹಕಾರಿಯಾಗಿದೆ. ವಿಶೇಷವಾಗಿ ಮಹಿಳೆಯರಿಗೆ ಪರಿಣಾಮಕಾರಿ ಕಾರ್ಯನಿರ್ವಹಣೆ ವಾತಾವರಣ ಕಲ್ಪಿಸಿಕೊಟ್ಟಿದೆ. – ಅಜೀಂ ಪ್ರೇಮ್ ಜಿ , ವಿಪ್ರೋ ಸಂಸ್ಥಾಪನಾ ಅಧ್ಯಕ್ಷ
ಈ ವ್ಯವಸ್ಥೆಯಿಂದ ದೈಹಿಕ ಒತ್ತಡ ಕಡಿಮೆಯಾಗಿದ್ದು, ಮಾನಸಿಕ ಒತ್ತಡ ಒಂದಿಷ್ಟು ಹೆಚ್ಚಳವಾಗಿದೆ. ಎರಡನ್ನು ನಿಭಾಯಿಸುವ ನಿಟ್ಟಿನಲ್ಲಿ ಕಂಪನಿಗಳು ಉದ್ಯೋಗಿಗಳನ್ನು ನಾಲ್ಕು ತಂಡಗಳಾಗಿ ಮಾಡಿ ಸರತಿಯಾಗಿ ವರ್ಕ್ ಪ್ರಂಹೋಂ ಜಾರಿ ಮಾಡಬೇಕು. ಎಲ್ಲರಿಗೂ ವ್ಯಾಕ್ಸಿನ್ ನೀಡಿದ ನಂತರವೇ ಕಚೇರಿ ಕೆಲಸ ಆರಂಭಿಸಿದರೆ ಉತ್ತಮ. – ಹರೀಶ್, ವಕೀಲರು, ಬಿ ಪ್ಯಾಕ್ ಸದಸ್ಯರು
ನಮ್ಮ ಹಳ್ಳಿಯ ಮನೆಯಲ್ಲಿ ಕುಳಿತು ಐಟಿ ಕೆಲಸ ಮಾಡುವಂಥ ಅವಕಾಶವನ್ನು ವರ್ಕ್ ಫ್ರಂ ಹೋಂ ಸಾಧ್ಯವಾಗಿಸಿದೆ. ಆರಂಭದಲ್ಲಿ ಒತ್ತಡ ಎಂದೆನಿಸಿತು. ಆನಂತರ ತಂದೆ ತಾಯಿ, ಸಂಬಂಧಿಕರ ಜತೆಇದ್ದುಕೊಂಡು ಕೆಲಸ ಮಾಡುವಖುಷಿ ದೊರೆಯಿತು. ನಮ್ಮಂಥ ಅನೇಕರು ಹಳ್ಳಿಯಿಂದ ಕಾರ್ಯನಿರ್ವಹಿಸುತ್ತಿರುವುದರಿಂದ ಗ್ರಾಮೀಣ ಭಾಗದಲ್ಲಿ ಇಂಟರ್ನೆಟ್ ಸೌಲಭ್ಯ ಉತ್ತಮಗೊಂಡಿದೆ. – ಗಿರೀಶ್ ಮಲ್ಲಪ್ಪ ಬಿರಾದಾರ್, ಐಟಿ ಉದ್ಯೋಗಿ
ಬೆಂಗಳೂರಿನ ಟ್ರಾಫಿಕ್, ಅಧಿಕ ಖರ್ಚಿನ ಜೀವನ ಸಾಕಾಗಿತ್ತು. ವರ್ಕ್ ಫ್ರಂ ಹೋಮ್ಗೆ ಅವಕಾಶವಿದೆ ಎಂಬ ಕಾರಣದಿಂದಲೇ ಉದ್ಯೋಗ ಮುಂದುವರಿಸಿದ್ದು, ಸದ್ಯ ಕುಟುಂಬದೊಟ್ಟಿಗೆಊರಲ್ಲಿ ಕುಳಿತು ಕೆಲಸ ಮಾಡುತ್ತಿದ್ದೇನೆ. ಈ ವ್ಯವಸ್ಥೆ ಮುಂದುವರಿಯಬೇಕು. – ಜಿ.ಡಿ. ನಾಗರಾಜ್, ಖಾಸಗಿ ಬ್ಯಾಂಕ್ ಉದ್ಯೋಗಿ
– ಜಯಪ್ರಕಾಶ್ ಬಿರಾದಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ
Arrested: 17 ಕೇಸ್ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಬಂಧನ
MUST WATCH
ಹೊಸ ಸೇರ್ಪಡೆ
Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ
Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ
Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್ಸಿ ಮೀಸಲಾತಿ ಹೇಳಿಕೆಗೆ ವಿರೋಧ
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ