ಶಾಂತಿ ಸುವ್ಯವಸ್ಥೆ ಕಾಪಾಡಲು ಸಹಕರಿಸಿ
Team Udayavani, Dec 20, 2019, 12:58 PM IST
ಹೊಸಕೋಟೆ: ತಾಲೂಕಿನಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು, ಧಾರ್ಮಿಕ ಮುಖಂಡರು ಸಹಕರಿಸಬೇಕು ಎಂದು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ್ ಹೇಳಿದರು. ನಗರದ ಪೊಲೀಸ್ ಠಾಣೆಯಲ್ಲಿ ಏರ್ಪಡಿಸಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದರು.
ಶಾಂತಿ ಸುವ್ಯವಸ್ಥೆಗೆ ಧಕ್ಕೆಯಾಗುವ ಚಟುವಟಿಕೆಗಳಲ್ಲಿ ತೊಡಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ರಾಷ್ಟ್ರದ ಕಾನೂನನ್ನು ಪಾಲಿಸಬೇಕಾದ್ದು ಪ್ರತಿಯೊಬ್ಬ ಪ್ರಜೆಯ ಆದ್ಯ ಕರ್ತವ್ಯ. ಸರಿಯಾಗಿ ಅರ್ಥೈಸಿಕೊಂಡಲ್ಲಿ ಯಾವುದೇ ಸಮಸ್ಯೆ ಬಾರದಂತೆ ಶಾಂತಿ ಕಾಪಾಡಿಕೊಳ್ಳಬಹುದಾಗಿದೆ. ಇಂದು ಕೇವಲ ಹರಡುತ್ತಿರುವ ವದಂತಿಗಳನ್ನೇ ನಂಬಿ ಕಾನೂನುಬಾಹಿರವಾಗಿ ಪ್ರತಿಭಟನೆ, ಸರ್ಕಾರದ ಆಸ್ತಿಗೆ ಹಾನಿಯುಂಟು ಮಾಡುವ ಕೃತ್ಯಗಳಲ್ಲಿ ಪಾಲ್ಗೊಳ್ಳಬಾರದು. ಸಾಮಾಜಿಕ ಜಾಲತಾಣಗಳಲ್ಲಿನ ವಿಚಾರಗಳಿಂದ ಪ್ರಚೋಧಿತರಾಗಿ ಧರಣಿ, ಬಂದ್ ನಡೆಸುವುದು ಕಾನೂನುಬಾಹಿರವಾಗಿದೆ.
ಕಾನೂನಿನ ಬಗ್ಗೆ ಜನರು ವಿದ್ಯಾವಂತರೊಂದಿಗೆ ಚರ್ಚಿಸಿ ತಪ್ಪು ತಿಳಿವಳಿಕೆಯಿಂದ ಮುಕ್ತರಾಗಬೇಕು. ಪ್ರಸ್ತುತ ಜಾರಿಗೊಳಿಸಲು ಉದ್ದೇಶಿಸಿರುವ ಎನ್ಆರ್ಸಿ, ಸಿಎಎ ಕಾನೂನು ಕೇವಲ ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನದಿಂದ ವಲಸೆ ಬಂದಿರುವವರಿಗೆ ಮಾತ್ರ ಅನ್ವಯ. ಭಾರತೀಯ ಪ್ರಜೆಗಳು ಒಳಪಡುವುದಿಲ್ಲ ಎಂದು ಕೇಂದ್ರ ಸರ್ಕಾರವೇ ಸ್ಪಷ್ಟವಾಗಿ ತಿಳಿಸಿದೆ. ಆದಾಗ್ಯೂ ಸೂಕ್ತ ತಿಳಿವಳಿಕೆ ಹೊಂದಿಲ್ಲದ ವ್ಯಕ್ತಿಗಳು ಪ್ರಚೋಧಿಸಿ ಗೊಂದಲ ನಿರ್ಮಿಸುತ್ತಿದ್ದು ಎಚ್ಚರದಿಂದ ಇರಬೇಕು ಎಂದರು.
ಪೊಲೀಸ್ ಉಪ ಅಧೀಕ್ಷಕ ಎನ್.ಬಿ.ಸಕ್ರಿ, ಸರ್ಕಲ್ ಇನ್ಸ್ ಪೆಕ್ಟರ್ ಶಿವರಾಜ್, ನಗರದ ಮಸೀದಿ ಧರ್ಮಗುರುಗಳು, ಎಸ್ಡಿಪಿಐ, ಪಿಎಫ್ಐ ಸಂಘಟನೆ ಪದಾಧಿಕಾರಿಗಳು ಉಪಸ್ಥಿತರಿದ್ದರು.