ಕಾಂಗ್ರೆಸ್ ಗೆಲುವಿಗೆ ಎಲ್ಲರೂ ಕೈ ಜೋಡಿಸಿ: ಎಂಎಲ್ಸಿ ರವಿ
Team Udayavani, Nov 29, 2022, 2:21 PM IST
ನೆಲಮಂಗಲ: ಕಾಂಗ್ರೆಸ್ ಮುಖಂಡರ ಜೊತೆಗೂಡಿ ಶ್ರೀನಿವಾಸ್ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಲ್ಲಿನ ಬದಲಾವಣೆಗೆ ಕಾರಣವಾಗಿದ್ದಾರೆ. ಮುಂದಿನ ದಿನಗಳಲ್ಲಿ ಶ್ರೀನಿವಾಸ್ಗೆ ಆಶೀರ್ವಾದ ಮಾಡಿ, ಪಕ್ಷವನ್ನು ಗೆಲ್ಲಿಸಿ ಎಂಬ ವಿಧಾನ ಪರಿಷತ್ ಸದಸ್ಯ ಎಸ್. ರವಿ ಹೇಳಿಕೆ ಕುತೂಹಲಕ್ಕೆ ಕಾರಣವಾಗಿದೆ.
ನೆಲಮಂಗಲ ವಿಧಾನಸಭಾ ಕ್ಷೇತ್ರದ ಸೋಲೂರು ಗ್ರಾಮದಲ್ಲಿ ಡಾ.ಅಂಬೇಡ್ಕರ್ ಆಟೋ ಗೆಳೆಯರಬಳಗದಿಂದ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿ, ಶ್ರೀನಿವಾಸ್ ಯಾವುದೇ ಜಾತಿ-ಮತ, ಗುಂಪಿಗೆ ಸೇರಿದ ವ್ಯಕ್ತಿಯಲ್ಲ. ಎಲ್ಲರನ್ನೂ ಸಮಾನವಾಗಿ ಕಾಣುತ್ತಿದ್ದು, ಕ್ಷೇತ್ರದ ಪ್ರತಿ ಗ್ರಾಮದ ಸರ್ಕಾರಿ ಶಾಲೆ ಮಕ್ಕಳಿಗೆ ಪುಸ್ತಕ, ಬ್ಯಾಗ್ ವಿತರಣೆ, ಕ್ರೀಡಾಕೂಟ ಆಯೋಜನೆ, ಗಣೇಶೋತ್ಸವ ಮತ್ತು ತಾಲೂಕಿನಲ್ಲಿ ಯುವಕರು ಕನ್ನಡ ರಾಜ್ಯೋತ್ಸವ ಆಚರಣೆ ಮಾಡುವಂತೆ ಮಾಡಿ, ಸೇವಾ ಚಟುವಟಿಕೆಗಳನ್ನು ಮಾಡಿರುವುದು ಶ್ಲಾಘನೀಯ. ಕಾಂಗ್ರೆಸ್ ಪಕ್ಷವನ್ನು ಶ್ರೀನಿವಾಸ್ ಬಲಗೊಳಿಸುವ ಕೆಲಸವನ್ನು ಮುಖಂಡರ ಜತೆ ಸೇರಿ ನಿರಂತರವಾಗಿ ಸೇವೆ ಮಾಡಿದ್ದಾರೆ. ತಾಲೂಕಿನಲ್ಲಿ ಶ್ರೀನಿವಾಸ್ ಬಂದ ನಂತರ ಮುಖಂಡರ ಸಮ್ಮುಖ ದಲ್ಲಿ ಪಕ್ಷದಲ್ಲಿ ಹೊಸ ಬದಲಾವಣೆ ಗಾಳಿ ಬೀಸಿದೆ. ಮುಂದಿನ ದಿನಗಳಲ್ಲಿ ಶ್ರೀನಿವಾಸ್ಗೆ ಆಶೀರ್ವಾದ ಮಾಡಿ ಎಂದರು.
ಸುಳಿವು ಬಿಟ್ಟರು?: ನೆಲಮಂಗಲ ವಿಧಾನಸಭಾ ಕ್ಷೇತ್ರ ದಲ್ಲಿ ಕಾಂಗ್ರೆಸ್ ಟಿಕೆಟ್ಗಾಗಿ ಜಟಾಪಟಿ ನಡೆಯುತ್ತಿದ್ದು, ಹತ್ತಕ್ಕೂ ಹೆಚ್ಚು ಜನರು ಅರ್ಜಿ ಸಲ್ಲಿಸಿ, ಟಿಕೆಟ್ ಗಾಗಿ ಕಾದಾಟ ನಡೆಯುತ್ತಿರುವ ಸಮಯದಲ್ಲೇ, ಕ್ಷೇತ್ರವನ್ನು ಎನ್.ಶ್ರೀನಿವಾಸ್ ಬಂದ ನಂತರ ಪಕ್ಷದಲ್ಲಿ ಬದಲಾವಣೆ ಗಾಳಿ ಬೀಸಿದ್ದು, ಕಾಂಗ್ರೇಸ್ ಗೆಲ್ಲುವ ಉತ್ಸಾಹ ತೋರುತ್ತಿದೆ. ಶ್ರೀನಿವಾಸ್ಗೆ ಮುಂದಿನ ದಿನದಲ್ಲಿ ಆಶೀರ್ವಾದ ಮಾಡಿ ಎಂಬ ಎಸ್.ರವಿ ಹೇಳಿಕೆ ಬಹಳಷ್ಟು ಸದ್ದು ಮಾಡಿದ್ದು, ಮುಂದಿನ ಕಾಂಗ್ರೆಸ್ ಅಭ್ಯರ್ಥಿ ಎನ್.ಶ್ರೀನಿವಾಸ್ ಆಗಲಿದ್ದಾರೆ ಎಂಬ ಸುಳಿವು ರವಿ ಬಿಟ್ಟುಕೊಟ್ಟಿದ್ದಾರೆ ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ಹೆಚ್ಚಾಗಿದೆ.
ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಸಿ.ಆರ್.ಗೌಡ, ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಎನ್.ಶ್ರೀನಿವಾಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಸ್ವಾಮಿ, ಜಗದೀಶ್, ಮುಖಂಡರಾದ ಬಾಬು, ನಾಗರಾಜು ಮತ್ತು ಮುಖಂಡರು, ಡಾ.ಅಂಬೇಡ್ಕರ್ ಆಟೋ ಗೆಳೆಯರ ಬಳಗದ ಪದಾಧಿಕಾರಿಗಳು ಉಪಸ್ಥಿತರಿದ್ದರು.