ಆಧುನಿಕತೆಯಿಂದಾಗಿ ಆಧ್ಯಾತ್ಮಿಕತೆಯ ಅಧಃಪತನ
Team Udayavani, Nov 18, 2019, 3:00 AM IST
ವಿಜಯಪುರ: ಆಧುನಿಕತೆಯ ಪ್ರಭಾವಕ್ಕೆ ಸಿಲುಕಿ ಪ್ರತಿಯೊಬ್ಬರೂ ಪೈಪೋಟಿಯ ಮತ್ತು ಒತ್ತಡದ ಜೀವನಕ್ಕೆ ಸಿಲುಕಿದ್ದಾನೆ. ಹಣ, ಅಧಿಕಾರ ಗಳಿಕೆಯ ಆಸೆಯಿಂದಾಗಿ ಆಧ್ಯಾತ್ಮಿಕತೆಯ ಕಡೆಗೆ ಗಮನ ಹರಿಸಲು ಸಮಯವಿಲ್ಲದಂತಾಗಿದೆ ಎಂದು ಶ್ರೀ ಧರ್ಮಶಾಸ್ತ ಅಯ್ಯಪ್ಪಸ್ವಾಮಿ, ಪಂಪಮಹಾಗಣಪತಿ ದೇವಾಲಯದ ಅರ್ಚಕ ಜೆ.ವಿ.ಮುನಿರಾಜುಸ್ವಾಮಿ ತಿಳಿಸಿದರು.
ಪಟ್ಟಣದ ಕೆರೆಕೋಡಿಯ ಶ್ರೀ ಧರ್ಮಶಾಸ್ತ ಅಯ್ಯಪ್ಪಸ್ವಾಮಿ, ಪಂಪಮಹಾಗಣಪತಿ ದೇವಾಲಯದಲ್ಲಿ ಆಯೋಜಿಸಿದ್ದ ಅಯ್ಯಪ್ಪಸ್ವಾಮಿ ಮಂಡಲಪೂಜೆ, ದೀಪೋತಸ್ವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಸಮಾಜದಲ್ಲಿ ಆಧುನೀಕರಣ, ಖಾಸಗೀಕರಣ ಮತ್ತು ಜಾಗತೀಕರಣಗಳ ಪರಿಣಾಮವಾಗಿ ಎಲ್ಲಾ ಕ್ಷೇತ್ರಗಳಲ್ಲಿಯೂ ಅರಾಜಕತೆ, ಅನೈತಿಕತೆ, ಅನ್ಯಾಯ, ಭ್ರಷ್ಟಾಚಾರ, ಅಕ್ರಮಸಂಪಾದನೆ ಚಟುವಟಿಕೆಗಳು ತಾಂಡವವಾಡುವಂತಾಗಿದೆ ಎಂದರು.
ದೇವಾಲಯ ಸಮಿತಿಯ ನಿರ್ದೇಶಕ ಪ್ರಭು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಅಮಾನವೀಯತೆಯ ಚಟುವಟಿಕೆಗಳು ಹೆಚ್ಚಿ ಸ್ವಾಸ್ಥ್ಯ ಕಲುಷಿತಗೊಳ್ಳುತ್ತಿದೆ. ಧಾರ್ಮಿಕ ಆಚರಣೆಗಳ ಮೂಲಕ ಉತ್ತಮ ಸಂಸ್ಕಾರಯುತವಾದ ವ್ಯಕ್ತಿತ್ವ ರೂಪುಗೊಳ್ಳಲು ಸಾಧ್ಯವಿದೆ ಎಂದರು.
ಧಾರ್ಮಿಕ ಮುಖಂಡ ಮನೋಹರ್ಬಾಬು ಮಾತನಾಡಿ, ಮಕ್ಕಳಲ್ಲಿ ನೈತಿಕಮೌಲ್ಯಗಳು ಕುಸಿಯುತ್ತಿವೆ. ಮಕ್ಕಳಲ್ಲಿ ಮೌಲ್ಯಗಳ ಮರುಸ್ಥಾಪನೆಯ ಅಗತ್ಯವಿದೆ ಎಂದರು.ಧಾರ್ಮಿಕ ಮುಖಂಡ ರವಿಶಂಕರ್, ಹರೀಶ್, ಅಯ್ಯಪ್ಪಮಾಲೆಧಾರಿಗಳು ಪಾಲ್ಗೊಂಡಿದ್ದರು. ದೀಪೋತ್ಸವ, ದೇವರಿಗೆ ವಿಶೇಷಪೂಜೆ, ಭಜನೆ ಕಾರ್ಯಕ್ರಮಗಳು ನಡೆದವು.