ಠಿಕಾಣಿ ಹೂಡಿದವರ ಎತ್ತಂಗಡಿ
ಜಿಪಂ ಸಿಇಒ ಶಾಕ್ ಟ್ರೀಟ್ಮೆಂಟ್ | ಎಂಐಎಸ್, ಐಇಎಸ್, ತಾಂತ್ರಿಕ ಸಂಯೋಜಕರ ಹುದ್ದೆಗೆ ಮೇಜರ್ ಸರ್ಜರಿ
Team Udayavani, Oct 11, 2019, 5:58 PM IST
ಭೈರೋಬಾ ಕಾಂಬಳೆ
ಬೆಳಗಾವಿ: ಅನೇಕ ವರ್ಷಗಳಿಂದ ಒಂದೇ ಕಡೆಗೆ ಠಿಕಾಣಿ ಹೂಡಿರುವ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಹೊರಗುತ್ತಿಗೆ ಸಿಬ್ಬಂದಿಯನ್ನು ಎತ್ತಂಗಡಿ ಮಾಡಿ ಮೇಜರ್ ಸರ್ಜರಿ ಮಾಡುವ ಮೂಲಕ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ.
ಜಿಲ್ಲಾ ಪಂಚಾಯತ್ ವ್ಯಾಪ್ತಿಯ ನರೇಗಾ ಯೋಜನೆಯಡಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವ ತಾಲೂಕು ಎಂಐಎಸ್ ಸಂಯೋಜಕರು, ಐಇಎಸ್ ಸಂಯೋಜಕರು, ತಾಂತ್ರಿಕ ಸಂಯೋಜಕರು ಮತ್ತು ತಾಂತ್ರಿಕ ಸಹಾಯಕ ಎಂಜಿನಿಯರ್ಗಳನ್ನು ಆಂತರಿಕ ವರ್ಗಾವಣೆ ಮಾಡಿ ಅ. 16ರೊಳಗೆ ಜಾಗ ಖಾಲಿ ಮಾಡುವಂತೆ ಸೂಚನೆ ನೀಡಲಾಗಿದೆ.
ಅನೇಕ ವರ್ಷಗಳಿಂದ ಜಾಗ ಖಾಲಿ ಮಾಡದೇ ಕೆಲಸ ಮಾಡುತ್ತಿದ್ದ ಈ ಸಿಬ್ಬಂದಿಗೆ ಈ ವರ್ಗಾವಣೆ ಆದೇಶದಿಂದ ತಳಮಳ ಶುರು ಆಗಿದೆ.
ಆಡಳಿತಾತ್ಮಕ ಹಿತದೃಷ್ಟಿಯಿಂದ ಜಿಪಂ ಸಿಇಒ ಡಾ. ರಾಜೇಂದ್ರ ಕೆ.ವಿ. ಅವರು ಈ ಮಹತ್ವದ ಆದೇಶ ಹೊರಡಿಸಿದ್ದಾರೆ. ಗ್ರಾಮ ಪಂಚಾಯತ್ನ ಮಹತ್ವದ ಕೆಲಸಗಳಲ್ಲಿ ಈ ಸಿಬ್ಬಂದಿಯದ್ದು ಜವಾಬ್ದಾರಿಯುತ ಕಾರ್ಯವಿದೆ. ಈ ನಿಟ್ಟಿನಲ್ಲಿ ಆಡಳಿತಕ್ಕೆ ಚುರುಕು ಮುಟ್ಟಿಸುವ ಉದ್ದೇಶದಿಂದ, ಬೇರೆ ಬೇರೆ ಕಡೆಯ ಗ್ರಾಪಂಗಳ ಹೊಸ ಜ್ಞಾನ ಪಡೆದು ಕೆಲಸದಲ್ಲಿ ಹುರುಪು ಬರಲಿ ಎಂಬ ಉದ್ದೇಶದಿಂದ ಜಿಪಂ ಸಿಇಒ ಆಂತರಿಕ ವರ್ಗಾವಣೆ ಮಾಡಿದ್ದಾರೆ.
ತಾಲೂಕು ಎಂಐಎಸ್ ಹಾಗೂ ಐಇಎಸ್ ಸಂಯೋಜಕರು ಒಂದೇ ತಾಲೂಕಿನಲ್ಲಿಯೇ ಬೀಡು ಬಿಟ್ಟಿದ್ದರು. ಸುಮಾರು 15-16 ವರ್ಷಗಳಿಂದಲೇ ಒಂದೇ ತಾಲೂಕಿನಲ್ಲಿಯೇ ಆಸರೆ ಪಡೆದಿರುವ ಈ
ಸಿಬ್ಬಂದಿಗೆ ಈ ಆದೇಶ ಬೆಂಕಿ ಕೆಂಡದಂತೆ ಕಾಡುತ್ತಿದೆ. ಯಾವ ಆದೇಶಕ್ಕೂ ತಲೆ ಕೆಡಿಸಿಕೊಳ್ಳುವ ಜಾಯಮಾನ ನಮ್ಮದಲ್ಲ ಎಂಬ ಉಮೇದಿನಲ್ಲಿದ್ದರು. ಈಗ ಒಟ್ಟು 10 ಎಂಐಎಸ್ ಸಂಯೋಜಕರು
ಹಾಗೂ 9 ಐಇಎಸ್ ಸಂಯೋಜಕರು ವರ್ಗಾವಣೆಗೊಂಡಿದ್ದಾರೆ.
ನರೇಗಾ ಯೋಜನೆಯಡಿ ತಾಲೂಕಿನ ಪ್ರತಿ ಗ್ರಾಪಂನ ಬಿಲ್ಗಳನ್ನು, ಜಾಬ್ ಕಾರ್ಡ್ ಗಳನ್ನು ಸರಿಪಡಿಸುವುದು, ಸಾಮಗ್ರಿ ಖರೀದಿ, ಕೂಲಿಕಾರರಿಗೆ ವೇತನದ ಬಿಲ್ ಗಳ ಬಗ್ಗೆ ನಿಗಾ ಇಡುವುದೇ ಇವರ ಕೆಲಸ. ನರೇಗಾದಲ್ಲಿ ಒಂದು ಕಾಮಗಾರಿಯಲ್ಲಿ ಶೇ. 60ರಷ್ಟು ಕೂಲಿ ವೇತನ, ಶೇ. 40ರಷ್ಟು ಸಾಮಗ್ರಿ ಖರೀದಿ ಅಗತ್ಯವಿದೆ. ಆದರೆ 60:40ರಲ್ಲಿ ವ್ಯತ್ಯಾಸ ಆಗಿದ್ದೇ ಎತ್ತಂಗಡಿಗೆ ಕಾರಣ ಎನ್ನಲಾಗುತ್ತಿದೆ. ಏಳು ಜನ ತಾಂತ್ರಿಕ ಸಂಯೋಜಕರು(ಟಿಸಿ) ಹಾಗೂ 104 ತಾಂತ್ರಿಕ ಸಹಾಯಕ ಅಭಿಯಂತ (ಟಿಎಇ)ರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ನರೇಗಾದಲ್ಲಿ ಎಲ್ಲಿ,
ಎಷ್ಟು ಕಾಮಗಾರಿಗಳನ್ನು ಮಾಡಿಸುವುದು ಎಂಬುದನ್ನು ನಿರ್ಧರಿಸುವವರೇ ಈ ಸಂಯೋಜಕರು ಹಾಗೂ ಎಂಜಿನಿಯರುಗಳು. ಕೆರೆ ಹೂಳೆತ್ತುವ ಕೆಲಸದ ವೇಳೆ ಎಷ್ಟು ಅಗಲ, ಉದ್ದ, ಒಂದು ದಿನಕ್ಕೆ ಎಷ್ಟು ಕೆಲಸ ಮಾಡಬೇಕು ಎಂಬುದನ್ನು
ಕೆಲಸ ಹಾಕಿಕೊಡುವ ಜವಾಬ್ದಾರಿ ಇವರದ್ದು.
ಅಳತೆ ಪುಸ್ತಕದಲ್ಲಿ ನಮೂದಿಸಿದ ಬಳಿಕವೇ ಕೂಲಿಕಾರರ ವೇತನ ಆಗುತ್ತದೆ. ಈ ತಾಂತ್ರಿಕ ಸಂಯೋಜಕರು ಹಾಗೂ ಎಂಜಿನಿಯರ್ ಗಳು ಅನೇಕ ವರ್ಷಗಳಿಂದ ತಳವೂರಿದ್ದೇ ಎತ್ತಂಗಡಿಗೆ ಕಾರಣ ಎನ್ನಲಾಗುತ್ತಿದೆ. ಹೊರ ಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವ ಈ ಸಿಬ್ಬಂದಿಯನ್ನು ಬಹು ವರ್ಷಗಳ ಬಳಿಕ ವರ್ಗಾವಣೆ ಮಾಡುವ ಮೂಲಕ ಜಿಪಂ ಸಿಇಒ ಒಳ್ಳೆಯ
ಸಂದೇಶ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು
ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್ಕಮ್ ಹೊಟೇಲ್ನಲ್ಲಿ ವ್ಯವಸ್ಥೆ
BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ
Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ
ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ