ಮಗಳ ಜನ್ಮದಿನಾಚರಣೆಗೆ ಸುವರ್ಣಸೌಧ ಬಾಡಿಗೆಗೆ ನೀಡಲು ಮನವಿ!
ಬೆಳಗಾವಿಯ ಮಲ್ಲಿಕಾರ್ಜುನ ಚೌಕಾಶಿಯಿಂದ ಸಭಾಪತಿಗೆ ಪತ್ರ
Team Udayavani, Dec 22, 2022, 7:39 PM IST
ಬೆಳಗಾವಿ: ಮಗಳ ಜನ್ಮದಿನ ಆಚರಣೆಗೆ ಸುವರ್ಣ ವಿಧಾನಸೌಧವನ್ನು ಬಾಡಿಗೆಗೆ ನೀಡಬೇಕು ಎಂದು ಬೆಳಗಾವಿ ಜಿಲ್ಲೆಯ ನ್ಯಾಯವಾದಿಯೊಬ್ಬರು ವಿಧಾನ ಪರಿಷತ್ ಸಭಾಪತಿಗೆ ಪತ್ರ ಬರೆದಿದ್ದು ಅಧಿವವೇಶನದ ಸಂದರ್ಭದಲ್ಲಿ ಇದು ಸ್ವಾರಸ್ಯಕರ ಚರ್ಚೆಗೆ ಕಾರಣವಾಯಿತು.
ಗೋಕಾಕ ತಾಲೂಕಿನ ಬಡಿಗವಾಡ ಗ್ರಾಮದ ಮಲ್ಲಿಕಾರ್ಜುನ ಚೌಕಾಶಿ ಎಂಬುವರು ವಿಧಾನ ಪರಿಷತ್ ಸಭಾಪತಿಗೆ ಈ ಪತ್ರ ಬರೆದಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನನ್ನ ಮಗಳು ಮಣಿಶ್ರೀಗೆ ಜ.30ಕ್ಕೆ ಐದು ವರ್ಷ ಪೂರ್ಣವಾಗಲಿದೆ. ಅವಳು ಒಂದನೇ ತರಗತಿಗೆ ಪ್ರವೇಶ ಪಡೆಯಬೇಕಿದೆ. ಇದು ಅವಳ ಜೀವನದ ಅಮೂಲ್ಯ ಕ್ಷಣ. ಹೀಗಾಗಿ ಅವಳ ಜನ್ಮದಿನವನ್ನು ವಿಶಿಷ್ಟವಾಗಿ ಆಚರಿಸಬೇಕು ಎಂಬುದು ನಮ್ಮ ಆಸೆ. ಆದ್ದರಿಂದ ವರ್ಷದಲ್ಲಿ 15 ದಿನ ಮಾತ್ರ ಗದ್ದಲದಿಂದ ಕೂಡಿ ನಂತರ ಭೂತ ಬಂಗ್ಲೆಯಂತಿರುವ ಸುವರ್ಣ ವಿಧಾನಸೌಧದಲ್ಲಿನ ಸಭಾಂಗಣವನ್ನು ಜನ್ಮದಿನ ಆಚರಣೆಗೆ ಬಾಡಿಗೆಗೆ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಈ ರೀತಿಯ ಕಾರ್ಯಕ್ರಮಗಳಿಗೆ ಬಾಡಿಗೆ ನೀಡುವುದರಿಂದ ಸರ್ಕಾರಕ್ಕೆ ಸುವರ್ಣ ವಿಧಾನಸೌಧದಿಂದ ಆಗುತ್ತಿರುವ ನಿರ್ವಹಣಾ ವೆಚ್ಚದ ಹೊರೆ ತಗ್ಗಿಸಬಹುದು ಎಂದು ಸಲಹೆ ನೀಡಿರುವ ಅವರು, ಈ ವಿಷಯದ ಬಗ್ಗೆ ಸದನದಲ್ಲಿ ಚರ್ಚಿಸಿ ನಮಗೆ ಬಾಡಿಗೆಗೆ ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.