ಬಿಜೆಪಿ ಬೆಳವಣಿಗೆಯಿಂದ ಕಾಂಗ್ರೆಸ್ ಪಕ್ಷದ ದಾರಿ ಸುಗಮವಾಗಿದೆ: ಸಿದ್ದರಾಮಯ್ಯ
Team Udayavani, Jul 27, 2021, 3:53 PM IST
ಬೆಳಗಾವಿ: ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಇದ್ದರೂ ಲಾಭವಿಲ್ಲ, ಇರದೇ ಇದ್ದರೂ ನಮಗೆ ಲಾಭ ಇಲ್ಲ. ಆದರೆ 2023ರ ಚುನಾವಣೆಗೆ ಕಾಂಗ್ರೆಸ್ ಪಕ್ಷಕ್ಕೆ ದಾರಿ ಸುಗಮವಾಯಿತು. 2023ಕ್ಕೆ ಕಾಂಗ್ರೆಸ್ ಪಕ್ಷ ನೂರಕ್ಕೆ ನೂರು ಅಧಿಕಾರಕ್ಕೆ ಬರುತ್ತದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೂರು ಜನ ಸಿದ್ದರಾಮಯ್ಯ ಬಂದರೂ 2023ರಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂಬ ಬಿಎಸ್ವೈ ಹೇಳಿಕೆಗೆ ತಿರುಗೇಟು ನೀಡಿದರು. 2013ರಲ್ಲಿ ಯಡಿಯೂರಪ್ಪ ಹೀಗೆ ಹೇಳಿದ್ದರು ಆದರೆ ನಾವು ಅಧಿಕಾರಕ್ಕೆ ಬರಲಿಲ್ವಾ? ಮಿಸ್ಟರ್ ಯಡಿಯೂರಪ್ಪ ಯಾವತ್ತಾದ್ರೂ ನಿಮಗೆ ಮೆಜಾರಿಟಿ ಬಂತಾ. ಸರಳ ಬಹುಮತದಿಂದ ಎಂದಾದರೂ ಆರಿಸಿ ಬಂದಿದ್ದರೇ ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಎದುರಾಗಲಿದೆಯೇ ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಅವಧಿಗೂ ಮುನ್ನ ಚುನಾವಣೆ ಬರಲಿ ಎಂದು ಬಯಸಲ್ಲ. ಬಿಜೆಪಿ ಸರ್ಕಾರ ತನ್ನದೇ ಭಾರದಿಂದ ಬಿದ್ರೆ ಏನೂ ಮಾಡಕ್ಕಾಗುವುದಿಲ್ಲ. ವಿ ರೇಡಿ ಟು ಫೇಸ್ ಎಂದರು.
ಯಡಿಯೂರಪ್ಪ ಸಿಎಂ ಆದಾಗ ಸಂಪೂರ್ಣ ಮನೆ ಬಿದ್ದರೆ ಐದು ಲಕ್ಷ ಕೊಡುತ್ತೇನೆ ಎಂದಿದ್ದರು. ಆ ಹಣವನ್ನ ಇನ್ನೂ ಸರಿಯಾಗಿ ಬಿಡುಗಡೆ ಮಾಡಿಲ್ಲ. ಕಾಂಗ್ರೆಸ್ ಶಾಸಕರಿದ್ದರೆ ಒಂದು ಪರಿಹಾರ, ಬಿಜೆಪಿ ಶಾಸಕರಿದ್ದರೆ ಬೇರೊಂದು ಪರಿಹಾರ ನೀಡಿ ತಾರತಮ್ಯ ಮಾಡುತ್ತಾರೆ. ಬೆಳಗಾವಿ ಜಿಲ್ಲೆಯಲ್ಲಿ ಸುಳ್ಳು ಕೇಸ್ ಗಳನ್ನು ಹಾಕುತ್ತಿದ್ದಾರೆ, ಅದನ್ನು ಹಾಕದಂತೆ ಎಸ್ಪಿ ಗೆ ಹೇಳಿದ್ದೇನೆ ಎಂದರು ಸಿದ್ದರಾಮಯ್ಯ ಹೇಳಿದರು.
ಇದನ್ನೂ ಓದಿ:ಅಧಿಕಾರಕ್ಕಾಗಿ ಈ ಹಿಂದೆಯೂ ಲಾಬಿ ಮಾಡಿಲ್ಲ, ಮುಂದೆಯೂ ಮಾಡಲ್ಲ : ನಿರಾಣಿ
ರಾಷ್ಟ್ರೀಯ ಪಕ್ಷಗಳಲ್ಲಿ ಹೈಕಮಾಂಡ್ ಇದ್ದೇ ಇರುತ್ತೆ, ಈಗ ಜೆಡಿಎಸ್ಗೆ ಯಾವ ಕಮಾಂಡ್ ಇದೆ. ಜೆಡಿಎಸ್ ನಲ್ಲಿ ಇರುವುದು ಒಂದೇ ಕಮಾಂಡ್ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.
ಸಿಎಂ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಬಿಜೆಪಿ ಪಕ್ಷದಲ್ಲಿ ಪ್ರಜಾಪ್ರಭುತ್ವ ಎಲ್ಲಿ ಇದೆ? ಚುನಾಯಿತ ಮುಖ್ಯಮಂತ್ರಿಯನ್ನು ಕೇಂದ್ರ ಸರ್ಕಾರದವರು ತಗೆದು ಎಸೆದು ಬಿಟ್ಟರು. ಇದು ಪ್ರಜಾಪ್ರಭುತ್ವ ಸಂವಿಧಾನ ರೀತಿ ಕೆಲಸ ಮಾಡಿರುವುದೇ? ಅವರಿಗೆ ಇಷ್ಟ ಬಂದ ಹಾಗೆ ಹಾಕ್ತಾರೆ, ಇಷ್ಟ ಬಂದ ಹಾಗೆ ಇನ್ನೊಬ್ಬರನ್ನು ತಗೆದು ಹಾಕ್ತಾರೆ ಎಂದು ಟೀಕಿಸಿದರು.