ಚಿಕ್ಕೋಡಿ : ರಾಷ್ಟ್ರೀಯ ಹೆದ್ದಾರಿ ತುಂಬಾ ಗುಂಡಿಗಳ ಸರಮಾಲೆ : ವಾಹನ ಸವಾರರ ಪರದಾಟ
Team Udayavani, Aug 17, 2022, 3:21 PM IST
ಚಿಕ್ಕೋಡಿ: ನಗರದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಂಡಿಗಳು ನಿರ್ಮಾಣಗೊಂಡಿದ್ದು. ಅಪಘಾತಕ್ಕೆ ಆಹ್ವಾನ ನೀಡುತ್ತಿರುವುದರಿಂದ ವಾಹನ ಸವಾರರು ಪರದಾಡುವಂತಾಗಿದೆ.
ಸಂಕೇಶ್ವರ- ಜೇವರ್ಗಿ ರಾಜ್ಯ ಹೆದ್ದಾರಿಯು ಮೇಲ್ದರ್ಜೆಗೊಂಡು ರಾಷ್ಟ್ರೀಯ ಹೆದ್ದಾರಿಯಾಗಿ ನಿರ್ಮಾಣಗೊಂಡಿದೆ. ಇದು ಚಿಕ್ಕೋಡಿ ನಗರದಲ್ಲಿ ಹಾದು ಹೋಗಿದೆ. ನಗರದ ಬಸವೇಶ್ವರ ಸರ್ಕಲ್ ದಿಂದ ಬಿ.ಕೆ.ಕಾಲೇಜಿನವರಿಗೆ ರಸ್ತೆಯಲ್ಲಿ ಹಲವು ಭಾರಿ ಗಾತ್ರದ ಗುಂಡಿ ಬಿದ್ದಿವೆ.
ಸರಕು ತುಂಬಿಕೊಂಡ ನೂರಾರು ಭಾರಿ ವಾಹನಗಳು, ಬಸ್ ಹಾಗೂ ಲಘು ವಾಹನಗಳು ಈ ದಾರಿಯಲ್ಲಿ ನಿತ್ಯ ಸಂಚರಿಸುತ್ತವೆ. ನಗರದ ಸೋಮವಾರ ಪೇಠ ತಿರುವಿನಲ್ಲಿ ದೊಡ್ಡ ದೊಡ್ಡ ಗುಂಡಿ ಬಿದ್ದಿವೆ.
ವಾಹನ ಸವಾರರು ಸ್ವಲ್ಪ ಯಾಮಾರಿದರೆ ಅಪಘಾತ ಸಂಭವಿಸುವುದು ಗ್ಯಾರಂಟಿ. ನಗರದ ಕೆಸಿ ರಸ್ತೆಯಿಂದ ಬರುವ ವಾಹನ ಸವಾರರು ಸೋಮವಾರ ಪೇಠಯ ತಿರುವಿನಲ್ಲಿ ಬಂದು ಸೇರುವುದರಿಂದ ಟ್ರಾಪಿಕ್ ಜಾಮ್ ಆಗುತ್ತದೆ. ಇದೇ ರಸ್ತೆ ತಿರುವಿನ ಮಧ್ಯದಲ್ಲಿ ದೊಡ್ಡ ಕಂದಕಗಳು ಸೃಷ್ಟಿಯಾದ ಪರಿಣಾಮ ಯಾವ ಕಡೆ ಹೋದರೂ ವಾಹನ ಗುಂಡಿಯಲ್ಲಿ ಇಳಿಯುತ್ತಿದೆ. ಇದರಿಂದಾಗಿ ಸವಾರರು ಸಂಚರಿಸಲು ಹರಸಾಹಸ ಪಡಬೇಕಾಗಿದೆ.
ಬೆಳಗಾವಿಯಿಂದ ವಿಜಯಪುರ. ಬೆಳಗಾವಿಯಿಂದ ಸಾಂಗ್ಲಿ ಕಡೆಗೆ ಪ್ರಯಾಣ ಮಾಡುವ ವಾಹನಗಳು ಈ ರಸ್ತೆ ಮೇಲೆ ತಿರುಗಾಡುತ್ತವೆ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು, ಟ್ರಾಪಿಕ್ ಪೊಲೀಸ್ ರು ನಗರದ ಹೃದಯ ಭಾಗದಲ್ಲಿ ಇರುವ ಈ ರಸ್ತೆ ಮೇಲೆ ಸಂಚಾರ ಮಾಡುತ್ತಾರೆ. ದೊಡ್ಡ ದೊಡ್ಡ ಗಾತ್ರದ ಗುಂಡಿ ಬಿದ್ದಿರುವುದು ಸಂಬಂಧಿಸಿದವರು ಗಮನ ಹರಿಸುತ್ತಿಲ್ಲವಾ? ಎಂದು ವಾಹನ ಸವಾರರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.