Chikodi; ಅನೈತಿಕ ಸಂಬಂಧದಿಂದ ಹೆತ್ತ ಮಗನನ್ನೇ ಕೊಲೆಗೈದವಳಿಗೆ ಜೀವಾವಧಿ ಶಿಕ್ಷೆ
ತಂದೆಗೆ ಹೇಳುತ್ತೇನೆಂದು ಓಡಿದ ಮಗನನ್ನು ಬಾವಿಗೆ ದೂಡಿದ್ದಳು
Team Udayavani, Aug 14, 2023, 6:58 PM IST
ಚಿಕ್ಕೋಡಿ: ಅನೈತಿಕ ಸಂಬಂಧಕ್ಕೆ ಅಡಿಯಾದ ಹೆತ್ತ ಮಗನನ್ನು ಬಾವಿಯಲ್ಲಿ ದೂಡಿ ಕೊಲೆ ಮಾಡಿದ ಆರೋಪದ ಹಿನ್ನಲ್ಲೆಯಲ್ಲಿ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದ ಶ್ರೀಮತಿ ಸುಧಾ ಸುರೇಶ ಕರಿಗಾರ(31) ಇತಳಿಗೆ ಜೀವಾವಧಿ ಶಿಕ್ಷೆ ಮತ್ತು 7 ಸಾವಿರ ದಂಡ ವಿಧಿಸಿ ಚಿಕ್ಕೋಡಿ ಏಳನೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
ಹುಕ್ಕೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ 2019ರ ಅ. 22ರಂದು ನಡೆದ ಪ್ರಕರಣದ ವಿಚಾರಣೆ ನಡೆಸಿದ ಚಿಕ್ಕೋಡಿ ಏಳನೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಎಸ್.ಎಲ್.ಚೌವ್ಹಾಣ ಅವರು ಶಿಕ್ಷೆಯ ತೀರ್ಪು ನೀಡಿದ್ದಾರೆ. ಸರಕಾರದ ಪರವಾಗಿ ಸರಕಾರಿ ಅಭಿಯೋಜಕರಾದ ವೈ.ಜಿ.ತುಂಗಳ ವಾದ ಮಂಡಿಸಿದರು.
ಘಟನೆ ವಿವರ
ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದ ಶ್ರೀಮತಿ ಸುಧಾ ಸುರೇಶ ಕರಿಗಾರ(31) ರಾಮಪ್ಪ ಕೆಂಚಪ್ಪ ಬಸ್ತವಾಡನ ಜತೆ ಅನೈತಿಕ ಸಂಬಂಧ ಹೊಂದಿದ್ದಾಗ ಆಕೆಯ ಹಿರಿಯ ಮಗ ಪ್ರವೀಣ(10) ತಂದೆಗೆ ಹೇಳುತ್ತೇನೆಂದು ಓಡಿ ಹೋಗಿದ್ದಾನೆ. ಅವನನ್ನು ಕರೆದು 50 ರೂ ಕೊಟ್ಟು ಅಂಗಡಿಯಲ್ಲಿ ತಿನಿಸು ತರಲು ಹೇಳಿ ಕಳುಹಿಸಿದ್ದಳು, ಅವನ ಜತೆ ಚಿಕ್ಕ ಮಗ ಪ್ರಜ್ವಲ(8) ನನ್ನೂ ಕಳುಹಿಸಿ, ಹಿಂದಿನಿಂದ ಹೋಗಿ ಬೆಲ್ಲದ ಬಾಗೇವಾಡಿ ಉದಯಕುಮಾರ ಮಲ್ಲಿನಾಥ ಪಾಟೀಲ ಎಂಬುವವರ ಜಮೀನಿನಲ್ಲಿರುವ ಬಾವಿಯಲ್ಲಿ ಪ್ರವೀಣನ್ನು ಮುಳುಗಿಸಿ ಕೊಲೆ ಮಾಡಿದ್ದಾಳೆ. ಇನ್ನೊಬ್ಬ ಮಗ ಪ್ರಜ್ವಲನಿಗೆ ನೀನು ಯಾರ ಮುಂದೆಯಾದರೂ ಹೇಳಿದರೆ ನಿನಗೂ ಸಹ ಹೀಗೆ ಮಾಡಿ ಸಾಯಿಸಿ ಬಿಡುತ್ತೇನೆ ಅಂತ ಜೀವದ ಬೆದರಿಕೆ ಹಾಕಿದ ಬಗ್ಗೆ ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕಣದ ತನಿಖೆಯನ್ನು ಮಾಡಿ ಆಗಿನ ಸಿಪಿಐ ಗುರುರಾಜ ಕಲ್ಯಾಣಶೆಟ್ಟಿ ನ್ಯಾಯಾಲಯಕ್ಕೆ ದೋಷಾರೋಪಣ ವರದಿ ಸಲ್ಲಿಸಿದ್ದರು.