ಕೊರೊನಾ ಭೀತಿ; ಬಂದ್ ಸ್ಥಿತಿ
Team Udayavani, Mar 15, 2020, 2:44 PM IST
ಸಾಂದರ್ಭಿಕ ಚಿತ್ರ
ಬೆಳಗಾವಿ: ಕೊರೊನಾ ಸೋಂಕು ತಡೆಗೆ ರಾಜ್ಯ ಸರ್ಕಾರ ಒಂದು ವಾರದ ಮಟ್ಟಿಗೆ ಹಾಕಿರುವ ನಿರ್ಬಂಧ ಹಿನ್ನೆಲೆಯಲ್ಲಿ ಶನಿವಾರ ನಗರ ಸೇರಿದಂತೆ ಜಿಲ್ಲಾದ್ಯಂತ ಬಂದ್ ಪರಿಸ್ಥಿತಿ ಕಂಡು ಬಂತು. ಬಹುತೇಕ ಜನನಿಭಿಡ ಪ್ರದೇಶಗಳು ಜನರಿಲ್ಲದೇ ಸ್ತಬ್ಧಗೊಂಡಿದ್ದವು.
ವಾರದ ಸಂತೆಯ ದಿನವಾದ ಶನಿವಾರ ನಗರದ ಮಾರುಕಟ್ಟೆಗಳು ಗಿಜಿಗುಡುತ್ತಿದ್ದವು. ಆದರೆ ಜನಸಂಚಾರ ಹೆಚ್ಚಾಗಿ ಕಂಡು ಬರಲಿಲ್ಲ. ಎರಡನೇ ಶನಿವಾರ ಹಿನ್ನೆಲೆಯಲ್ಲಿ ಕೋರ್ಟ್ ಆವರಣವಂತೂ ಖಾಲಿ ಖಾಲಿಯಾಗಿತ್ತು. ಮಾರುಕಟ್ಟೆಗಳಲ್ಲಿ ಜನ ಇಲ್ಲದೇ ವ್ಯಾಪಾರ ಅಷ್ಟಕ್ಕಷ್ಟೇ ಎಂಬಂತಿತ್ತು. ರವಿವಾರ ಪೇಟೆಯಲ್ಲಿ ಗ್ರಾಹಕರು, ವಾಹನಗಳ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರಲಿಲ್ಲ.
ನಗರದ ಓಣಿಗಳಲ್ಲಿ, ಮೈದಾನಗಳಲ್ಲಿ ಮಕ್ಕಳು ಆಟ ಆಡುತ್ತಿರುವುದು ಕಂಡು ಬಂತು. ಶಾಲಾ-ಕಾಲೆಜುಗಳಿಗೆ ರಜೆ ಘೋಷಣೆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಓಡಾಟ ಕಂಡು ಬರಲಿಲ್ಲ. ನಗರದ ಬಸ್ಗಳು ಖಾಲಿ-ಖಾಲಿಯಾಗಿ ಸಂಚರಿಸುತ್ತಿದ್ದವು. ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೂ ರಜೆ ಘೋಷಿಸಿದ್ದರಿಂದ ವಿದ್ಯಾರ್ಥಿಗಳು ಬರಲಿಲ್ಲ. ಆದರೆ ಎಂದಿನಂತೆ ಪ್ರಾಧ್ಯಾಪಕರು, ಬೋಧಕೇತರ ಸಿಬ್ಬಂದಿ ಹಾಜರಿದ್ದರು. ಮಟನ್, ಮೀನು ಹಾಗೂ ಚಿಕನ್ ಮಾರುಕಟ್ಟೆಗಳಲ್ಲಿ ಕೊಳ್ಳುವವರ ಸಂಖ್ಯೆ ಅತಿ ಕಡಿಮೆ ಇತ್ತು. ಬೀದಿ ಬದಿಗಳಲ್ಲಿ ತಿಂಡಿ, ತಿನಿಸು, ಕೊಯ್ದು ಹಣ್ಣು ಮಾರುವ ಅಂಗಡಿ ಮುಂಗಟ್ಟುಗಳು ಬಂದ್ ಮಾಡಲಾಗಿತ್ತು. ಶಾಪಿಂಗ್ ಮಾಲ್, ಐನಾಕ್ಸ್, ಬಿಗ್ ಸಿನಿಮಾ ಚಿತ್ರಮಂದಿಗಳಲ್ಲಿ ಚಲನಚಿತ್ರ ಪ್ರದರ್ಶನ ರದ್ದು ಮಾಡಲಾಗಿತ್ತು.
ಮದುವೆ ಸಮಾರಂಭಗಳನ್ನು ಸರಳವಾಗಿ ಆಚರಿಸಲು ನಿರ್ಧರಿಸಿದ್ದು, ವಿದಾನ ಪರಿಷತ್ ಸದಸ್ಯ ಮಹಾತೇಶ ಕವಟಗಿಮಠ ಅವರ ಮೊಮ್ಮಗಳ ಮದುವೆ ಮಾ.15ರಂದು ನಡೆಯಲಿದ್ದು, ಸರಳವಾಗಿ ಆಚರಿಸಲು ನಿರ್ಧರಿಸಿದ್ದಾರೆ. ಮಾ.15ರಂದು ಸಂಜೆ ಬೆಳಗಾವಿಯಲ್ಲಿ ಹಾಗೂ ಮಾ.17ರಂದು ಚಿಕ್ಕೋಡಿಯಲ್ಲಿ ನಡೆಯಬೆಕಿದ್ದ ಆರತಕ್ಷತೆ ಕಾರ್ಯಕ್ರಮ ಮುಂದೂಡಲಾಗಿದೆ. ಸಭೆ, ಸಮಾರಂಭಗಳು, ಖಾಸಗಿ ಕಾರ್ಯಕ್ರಮ ರದ್ದು ಪಡಿಸಲಾಗಿದೆ.
ಕೊರೊನಾ ವೈರಸ್ ಭೀತಿಯಿಂದ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿ ಕಂಡು ಬರಲಿಲ್ಲ. ಹೆಚ್ಚು ಜನರಿಂದ ಗಿಜುಗುಡುತ್ತಿದ್ದ ಬೆಳಗಾವಿ ನಗರದ ಪ್ರಮುಖ ಬೀದಿಗಳು ಬೀಕೋ ಎನ್ನುತ್ತಿದ್ದವು. ನಗರದಲ್ಲಿ ಕೆಲವೊಂದು ಕಡೆಗೆ ನಡೆಯಬೇಕಿದ್ದ ಕ್ರೀಡಾಕೂಟಗಳನ್ನು ಮುಂದೂಡಲಾಗಿದೆ. ಕೊರೊನಾ ವೈರಸ್ ಸೋಂಕಿನಿಂದಾಗಿ ಬೆಳಗಾವಿಯಲ್ಲಿ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಸೋಂಕು ಹರಡದಂತೆ ಎಲ್ಲ ಕಡೆಗೂ ಜಾಗೃತಿ ಮೂಡಿಸುತ್ತಿದೆ.
ಮಾರುಕಟ್ಟೆಯಲ್ಲಿರಾಶಿ-ರಾಶಿ ತರಕಾರಿ : ಇಲ್ಲಿಯ ಎಪಿಎಂಸಿಗೆ ಹೆಚ್ಚಿನ ಪ್ರಮಾಣದಲ್ಲಿ ತರಕಾರಿ ಬಂದಿದ್ದು, ಕೊಳ್ಳುವವರು ಇಲ್ಲದೇ ಮಾರುಕಟ್ಟೆಗಳಲ್ಲಿ ತರಕಾರಿ ಬಿದ್ದು ದರ ಇಳಿಮುಖವಾಗಿದೆ. ಎಪಿಎಂಸಿ ಮಾರುಕಟ್ಟೆಯ ತುಂಬ ತರಕಾರಿ ರಾಶಿ-ರಾಶಿಯಾಗಿ ಬಿದ್ದಿತ್ತು. ಆದರೆ ಕೇಳುವವರೇ ಇರಲಿಲ್ಲ. ಜಿಲ್ಲೆಯಲ್ಲಿ ಬೆಳೆದ ತರಕಾರಿ ಗೋವಾ, ಮಹಾರಾಷ್ಟ್ರ ಸೇರಿದಂತೆ ಬೇರೆ-ಬೇರೆ ಕಡೆಗಳಲ್ಲಿ ಸರಬರಾಜು ಮಾಡಲಾಗುತ್ತದೆ. ಶನಿವಾರ ತರಕಾರಿ ಹೆಚ್ಚಾಗಿ ಬಂದಿದ್ದು, ದಲ್ಲಾಳಿಗಳು, ವ್ಯಾಪಾರಸ್ಥರು ಇಲ್ಲದೇ ಬೆಲೆ ಭಾರೀ ಪ್ರಮಾಣದಲ್ಲಿ ಪಾತಾಳಕ್ಕೆ ಬಿದ್ದಿದೆ.
ಮಾಸ್ಕ್ ಹಾಕಿದವರ ದರ್ಶನ : ಸಾರ್ವಜನಿಕರು ಮಾಸ್ಕ್ ಧರಿಸಿಕೊಂಡು ಓಡಾಡುತ್ತಿರುವುದು ಕಂಡು ಬಂತು. ಕೆಲವು ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸಲಿದ್ದರೂ ಕಡ್ಡಾಯವಾಗಿ ಮಾಸ್ಕ್ ಹಾಕಿಕೊಂಡು ಸಂಚರಿಸುತ್ತಿದ್ದರು. ತರಕಾರಿ ಮಾರುಕಟ್ಟೆ, ಜನನಿಭಿಡ ಪ್ರದೇಶಗಳಲ್ಲಿ ಮಾಸ್ಕ್ ಹಾಕಿದವರು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬಂದರು. ಔಷಧ ಅಂಗಡಿಗಳಲ್ಲಿ ನಿನ್ನೆಯಿಂದ ಮಾಸ್ಕ್ ಮಾರಾಟದಲ್ಲಿ ಏರಿಕೆ ಆಗಿದೆ.
ಜಾತ್ರೆಗೂ ತಟ್ಟಿದ ಬಿಸಿ : ಸುಕ್ಷೇತ್ರ ಸುಳೇಭಾವಿ ಶ್ರೀ ಮಹಾಲಕ್ಷ್ಮೀ ದೇವಿ ಜಾತ್ರೆಗೂ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶದ ಬಿಸಿ ತಟ್ಟಿದೆ. ದೇವಿ ದರ್ಶನ ಪಡೆಯಲು ಶುಕ್ರವಾರದವರೆಗೆ ಹೆಚ್ಚಿನ ಪ್ರಮಾಣದಲ್ಲಿ ಆಗಮಿಸುತ್ತಿದ್ದ ಭಕ್ತರ ಸಂಖ್ಯೆ ಶನಿವಾರ ಸ್ವಲ್ಪ ಪ್ರಮಾಣದಲ್ಲಿ ಇಳಿಕೆ ಆಗಿತ್ತು. ಆದರೆ ಜಾತ್ರೆ ಯಥಾ ಪ್ರಕಾರ ನಡೆದಿದ್ದು, ಧಾರ್ಮಿಕ ವಿಧಿ-ವಿಧಾನಗಳನ್ನು ಕೈಗೊಳ್ಳಲಾಗಿದೆ. ಜಾತ್ರೆಗೆ ಭಕ್ತರು ಆಗಮಿಸುತ್ತಿದ್ದು, ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಕಮಿಟಿಯವರು ಜಾತ್ರಾ ಸ್ಥಳಗಳಲ್ಲಿ ಮುಂಜಾಗ್ರತಾ ಕ್ರಮ ಕೈಗೊಂಡು ಭಕ್ತರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.
21ರ ವರೆಗೆ ಪಬ್, ಕ್ಲಬ್ಗಳು ಬಂದ್ : ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶದಿಂದಾಗಿ ಮಾ.14ರಿಂದ ಬೆಳಗ್ಗೆ 6ಗಂಟೆಯಿಂದ ಮಾ.21ರಂದು ಮಧ್ಯರಾತ್ರಿವರೆಗೆ ಪಬ್ಗಳು, ಕ್ಲಬ್ಗಳನ್ನು ಬಂದ್ ಮಾಡಲು ಅಬಕಾರಿ ಇಲಾಖೆ ನಿರ್ಧರಿಸಿದೆ. ಪಬ್ಗಳು, ಕ್ಲಬ್ಗಳು, ಹೆಚ್ಚಿನ ಪ್ರಮಾಣದಲ್ಲಿ ಸೇರುವ ಕಾರ್ಯಕ್ರಮಗಳನ್ನು ಮಾಡದಂತೆ ಆದೇಶದಲ್ಲಿ ತಿಳಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್
ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್ ಸಿಟಿ ಅಧಿಕಾರಿ ಶ್ರೀನಿವಾಸ
ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ
Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್
Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್
MUST WATCH
ಹೊಸ ಸೇರ್ಪಡೆ
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ
Ban in Singapore; ಎವರೆಸ್ಟ್ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?
ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ