Heavy Rain ಹಳ್ಳದ ಪ್ರವಾಹದಲ್ಲಿ ಶಾಲಾ ಬಸ್ ನುಗ್ಗಿಸಿದ ಚಾಲಕ: ತಪ್ಪಿದ ಭಾರಿ ಅನಾಹುತ
ಶಾಲಾ ಬಾಲಕರು ಪ್ರಾಣಾಪಾಯದಿಂದ ಪಾರು
Team Udayavani, Sep 26, 2023, 10:55 PM IST
ಸಂಕೇಶ್ವರ : ಮಳೆಯ ಆರ್ಭಟಕ್ಕೆ ಹಳ್ಳದಲ್ಲಿ ಉಂಟಾಗಿದ್ದ ಪ್ರವಾಹದ ನೀರಿನಲ್ಲಿ ಶಾಲಾ ಬಾಲಕರಿದ್ದ ಬಸ್ಸನ್ನು ಎಗ್ಗಿಲ್ಲದೆ ನುಗ್ಗಿಸಿ ಚಾಲಕ ಚಲಾಯಿಸಿದ್ದು, ಇನ್ನೇನು ಬಸ್ ನೀರಲ್ಲಿ ಕೊಚ್ವಿ ಹೋಗುವ ಮಟ್ಟಕ್ಕೆ ಬಂದಾಗ ಎಚ್ಚರಗೊಂಡ ಗ್ರಾಮಸ್ಥರು ಶಾಲಾ ಮಕ್ಕಳನ್ನು ರಕ್ಷಣೆ ಮಾಡಿರುವ ಘಟನೆ ಹುಕ್ಕೇರಿ ತಾಲೂಕಿನ ಎಲಿಮುನ್ನೋಳಿ ಗ್ರಾಮದಲ್ಲಿ ಮಂಗಳವಾರ ಸಂಜೆ ನಡೆದಿದೆ.
ಹುಕ್ಕೇರಿ ತಾಲೂಕಿನಲ್ಲಿ ಮಂಗಳವಾರ ಸಂಜೆಯಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ನದಿ, ಹಳ್ಳಗಳು ತುಂಬಿ ಹರಿಯುತ್ತಿದ್ದು, ಅದೇ ರೀತಿಯಾಗಿ ಎಲಿ ಮುನ್ನೋಳಿ ಗ್ರಾಮದಲ್ಲಿ ಸಂಜೆ ಮಳೆಯ ಆರ್ಭಟಕ್ಕೆ ಗ್ರಾಮದ ಬಳಿ ಇರುವ ಹಳ್ಳದಲ್ಲಿ ಪ್ರವಾಹ ಉಂಟಾಗಿತ್ತು.
ಗ್ರಾಮದ ಖಾಸಗಿ ಶಾಲೆಯ ಮಕ್ಕಳನ್ನು ಹೊತ್ತು ಸಾಗುತ್ತಿದ್ದ ಬಸ್ಸನ್ನು ಚಾಲಕ ಗ್ರಾಮದಲ್ಲಿನ ಈ ಹಳ್ಳದಲ್ಲಿ ಉಂಟಾಗಿದ್ದ ಪ್ರವಾಹದ ನೀರಿಗೆ ನುಗ್ಗಿಸಿ ಚಲಾಯಿಸಿದ್ದಾನೆ.
ಬಳಿಕ ಬಸ್ಸು ಹಳ್ಳದಲ್ಲಿನ ಹೆಚ್ವಿನ ನೀರಿನಲ್ಲಿ ನುಗ್ಗುತ್ತಿದ್ದಂತೆ ಬಸ್ಸು ಅರ್ಧ ಭಾಗ ಮುಳಗಡೆ ಆಗುತ್ತಿರುವುದನ್ನು ಕಂಡ ಕೆಲ ಗ್ರಾಮಸ್ಥರು ಹಳ್ಳದ ದಂಡೆಯಲ್ಲಿ ನಿಂತು ಕೋಗಾಡುತ್ತಿರುವುದನ್ನು ಕಂಡು ಚಾಲಕ ಅರ್ಧದಲ್ಲಿ ಬಸ್ಸನ್ನು ನಿಲ್ಲಿಸಿದ್ದಾನೆ.
ಬಸ್ಸಿನಲ್ಲಿ ಇದ್ದ ಶಾಲಾ ಬಾಲಕರು ಕಿರುಚಾಟ ತೋಡಗಿದ್ದರು. ಬಳಿಕ ಎಚ್ವೆತ್ತ ಗ್ರಾಮಸ್ಥರು ಬಸ್ಸಿನಲ್ಲಿ ಇದ್ದ ಶಾಲಾ ಬಾಲಕನ್ನು ಬಸ್ಸಿನಿಂದ ಹೊರ ತೆಗೆದಿದ್ದಾರೆ. ಇದರಿಂದ ಭಾರಿ ಅನಾಹುತ ಒಂದು ತಪ್ಪಿದಂತಾಗಿದೆ.