ಬೆಳಗಾವಿ ಪತ್ರಕರ್ತರ ಚಿಕಿತ್ಸಾ ಸೌಲಭ್ಯಕ್ಕೆ ಡಿಸಿಎಂ ಸವದಿ ಅಧಿಕಾರಿಗಳಿಗೆ ಸೂಚನೆ
Team Udayavani, May 1, 2021, 9:15 PM IST
ಬೆಳಗಾವಿ: ಜಿಲ್ಲೆಯಲ್ಲಿ 12 ಮಂದಿ ಪತ್ರಕರ್ತರಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಅವರಿಗೆ ಅಗತ್ಯವಾದ ಚಿಕಿತ್ಸಾ ಸೌಲಭ್ಯಗಳನ್ನು ಮತ್ತು ಔಷಧೋಪಚಾರಗಳನ್ನು ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಉಪಮುಖ್ಯಮಂತ್ರಿಗಳು ಮತ್ತು ಸಾರಿಗೆ ಸಚಿವರಾದ ಲಕ್ಷ್ಮಣ ಸವದಿ ಇಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಧಾನ ಕಾರ್ಯದರ್ಶಿಗಳಾಗಿರುವ ಶ್ರೀ ಅಂಜುಂ ಪರ್ವೇಜ್ ಅವರಿಗೆ ಖುದ್ದಾಗಿ ಮಾತನಾಡಿ ಸೂಚನೆ ನೀಡಿದ್ದಾರೆ.
ಪತ್ರಕರ್ತರು ಸಾಮಾನ್ಯವಾಗಿ ತೀವ್ರ ಕೆಲಸದ ಒತ್ತಡದಲ್ಲಿ ಇರುತ್ತಾರೆ. ಅವರು ಸಹ ಸಾರ್ವಜನಿಕರಿಗೆ ಸುದ್ದಿ ನೀಡುವ ಕೆಲಸಕ್ಕಾಗಿ ಕೋವಿಡ್ ವಾರಿಯರ್ಸ್ ಗಳಂತೆ ಸದಾ ದುಡಿಯುತ್ತಿರುತ್ತಾರೆ. ಆದ್ದರಿಂದ ಅವರ ಆರೋಗ್ಯ ಕಾಳಜಿಯೂ ಅಷ್ಟೇ ಮುಖ್ಯ. ಆದ್ದರಿಂದ ಸ್ಥಳೀಯ ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಈ ಪತ್ರಕರ್ತರ ಆರೋಗ್ಯ ಕಾಳಜಿಗೆ ಆದ್ಯತೆ ನೀಡಬೇಕು, ಕ್ವಾರಂಟೈನ್ ಆಗಲಿರುವ ಪತ್ರಕರ್ತರ ಕುಟುಂಬಕ್ಕೆ ಅಗತ್ಯ ವೈದ್ಯಕೀಯ ಮಾರ್ಗದರ್ಶನಗಳನ್ನು ನೀಡಬೇಕು ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ:ಬೆಳಗಾವಿ ಪತ್ರಕರ್ತರ ಚಿಕಿತ್ಸಾ ಸೌಲಭ್ಯಕ್ಕೆ ಡಿಸಿಎಂ ಸವದಿ ಅಧಿಕಾರಿಗಳಿಗೆ ಸೂಚನೆ
ಪಾಸಿಟಿವ್ ದೃಢಪಟ್ಟಿರುವ ಪ್ರಕರಣಗಳಲ್ಲಿ ಪತ್ರಕರ್ತರು ಭಯಪಡದೆ ಸೂಕ್ತ ಮುಂಜಾಗ್ರತೆಯೊಂದಿಗೆ ಹೆಚ್ಚಿನ ಆರೋಗ್ಯ ಕಾಳಜಿ ವಹಿಸಬೇಕು. ಆದಷ್ಟು ಶೀಘ್ರವಾಗಿ ಅವರು ಚೇತರಿಸಿಕೊಂಡು ಮತ್ತೆ ಮೊದಲಿನಂತೆ ಕರ್ತವ್ಯ ನಿರ್ವಹಿಸುವಂತಾಗಲಿ ಎಂದು ಡಿಸಿಎಂ ಸವದಿ ಹಾರೈಸಿದ್ದಾರೆ.