Athani: ಗುಣಮಟ್ಟದ ಶಿಕ್ಷಣ ನೀಡುತ್ತಿವೆ ಖಾಸಗಿ ಶಾಲೆಗಳು- ಶಶಿಕುಮಾರ್
ದೇಶದಲ್ಲಿ 40ಮಿಲಿಯನ್ ಶಿಕ್ಷಕರ ಅವಶ್ಯಕತೆ ಇದೆ
Team Udayavani, Sep 4, 2023, 11:10 AM IST
ಅಥಣಿ: ರಾಷ್ಟ್ರೀಯ ಶೀಕ್ಷಣ ನೀತಿ ಅನುಷ್ಠಾನವಾಗಲಿ. ಅದರ ಮೊದಲ ಮೂರು ಅಂಶಗಳನ್ನು ಮೊದಲು ಜಾರಿಗೆ ತರಲಿ. ಶಿಕ್ಷಣ
ಇಲಾಖೆಯ ಸಿ.ಆರ್.ಪಿ ಮತ್ತು ಬಿ.ಆರ್.ಸಿ ಗಳು ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಪೀಡಿಸುತ್ತಿದ್ದಾರೆ ಎಂದು ಖಾಸಗಿ ಅನುದಾನ ರಹಿತ ಶಾಲಾ ಶಿಕ್ಷಕರ ಸಂಘಟನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್ ಆರೋಪಿಸಿದರು.
ಅವರು ಸ್ಥಳೀಯ ವಿದ್ಯಾವರ್ಧಕ ಶಾಲೆಯಲ್ಲಿ ಅಥಣಿ ತಾಲೂಕು ಅನುದಾನ ರಹಿತ ಖಾಸಗಿ ಶಾಲಾ ಶಿಕ್ಷಕರಿಗೆ ವಿಚಾರ ಸಂಕಿರಣ ಹಾಗೂ ಗುರುಸೇವಾ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ಅತಿ ಹೆಚ್ಚು ಸಮಸ್ಯೆ ಅನುಭವಿಸಿದ್ದು ಖಾಸಗಿ ಶಾಲಾ ಶಿಕ್ಷಕರೇ. ಈ ರಾಜ್ಯದಲ್ಲಿ ಅತಿ ಹೆಚ್ಚಿನ ಅಂಕಗಳನ್ನು ಪಡೆಯುವ ಮಕ್ಕಳಿಗೆ ಪಾಠ ಮಾಡುತ್ತಿರುವುದು ಖಾಸಗಿ ಶಿಕ್ಷಣ ಸಂಸ್ಥೆಗಳು. ಎಲ್ಲ ಶಿಕ್ಷಕರು ತಮ್ಮ ವೃತ್ತಿಧರ್ಮವನ್ನು ಕಾಪಾಡಿಕೊಂಡು ಕೆಲಸ ಮಾಡಬೇಕು. ಸರಕಾರಿ ಶಾಲೆಗಳಲ್ಲಿ ಯಾವುದೇ ಸೌಲಭ್ಯ ಇಲ್ಲ ಎಂದರೂ ನಡೆಯುತ್ತವೆ ಆದರೆ ಖಾಸಗಿ ಶಾಲೆಗಳಿಗೆ ಮಾತ್ರ ಎಲ್ಲ ರೀತಿಯ
ವ್ಯವಸ್ಥೆ ಕೇಳಿ ಅ ಧಿಕಾರಿಗಳು ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ.
2017-18 ರ ನಂತರ ಹೊಸ ಶಾಲೆಗಳನ್ನು ಪ್ರಾರಂಭಿಸಲು ಹಲವಾರು ಕಠಿಣ ನಿಯಮಗಳನ್ನು ಹೇರಿ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ದೂರಿದರು. ರಾಷ್ಟ್ರೀಯ ಶಿಕ್ಷಣ ನೀತಿಯ ನಿಯಮಗಳ ಪ್ರಕಾರ ಕರ್ನಾಟಕದಲ್ಲಿ ಕೆಲಸ ನಿರ್ವಹಿಸಲು ಹೆಚ್ಚಿನ ಶಿಕ್ಷಕರ ಅವಶ್ಯಕತೆ ಇದೆ. ದೇಶದಲ್ಲಿ 40ಮಿಲಿಯನ್ ಶಿಕ್ಷಕರ ಅವಶ್ಯಕತೆ ಇದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ ಮೊರಟಗಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವುದು
ನಮ್ಮ ಕರ್ತವ್ಯ. ಇತ್ತೀಚಿಗೆ ಖಾಸಗಿ ಶಾಲೆಗಳು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುತ್ತಿರುವುದು ಖುಷಿಯ ವಿಚಾರ. ಕಾನೂನು ಚೌಕಟ್ಟಿನ ಒಳಗೆ ಶಿಕ್ಷಣ ಇಲಾಖೆಯ ನಿಯಮಗಳಿಗೆ ಬದ್ಧರಾಗಿ ಶಿಕ್ಷಣ ಸಂಸ್ಥೆಗಳು ಕಾರ್ಯನಿರ್ವಹಿಸಬೇಕು ಎಂದರು.
ಮುಖಂಡ ಶಿವಾನಂದ ಗುಡ್ಡಾಪೂರ ಮಾತನಾಡಿ, ಖಾಸಗಿ ಶಿಕ್ಷಣ ಸಂಸ್ಥೆಗಳ ಸಮಸ್ಯೆಗಳನ್ನು ಬಗೆಹರಿಸುವ ಕಾರ್ಯವಾಗಬೇಕಿದೆ. ಒಂದು ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಬೆಳೆಸಬೇಕಾದರೆ, ಹಲವು ಕಷ್ಟಗಳನ್ನು ಎದುರಿಸಿ ಗೆಲ್ಲಬೇಕಾದರೆ ಅದೊಂದು ಸಾಹಸ ಮಾಡಿದಂತೆ ಎಂದರು.
ಚಿಕ್ಕಟ್ಟಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಸುರೇಶ ಚಿಕ್ಕಟ್ಟಿ ಮಾತನಾಡಿ, ಕೋವಿಡ್ ದಿಂದಾಗಿ ನಮಗೆ ಅನೇಕ ಸಮಸ್ಯೆಗಳು
ಬಂದಾಗಲೂ ನಾವು ಎದೆಗುಂದದೆ ಸಂಸ್ಥೆಯನ್ನು ನಡೆಸಿಕೊಂಡು ಶಿಕ್ಷಕರಿಗೆ ಸಾಲ ಮಾಡಿ ವೇತನ ಪಾವತಿಸಿದ್ದೇವೆ. ಹೀಗೆ ಹತ್ತು ಹಲವು ಸಮಸ್ಯೆಗಳನ್ನು ಎದುರಿಸಿದರೂ ನಮ್ಮ ಕಷ್ಟಗಳಿಗೆ ಸ್ಪಂದಿಸುವ ಕೆಲಸ ಸರ್ಕಾರ ಮಾಡಲಿಲ್ಲ. ನಮ್ಮ ಸಮಸ್ಯೆಗಳಿಗೆ ಸರಕಾರ ಸ್ಪಂದಿಸಬೇಕು ಎಂದರು.
ಸುನೀಲ ಶಿವಣಗಿ, ಎಲ್.ಎನ್ ಬಣಜವಾಡ, ರಮೇಶ ಬುಲಬುಲೆ, ಎಸ್.ಎಮ್ ಲಕ್ಷ್ಮೇಶ್ವರ, ಡಿ.ಡಿ ಮೇಕನಮರಡಿ, ಕೆ.ವಿ ಯಾದವಾಡ, ಎಸ್ .ಎ ಚಿಕ್ಕಟ್ಟಿ, ರಾವಸಾಬ ಐಹೊಳೆ, ಚಿದಾನಂದ ಪಾಟೀಲ, ಕೆ.ಬಿ ಜಾಲವಾದಿ, ಎ.ಎಸ್ ಜೋಶಿ, ಅರುಣ ಮಾಳಿ, ಡಾ ಸುರೇಶ ಇಂಚಗೇರಿ, ಆನಂದ ಕುಲಕರ್ಣಿ, ಸದಾಶಿವ ಚಿಕ್ಕಟ್ಟಿ, ಆರ್. ಎಮ್ ಪಾಟೀಲ, ಮುತ್ತಪ್ಪಾ ಬಡಿಗೇರ,
ರಾಜಕುಮಾರ ದಳವಾಯಿ ಸೇರಿದಂತೆ ಅನೇಕರು ಇದ್ದರು.