ನೆರೆ ಮನೆ ಸಂಕಟ!


Team Udayavani, Sep 23, 2019, 12:03 PM IST

bg-tdy-3

ಬೆಳಗಾವಿ: ನದಿಗಳು ಶಾಂತವಾಗಿವೆ. ಪರಿಹಾರ ಕೇಂದ್ರಗಳ ಬಾಗಿಲು ಮುಚ್ಚಿವೆ. ಮುಳುಗಡೆ ಮತ್ತು ಜಲಾವೃತವಾಗಿದ್ದ ಯಾವ ಗ್ರಾಮದಲ್ಲೂ ಈಗ ಗ್ರಾಮಗಳ ಕಟ್ಟೆಯ ಮೇಲೆ ತಲೆ ಮೇಲೆ ಕೈ ಹೊತ್ತು ಕುಳಿತುಕೊಂಡು ಇಲ್ಲವೇ ಎಲೆ, ಅಡಕೆ ಜಗಿಯುತ್ತ ಕುಳಿತಿರುವ ಜನ ಕಾಣುವುದಿಲ್ಲ.

ಬಿದ್ದ ಮನೆಗಳನ್ನು ಸರಿಪಡಿಸಿಕೊಳ್ಳುವವರು, ಚೆಲ್ಲಾಪಿಲ್ಲಿಯಾಗಿ ಬಿದ್ದಿರುವಪಾತ್ರೆ, ಬಟ್ಟೆ ಬರೆ, ತಗಡುಗಳನ್ನು ಹುಡುಕಿ ಮೊದಲಿನಂತೆ ಮಾಡುವವರು, ಮಕ್ಕಳನ್ನು ಎಂದಿನಂತೆ ಶಾಲೆಗೆ ತಯಾರು ಮಾಡುವವರು, ನಷ್ಟದ ಅಂದಾಜನ್ನು ಅಂಕಿ-ಅಂಶಗಳ ಸಮೇತ ಸಿದ್ಧಪಡಿಸಲು ತಮ್ಮ ಊರಿಗೆ ಬರುವ ಅಧಿಕಾರಿಗಳಿಗೆ, ಸಂಘ ಸಂಸ್ಥೆಗಳ ಪದಾಧಿಕಾರಿಗಳಿಗೆ ನಷ್ಟದ ದಾಖಲೆಗಳನ್ನು ಫೋಟೋ ಸಮೇತ ಸಿದ್ಧ ಮಾಡಿಕೊಳ್ಳುವವರು ಸಿಗುತ್ತಾರೆ. ಮುಳುಗಡೆ ಹಾಗೂ ಜಲಾವೃತವಾಗಿದ್ದ ಗ್ರಾಮಗಳಲ್ಲಿ ಈಗ ಕೆಲಸ ಮಾಡದವರೇ ಇಲ್ಲ. ಸೋಮಾರಿಗಳಿದ್ದರೂ ಅವರ ಸಂಖ್ಯೆ ಬಹಳ ಕಡಿಮೆ. ಗ್ರಾಮಕ್ಕೆ ಯಾರಾದರೂ ಅಧಿಕಾರಿಗಳು, ಅಪರಿಚಿತರು ಅಥವಾ ಸಂಘ ಸಂಸ್ಥೆಗಳ ಸದಸ್ಯರು ಬಂದರೆ ಸಾಕು ಇಡೀ ಗ್ರಾಮಕ್ಕೆ ಗ್ರಾಮವೇ ಅವರನ್ನು ಮುತ್ತಿಕೊಳ್ಳುತ್ತದೆ. ಆಸೆಗಣ್ಣಿನಿಂದ ಹೊಸ ಆಸರೆಗಾಗಿ ಹಾತೊರೆಯುತ್ತಾರೆ. ಬಂದವರು ಅಲ್ಲಿಂದ ಹೋಗಿದ್ದೇ ತಡ ಮತ್ತೆ ಹೊಸ ಬದುಕು ಕಟ್ಟಿಕೊಳ್ಳುವ ಕಾಯಕ ಆರಂಭವಾಗುತ್ತದೆ.

ಕೃಷ್ಣಾ ನದಿ ತೀರದ ಚಿಕ್ಕೋಡಿ, ರಾಯಬಾಗ ಹಾಗೂ ಅಥಣಿ ತಾಲೂಕಿನ ಜನರಿಗೆ ಪ್ರವಾಹ ರೂಢಿಯಾದಂತಾಗಿದೆ. 14 ವರ್ಷಗಳ ಹಿಂದಿನ ಪ್ರವಾಹ ಭೀಕರತೆಯನ್ನು ಅವರು ಈಗಲೂ ನೆನಪು ಮಾಡಿಕೊಳ್ಳುತ್ತಾರೆ. ಎರಡು ಲಕ್ಷ ಕ್ಯೂಸೆಕ್‌ ನೀರು ಅಂದರೆ ಅವರಿಗೆ ಏನೂ ಅಲ್ಲ. ಭಯದ ಮಾತೂ ದೂರ. ಆದರೆ ಈ ಬಾರಿ ಹೆಚ್ಚು ಹೊಡೆತ ತಿಂದವರು ಘಟಪ್ರಭಾ ಹಾಗೂ ಮಲಪ್ರಭಾ ನದಿ ತೀರದ ಜನರು. ಈ ನದಿಗೆ ನಿರ್ಮಾಣ ಮಾಡಿರುವ ಹಿಡಕಲ್‌ ಹಾಗೂ ಮಲಪ್ರಭಾ ಜಲಾಶಯಗಳಿಗೆ ದಾಖಲೆಯ ಪ್ರಮಾಣದಲ್ಲಿ ನೀರು ಹರಿದು ಬಂತು. ಇದರ ನೇರ ಪರಿಣಾಮ ಆಗಿದ್ದು ನದಿ ತೀರದ ಗ್ರಾಮಗಳ ಮೇಲೆ. ರಾತ್ರೋರಾತ್ರಿ ಬರುತ್ತಿದ್ದ ನೀರು ನೆಮ್ಮದಿಯಿಂದ ಇದ್ದ ಜನರ ದಿಕ್ಕು ತಪ್ಪಿಸಿತು. ಮೈಲುಗಟ್ಟಲೇ ನೀರೇ ನೋಡದೇ ಇದ್ದ ಗ್ರಾಮಸ್ಥರು ಯಾಕಾದರೂ ಮಳೆ ಬಂತು ಎಂದು ಶಪಿಸಿಕೊಳ್ಳುವಂತಾಯಿತು. ಒಂದು ತಿಂಗಳ ಹಿಂದೆ ಪ್ರವಾಹ ಸಂತ್ರಸ್ತರ ಕಂಡು ಮರುಗಿದ್ದ ಕಣ್ಣುಗಳು ಈಗ ಅವರ ಧೈರ್ಯ ಹಾಗೂ ಆತ್ಮವಿಶ್ವಾಸಕ್ಕೆ ತಲೆದೂಗುತ್ತಿವೆ. ಗಂಜಿ ಕೇಂದ್ರಗಳಲ್ಲಿ ಇವರಿಗೆ ಊಟ ಹಾಗೂ ವಸತಿಯ ತೊಂದರೆ ಇರಲಿಲ್ಲ. ಆದರೆ ಬಟ್ಟೆ ಬರೆ ಇಲ್ಲದೆ ಭಿಕ್ಷುಕರಂತೆ ಜೀವನ ನಡೆಸಬೇಕಾಗಿದ್ದು ತೀರಾ ನೋವಿನ ಸಂಗತಿ. ಹದಿನೈದು ದಿನಗಳಲ್ಲಿ ನೀರು ಮಾಡಿದ ಅನಾಹುತ ಈಜನರ ಮನದಲ್ಲಿ ಮರೆಯದ ಆಚ್ಚೊತ್ತಿ ನಿಂತಿದೆ.

ಹೊಲದಲ್ಲಿ ಮರಳು ಸಾಮ್ರಾಜ್ಯ : ನನಗೀಗ 75 ವರ್ಷ. 1962ರಿಂದ ಇದುವರೆಗೆ ನಾಲ್ಕೈದು ಪ್ರವಾಹ ನೋಡಿದ್ದೇನೆ. ಆಗ ಇಷ್ಟೊಂದು ನಷ್ಟ ಅಥವಾ ಹೆದರಿಕೆ ಎಂದೂ ಆಗಿಲ್ಲ. ಆದರೆ ಈ ಬಾರಿ ಹೇಳಲೂ ಭಯ. ಮನೆಗಳು ಬಿದ್ದವು. ಹೊಲದಾಗ ನೀರು ಮಾತ್ರ ಅಲ್ಲ ರಾಶಿ ರಾಶಿ ಉಸುಕು ಹಾಗೂ ಕಲ್ಲುಗಳು ಬಂದು ಬಿದ್ದವು. ಅದನ್ನು ಹೇಗೆ ತೆಗೆಯಬೇಕು. ಇದಕ್ಕೆ ನೀವೇ ಪರಿಹಾರ ತೋರಿಸಿ ಎಂದು ಹನುಮಂತಪ್ಪ ಹೇಳಿದಾಗ ಅವರ ಮುಂದಿನ ಬದುಕಿನ ದಾರಿಯ ದುರ್ಗಮತೆಯ ಅರಿವಾಗುತ್ತದೆ. ಈ ಸಲದ ಪ್ರವಾಹ ಭೀಕರ ಹಾಗೂ ಭಯಾನಕ. 14 ವರ್ಷದ ಹಿಂದೆ ಇದೇ ರೀತಿ ಪ್ರವಾಹದಿಂದ ಮನೆ ಮುಳುಗಿತ್ತು. ಈಗ ಮನೆಯ ಜೊತೆಗೆ ಬದುಕೂ ಮುಳುಗಿದೆ. ಸಕ್ಕರೆ, ಕಡ್ಡಿಪೆಟ್ಟಿಗೆ ಸೇರಿದಂತೆ ಎಲ್ಲವನ್ನೂ ಹೊಸದಾಗಿ ಖರೀದಿ ಮಾಡಬೇಕಿದೆ. ಎಲ್ಲವನ್ನೂ ಕಳೆದುಕೊಂಡಿದ್ದೇವೆ. ಮುಂದಿನ ದಾರಿ ಗೊತ್ತಿಲ್ಲ ಎಂದು ಚಿಕ್ಕೋಡಿ ತಾಲೂಕಿನ ಕಲ್ಲೋಳದ ಚಂದ್ರಕಾಂತ ನೋವು ತೋಡಿಕೊಳ್ಳುತ್ತಾರೆ.

 ಗೋಗರೆದಾಗ ನೀರು ಬಿಡಲಿಲ್ಲ!:  ತನ್ನ 80 ವರ್ಷದ ಜೀವನದಲ್ಲಿ ಒಮ್ಮೆಯೂ ಇಷ್ಟೊಂದು ನೀರು ನೋಡದೇ ಇದ್ದ ರಾಮದುರ್ಗ ತಾಲೂಕಿನ ಚಿಕ್ಕಹಳ್ಳಿ ಹಂಪಿಹೊಳಿಯ ಭೀಮಪ್ಪ, ಇದು ನಮ್ಮ ಮೇಲೆ ದೇವರ ಸಿಟ್ಟೋ ಅಥವಾ ಅಧಿಕಾರಿಗಳ ಸಿಟ್ಟೋ ಗೊತ್ತಿಲ್ಲ. ನಮ್ಮಲ್ಲಿ ಮೊದಲೇ ಮಳೆ ಕಡಿಮೆ. ಮೂರು ತಿಂಗಳ ಹಿಂದೆ ಕುಡಿಯಲು ನೀರು ಬಿಡಿ ಎಂದು ಗೋಗರೆದುಕೊಂಡೆವು. ಡ್ಯಾಮ್‌ದಿಂದ ನೀರು ಬಿಡ್ರಿ ಎಂದ್ರೂ ಬಿಡಲಿಲ್ಲ. ಈಗ ನೀರು ಬಿಡಬ್ಯಾಡ್ರಪ ಬಂದ್‌ ಮಾಡಿ ಎಂದರೂ ಬಂದ್‌ ಮಾಡವಲ್ಲರು. ಎಲ್ಲಾ ನೀರಿನಲ್ಲಿ ಕೊಚ್ಚಿಕೊಂಡು ಹೋತು ಎಂದು ಅಳುತ್ತಲೇ ಹೇಳಿದಾಗ ಅಲ್ಲಿನ ಜನ ಎದುರಿಸಿದ ಭಯಾನಕತೆಯ ಅರಿವಾಗುತ್ತದೆ.

ದಟ್ಟ ಮೋಡ ಕವಿದರೆ ಢವಢವ:  ಮನೆಯಲ್ಲಿ ತುಂಬಿಕೊಂಡಿದ್ದ ಕೆಸರು, ನೀರಿನ ಪ್ರವಾಹದ ಜೊತೆಗೆ ಮನೆ ಸುತ್ತಲೂ ಬಂದು ಬಿದ್ದಿದ್ದ ಕಸ ಗುಡಿಸಿ ಸ್ವತ್ಛ ಮಾಡುವದರಲ್ಲಿ ತಲ್ಲೀನವಾಗಿದ್ದ ಹಂಪಿಹೊಳಿಯ ಚಂದ್ರವ್ವ ಚಿಕ್ಕನರಗುಂದ ಈಗ ನೀರು ಕಂಡರೆ ಬೆಚ್ಚಿ ಬೀಳುತ್ತಾರೆ. ನದಿ ಪಕ್ಕದಲ್ಲೇ ಮನೆ ಇರದಿದ್ದರೂ ತಮ್ಮ ಮನೆಯನ್ನು ಸಂಪೂರ್ಣವಾಗಿ ಆವರಿಸಿಕೊಂಡಿದ್ದ ನೀರಿನಿಂದ ಹೆದರಿಕೊಂಡಿರುವ ಚಂದ್ರವ್ವ ಇದುವರೆಗೂ ಅದರಿಂದ ಹೊರಬಂದಿಲ್ಲ. ಮೇಲೆ ದಟ್ಟ ಮೋಡ ಕಾಣಿಸಿದರೆ ಸಾಕು ಎಲ್ಲಿ ಮತ್ತೆ ಡ್ಯಾಮ್‌ದಿಂದ ನೀರು ಬಿಡುತ್ತಾರೆ ಎಂಬ ಚಿಂತೆ ಅವರದ್ದು. ಇದೇ ಭಯದಲ್ಲೇ ಎಲ್ಲವನ್ನೂ ಕಳೆದುಕೊಂಡೆ ಎನ್ನುತ್ತಾರೆ ಒಂದೇ ಮಾತಿನಲ್ಲಿ. ಇದು ಒಬ್ಬಿಬ್ಬರ ನೋವಿನ ಕತೆ. ಸಂಕಟ ಅಲ್ಲ. ಪ್ರವಾಹಕ್ಕೆ ಸಿಲುಕಿದ ಸಾವಿರಾರು ಮಂದಿಯ ಬದುಕಿನ ಚಿತ್ರ. ಒಂದು ರೀತಿಯಲ್ಲಿ ಎಲ್ಲ ಇದ್ದೂ ಇಲ್ಲದಂತಾದವರು. ನದಿಗಳ ಅಬ್ಬರ ಇಳಿದು ಗಂಜಿ ಕೇಂದ್ರಗಳು ಮುಚ್ಚಿದ ನಂತರ ಮತ್ತೂಂದು ಬದುಕು ಕಟ್ಟಿಕೊಳ್ಳಲು ಬಂದಿರುವ ನೂರಾರು ಗ್ರಾಮಗಳ ಜನರಿಗೆ ಈಗ ನಷ್ಟದ ಜೊತೆಗೆ ರೋಗಗಳ ಆತಂಕ. ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದರೂ ಸಂತ್ರಸ್ತರ ಮುಖದಲ್ಲಿ ಮೊದಲಿನ ನಗು ಕಾಣುತ್ತಿಲ್ಲ.

ಎಲ್ಲಿದೆ ನನ್ನ ಆಸ್ತಿ?:  ದಾನಿಗಳು, ಸಂಘ ಸಂಸ್ಥೆಗಳು ಮತ್ತು ಸರ್ಕಾರ ಏನೇ ಕೊಟ್ಟರೂ ಅವರಿಗೆ ಮೊದಲಿದ್ದ ಭದ್ರತೆ, ನೆಮ್ಮದಿ, ಉತ್ಸಾಹ ಹಾಗೂ ಭರವಸೆಗಳನ್ನು ಕೊಡಲಾಗದು. ಸಂಪೂರ್ಣವಾಗಿ ಕುಸಿದು ಹೋದ ಕುಟುಂಬದ ಅರ್ಥಿಕ ಸ್ಥಿತಿಯನ್ನು ಮರು ಸ್ಥಾಪಿಸಿಕೊಳ್ಳುವುದು ಎಷ್ಟು ಕಷ್ಟ ಎಂಬುದು ನೀರಿನಲ್ಲಿ ಎಲ್ಲವನ್ನೂ ಕಳೆದುಕೊಂಡವರಿಗೇ ಗೊತ್ತು. ಸರ್ಕಾರ ಒಂದಿಷ್ಟು ಪರಿಹಾರ, ತಾತ್ಕಾಲಿಕ ಮನೆ, ತಕ್ಷಣಕ್ಕೆ ಅಕ್ಕಿ, ಬೇಳೆ, ಪಾತ್ರೆ ಕೊಡಬಹುದು. ಆದರೆ ಮನೆಯಲ್ಲಿ ಇಟ್ಟಿದ್ದ ಆಪದ್ಧನ, ಬಂಗಾರ, ದವಸ ಧಾನ್ಯದ ದಾಸ್ತಾನು, ಬಟ್ಟೆ ಬರೆ ಎಲ್ಲಕ್ಕಿಂತ ಮುಖ್ಯವಾಗಿ ಇದು ನನ್ನದೇ ಆಸ್ತಿ ಎಂದು ಹೇಳುವ ದಾಖಲೆ, ಕಾಗದಪತ್ರಗಳನ್ನು ಯಾರು ಕೊಡುತ್ತಾರೆ. ಎಷ್ಟೋ ಕಡೆ ಹೊಲಗಳಲ್ಲಿ ಗೇಣುದ್ದ ಉಸುಕು ಹಾಗೂ ಕಲ್ಲುಗಳ ರಾಶಿ ಬಂದು ಬಿದ್ದಿದೆ. ಈ ಹೊಲಗಳು ಮತ್ತೆ   ಉಳುಮೆ ಮಾಡಲು ಬರಬೇಕೆಂದರೆ ಅದಕ್ಕೆ ಲಕ್ಷಗಟ್ಟಲೇ ಖರ್ಚು ಮಾಡಬೇಕು. ಇದೆಲ್ಲವೂ ಸರಿಹೋಗುವದು ಯಾವಾಗ ಎಂಬುದು ಮಾತ್ರ ಯಕ್ಷ ಪ್ರಶ್ನೆ.

 

-ಕೇಶವ ಆದಿ

ಟಾಪ್ ನ್ಯೂಸ್

1-dsad

Odisha ಭೀಕರ ರೈಲು ಅವಘಡ; ಕನಿಷ್ಠ 50 ಮೃತ್ಯು, 350ಕ್ಕೂ ಹೆಚ್ಚು ಮಂದಿಗೆ ಗಾಯ

HDK

ಸಿದ್ದರಾಮಯ್ಯ ಯುವಕರ ಹಣೆಗೆ ತುಪ್ಪ ಸವರಿದ್ದಾರೆ: ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ

1-dsasa

WFI ಬ್ರಿಜ್ ಭೂಷಣ್ ಬಂಧಿಸಲು ಗಡುವು ವಿಧಿಸಿದ ಖಾಪ್ ಮಹಾಪಂಚಾಯತ್

imran-khan

Pakistan ಇಮ್ರಾನ್ ಖಾನ್‌ಗೆ ಭಯೋತ್ಪಾದನಾ ನಿಗ್ರಹ ನ್ಯಾಯಾಲಯದಿಂದ ಜಾಮೀನು

1-SADSAASD

Nithin Gopi: 39 ರ ಹರೆಯದಲ್ಲೇ ನಟ ನಿತಿನ್​ ಗೋಪಿ ವಿಧಿವಶ

1-sdasdasd

Congress Guarantee ನನ್ನ ಹೆಂಡತಿಗೂ ಸಿಗುತ್ತೆ ರೀ; ಸಿದ್ದರಾಮಯ್ಯ ಹಾಸ್ಯ ಚಟಾಕಿ

1-sadasd

Congress Guarantee ”ಅಕ್ಕಿ ನಿಮ್ದು, ಚೀಲ ನಮ್ದು”: ಬಿಜೆಪಿ ತಿರುಗೇಟು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೆಳಗಾವಿ: ತೆಲಸಂಗ ಆಸತ್ರೆಯಲ್ಲಿ ಉಪಯೋಗಕ್ಲಿಲ್ಕ ಬೋರ್‌ವೆಲ್‌

ಬೆಳಗಾವಿ: ತೆಲಸಂಗ ಆಸತ್ರೆಯಲ್ಲಿ ಉಪಯೋಗಕ್ಲಿಲ್ಕ ಬೋರ್‌ವೆಲ್‌

ಬೈಲಹೊಂಗಲ: ಎನ್‌ಎಸ್‌ಎಸ್‌ ವ್ಯಕ್ತಿತ್ವ ವಿಕಸನದ ಗರಡಿಮನೆ

ಬೈಲಹೊಂಗಲ: ಎನ್‌ಎಸ್‌ಎಸ್‌ ವ್ಯಕ್ತಿತ್ವ ವಿಕಸನದ ಗರಡಿಮನೆ

ಮಲೀನವಾಗುತ್ತಿರುವ ಕೃಷ್ಣೆ ಕಾಪಾಡಿ;  ತ್ಯಾಜ್ಯ ವಸ್ತು ಎಸೆಯಬೇಡಿ

ಮಲೀನವಾಗುತ್ತಿರುವ ಕೃಷ್ಣೆ ಕಾಪಾಡಿ; ತ್ಯಾಜ್ಯ ವಸ್ತು ಎಸೆಯಬೇಡಿ

ಕುಡಿಯುವ ನೀರಿನ ಅಭಾವ…: ಮಹಾರಾಷ್ಟ್ರದಿಂದ ನೀರು ಬಿಡುಗಡೆಗೆ ಸಿಎಂ ಸಿದ್ದರಾಮಯ್ಯ ಮನವಿ

ಕರ್ನಾಟಕದಲ್ಲಿ ನೀರಿನ ಅಭಾವ…: ಮಹಾರಾಷ್ಟ್ರದಿಂದ ನೀರು ಬಿಡುಗಡೆಗೆ ಸಿಎಂ ಸಿದ್ದರಾಮಯ್ಯ ಮನವಿ

1-wsdsads

Belagavi: ಕೂದಲೆಳೆ ಅಂತರದಲ್ಲಿ ನಾಗರಹಾವಿನಿಂದ ಬಾಲಕಿ ಬಚಾವ್!

MUST WATCH

udayavani youtube

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

udayavani youtube

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

udayavani youtube

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು

udayavani youtube

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

udayavani youtube

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ

ಹೊಸ ಸೇರ್ಪಡೆ

12-sadsad

Davanagere ವೃದ್ಧರೊಬ್ಬನ್ನು ಅಪಹರಿಸಿ ಭಾರಿ ಹಣಕ್ಕೆ ಬೇಡಿಕೆ; ಐವರ ಬಂಧನ

1-sddasd

SNM ಪಾಲಿಟೆಕ್ನಿಕ್ NSS ನವರಿಂದ ಬಡವರ ಮನೆಗಳಿಗೆ ಕಾಯಕಲ್ಪ

1-wewqewq

Amazon ಫ್ಯಾಷನ್‌ನಿಂದ ವಾರ್ಡ್‌ರೋಬ್‌ ರಿಫ್ರೆಶ್‌ ಸೇಲ್‌ ಆರಂಭ

1-dsad

Odisha ಭೀಕರ ರೈಲು ಅವಘಡ; ಕನಿಷ್ಠ 50 ಮೃತ್ಯು, 350ಕ್ಕೂ ಹೆಚ್ಚು ಮಂದಿಗೆ ಗಾಯ

1-qwwqeqwe

Mahalingpur ಗಾಳಿ ಮಳೆಗೆ ವ್ಯಾಪಕ ನಷ್ಟ; ಹಲವು ಮನೆಗಳಿಗೆ ಹಾನಿ, ಪರದಾಟ