Winter Assembly session ಬೈಂದೂರು ಕಿಂಡಿ ಅಣೆಕಟ್ಟು: ತನಿಖೆಗೆ ಆಗ್ರಹ
Team Udayavani, Dec 5, 2023, 12:17 AM IST
ಬೆಳಗಾವಿ: ಬೈಂದೂರು ವಿಧಾನಸಭಾ ಕ್ಷೇತ್ರವ್ಯಾಪ್ತಿಯಲ್ಲಿ 14 ಕಿಂಡಿ ಅಣೆಕಟ್ಟುಗಳು ಅವೈಜ್ಞಾನಿಕ ಹಾಗೂ ಅಸಮರ್ಪಕವಾಗಿದದ್ದು, ನೀರಿನ ಹರಿವೇ ಇಲ್ಲದ ಜಾಗದಲ್ಲೂ ನಿರ್ಮಿಸಲಾಗಿದೆ. ಈ ಬಗ್ಗೆ ಮೂರನೇ ವ್ಯಕ್ತಿಯಿಂದ ತನಿಖೆ ನಡೆಸಬೇಕು ಎಂದು ಬಿಜೆಪಿಯ ಗುರುರಾಜ್ ಗಂಟಿಹೊಳೆ ಆಗ್ರಹಿಸಿದರು.
ಗಮನ ಸೆಳೆಯುವ ಸೂಚನೆ ವೇಳೆ ವಿಷಯ ಪ್ರಸ್ತಾವಿಸಿದ ಅವರು, ಸಿಹಿ ನೀರನ್ನು ಸಂಗ್ರಹಿಸಿ, ಅಂತರ್ಜಲ ಹೆಚ್ಚಿಸುವ ಉದ್ದೇಶದಿಂದ ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಲಾಗಿದೆ. ಆದರೆ ಉದ್ದೇಶವೇ ಈಡೇರದಂತೆ ಯೋಜನೆಯನ್ನು ನಿರ್ವಹಿಸಿದ್ದು, ಅಧಿಕಾರಿಗಳಿಗೆ ಕರಾವಳಿ ಭಾಗದ ಸಮಸ್ಯೆಗಳನ್ನು ಅರ್ಥ ಮಾಡಿಸುವುದೇ ಕಷ್ಟವಾಗಿದೆ ಎಂದರು.
ಮರವಂತೆ, ಗಂಗೊಳ್ಳಿ ಜಟ್ಟಿ ನಿರ್ಮಾಣದಂತಹ ಕಾಮಗಾರಿಗಳಿಗೆ ಸಿಆರ್ಝಡ್ ಸಮಸ್ಯೆಯಿಂದ ಹಿನ್ನಡೆಯಾಗಿದೆ. ಇಂತಹ ಸಾಕಷ್ಟು ಸಮಸ್ಯೆಗಳಿವೆ. ಇವುಗಳಿಗೆ ಇದುವರೆಗೆ ಪರಿಹಾರ ಸಿಕ್ಕಿಲ್ಲ. 14 ಕಿಂಡಿ ಅಣೆಕಟ್ಟುಗಳ ವಿಚಾರದಲ್ಲಿ ತನಿಖೆ ಆಗಲೇಬೇಕು ಎಂದು ಆಗ್ರಹಿಸಿದರು.ಇದಕ್ಕೆ ಉತ್ತರಿಸಿದ ಸಣ್ಣ ನಿರಾವರಿ ಸಚಿವ ಎನ್.ಎಸ್. ಭೋಸರಾಜು, ಹಲವಾರು ಕಿಂಡಿ ಅಣೆಕಟ್ಟುಗಳು ಸಮರ್ಪಕವಾಗಿ ಕೆಲಸ ನಿರ್ವಹಿ ಸುತ್ತಿವೆ. ಅಸಮರ್ಪಕವಾಗಿರುವ ನಿರ್ದಿಷ್ಟ ಪ್ರಕರಣ ಗಳಿದ್ದರೆ ತನಿಖೆಗೆ ವಹಿಸಲಾಗುವುದು ಎಂದರು.
ಶಿಷ್ಯವೇತನ ತಾರತಮ್ಯ ನಿವಾರಣೆಗೆ ಆಗ್ರಹ
ಬೆಳಗಾವಿ: ಒಂದು ಕೋರ್ಸ್ಗೆ ಒಂದೇ ರೀತಿಯ ಶಿಷ್ಯವೇತನ ನೀಡಬೇಕು. ಈ ಮೂಲಕ ತಾರತಮ್ಯ ಹೋಗಲಾಡಿಸಬೇಕೆಂದು ಕಾಂಗ್ರೆಸ್ನ ಮಂಜುನಾಥ್ ಭಂಡಾರಿ ಮನವಿ ಮಾಡಿದರು.
ವಿಧಾನ ಪರಿಷತ್ತಿನಲ್ಲಿ ಪ್ರಶ್ನೋತ್ತರ ವೇಳೆ ವಿಷಯ ಪ್ರಸ್ತಾವಿಸಿದ ಅವರು, ಶಿಷ್ಯವೇತನವನ್ನು ಉನ್ನತ ಶಿಕ್ಷಣ ಇಲಾಖೆ ಅಡಿ ಒಗ್ಗೂಡಿಸಿ ಏಕಶಿಷ್ಯವೇತನ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಕೋರ್ಸ್ಗಳಲ್ಲೂ ಏಕರೂಪದ ಶಿಷ್ಯವೇತನ ಪದ್ಧತಿ ಜಾರಿಗೊಳಿಸಬೇಕು ಎಂದು ಹೇಳಿದರು.
ಪ್ರಸ್ತುತ ವಿವಿಧ ಕೋರ್ಸ್ಗಳಿಗೆ ವಿದ್ಯಾರ್ಥಿಗಳಿಗೆ ನೀಡಲಾಗುವ ಶಿಷ್ಯವೇತನದಲ್ಲಿ ವ್ಯತ್ಯಾಸ ಇದೆ. ಇದರಿಂದ ಮೆರಿಟ್ ವಿದ್ಯಾರ್ಥಿಗಳಿಗೆ ಕಡಿಮೆ ಶಿಷ್ಯವೇತನ ದೊರೆತರೆ, ಕಡಿಮೆ ರ್ಯಾಂಕ್ ಪಡೆದ ವಿದ್ಯಾರ್ಥಿಗೆ ಹೆಚ್ಚು ಶಿಷ್ಯವೇತನ ಸಿಗುವ ಸಾಧ್ಯತೆ ಇದೆ ಎಂದರು.
ಇದಕ್ಕೆ ಉನ್ನತ ಶಿಕ್ಷಣ ಸಚಿವ ಡಾ| ಎಂ.ಸಿ.ಸುಧಾಕರ್ ಪರವಾಗಿ ಪ್ರತಿಕ್ರಿಯಿಸಿದ ಸಭಾನಾಯಕ ಬೋಸರಾಜು ಅವರು, ಇದು ಉತ್ತಮ ಸಲಹೆಯಾಗಿದ್ದು, ಈ ನಿಟ್ಟಿನಲ್ಲಿ ಪರಿಶೀಲಿಸಲಾಗುವುದು ಎಂದರು.
ಬೆನ್ನು ಹುರಿ ಅಪಘಾತ: ಸಹಾಯಧನಕ್ಕೆ ಆಗ್ರಹ
ಬೆಳಗಾವಿ: ರಾಜ್ಯದಲ್ಲಿ ಬೆನ್ನುಹುರಿ ಅಪಘಾತದಿಂದ ಸುಮಾರು 20 ಸಾವಿರಕ್ಕೂ ಅಧಿಕ ಅಂಗವೈಕಲ್ಯರಾಗಿದ್ದಾರೆ. ಅಂಥವರಿಗೆ ಸರಕಾರ ಮಾಸಿಕ ಕನಿಷ್ಠ 5 ಸಾವಿರ ರೂ. ಸಹಾಯಧನ ನೀಡಬೇಕೆಂದು ಕೆ. ಹರೀಶ್ ಕುಮಾರ್ ಆಗ್ರಹಿಸಿದರು.
ವಿಧಾನ ಪರಿಷತ್ತಿನ ಪ್ರಶ್ನೋತ್ತರ ವೇಳೆ ವಿಷಯ ಪ್ರಸ್ತಾವಿಸಿದ ಅವರು, ಬೆನ್ನುಹುರಿ ಅಪಘಾತದಿಂದ ಅಂಗವಿಕಲರಾದವರಿಗೆ ಸರ ಕಾರ ಮಾಸಿಕ 1,500 ರೂ. ನೀಡುತ್ತಿದೆ. ಇದು ಯಾವುದಕ್ಕೂ ಸಾಕಾಗುತ್ತಿಲ್ಲ ಎಂದರು.
ಅಲ್ಲದೆ, ಅಂಗವಿಕಲ ಹಕ್ಕುಗಳ ಕಾಯ್ದೆ ಪ್ರಕಾರ ರಾಜ್ಯ ಸಲಹಾ ಸಮಿತಿ ಅವಧಿ ಪೂರ್ಣಗೊಂಡಿದೆ. ಹೊಸದಾಗಿ ಸಮಿತಿ ರಚಿಸಿಲ್ಲ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಚಿಕಿತ್ಸಾ ಕೇಂದ್ರಗಳನ್ನು ತೆರೆಯಬೇಕು ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಇದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ವಿಶಿಷ್ಟ ಚೇತನರು ಮತ್ತು ಹಿರಿಯ ನಾಗರಿಕರ ಸಬಲೀಕರಣ ವ್ಯಾಪ್ತಿಗೆ ಬರುತ್ತದೆ. ಸಂಬಂಧಪಟ್ಟ ಸಚಿವರ ಗಮನಕ್ಕೆ ತಂದು ಕ್ರಮ ಕೈಗೊಳ್ಳಲಾಗುವುದು ಎಂದರು.