Bellary: ಸಚಿವ ನಾಗೇಂದ್ರರನ್ನು ಭೂತ, ಮದವೇರಿದ ಆನೆ, ಕುತಂತ್ರ ನರಿ ಎಂದ ಶ್ರೀರಾಮುಲು
Team Udayavani, Apr 2, 2024, 3:58 PM IST
ಬಳ್ಳಾರಿ: ಬಳ್ಳಾರಿಯಲ್ಲಿ ಸಚಿವ ನಾಗೇಂದ್ರ ಹಾಗೂ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಟಾಕ್ ವಾರ್ ಮುಂದುವರಿದಿದೆ. ಶ್ರೀರಾಮುಲು ಅವರು ಸಚಿವ ನಾಗೇಂದ್ರರನ್ನು ಭೂತ, ಮದವೇರಿ ಆನೆ, ಕುತಂತ್ರ ನರಿಗೆ ಹೋಲಿಕೆ ಮಾಡಿದ್ದಾರೆ.
ನಿನ್ನೆ ಮೋಕಾ ಗ್ರಾಮದಲ್ಲಿ ಸಚಿವ ನಾಗೇಂದ್ರ ಅವರು ಮೋಕಾ ಹೋಬಳಿ ಒಂದು ಮತ ಲೀಡ್ ತೆಗೆದುಕೊಂಡು ತೋರಿಸಿ ಎಂದು ಸವಾಲು ಹಾಕಿದ್ದರು.
ಸವಾಲು ಹಾಕಿದ್ದ ಸಚಿವ ನಾಗೇಂದ್ರಗೆ ಪರೋಕ್ಷವಾಗಿ ಮಧ್ಯೆ ರಾತ್ರಿಯಲ್ಲಿ ಹುಟ್ಟಿದ ನಾಯಕ ಎಂದು ಶ್ರೀರಾಮುಲು ಟೀಕೆ ಮಾಡಿದ್ದಾರೆ.
ಮಧ್ಯರಾತ್ರಿಯಲ್ಲಿ ಹುಟ್ಟಿದವರೆಲ್ಲ ಹಂಗೆ ಮಾತನಾಡುತ್ತಾರೆ. ಆನೆಗೆ ಮದ ಏರಿದಾಗ ಹೇಗೆ ಮಾಡತ್ತದೋ ಹಾಗೆ ಇವರಿಗೆ ಮದ ಏರಿದೆ. ನರಿಗಳ ರೀತಿ ಕುತಂತ್ರ ಮಾಡುತ್ತಿದ್ದಾರೆ, ಇದ್ದಕ್ಕೆಲ್ಲ ಕಾಲ ಉತ್ತರ ಕೊಡತ್ತದೆ ಎಂದು ರಾಮುಲು ಹೇಳಿದ್ದಾರೆ.
ಯಾರೋ ಹೆಸರು ಹೇಳಿಕೊಂಡು ಯಾರೋ ದೊಡ್ಡವರಾದರು ಎನ್ನುವ ಹಾಗೆ ಇವರು ದೊಡ್ಡವರಾದವರು. ಇವರು ಮಾತುಗಳು ಭೂತದ ಬಾಯಲ್ಲಿ ಬಂದ ಭಗವದ್ಗೀತೆ ಇದ್ದ ಹಾಗೆ. ಮುಂಬರುವ ದಿನಗಳಲ್ಲಿ ಯಾರು ಕೌರವರು ಯಾರು ಪಾಂಡವರು ಎಂದು ಜನ ತೀರ್ಮಾನ ಮಾಡುತ್ತಾರೆ ಎಂದು ಬಳ್ಳಾರಿಯಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಹೇಳಿದ್ದಾರೆ.