
ಅಭ್ಯರ್ಥಿಗಳು ತಮ್ಮ ಅಪರಾಧದ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟಿಸಬೇಕು; ಪವನ್ ಕುಮಾರ್
Team Udayavani, Mar 29, 2023, 9:44 PM IST

ಬಳ್ಳಾರಿ: ರಾಜ್ಯ ವಿಧಾನಸಭೆ ಸಾರ್ವತ್ರಿಕ ಚುನಾವಣೆ ಘೋಷಣೆಯಾಗಿದ್ದು, ಸ್ಪರ್ಧಿಸುವ ಅಭ್ಯರ್ಥಿಗಳು ತಮ್ಮ ಅಪರಾಧ ಹಿನ್ನೆಲೆಯಿದ್ದಲ್ಲಿ ಸುಪ್ರೀಂಕೋರ್ಟ್ ನಿರ್ದೇಶನದಂತೆ ಪತ್ರಿಕೆಗಳಲ್ಲಿ ಪ್ರಕಟಿಸಿ ಮತದಾರರಿಗೆ ಮಾಹಿತಿ ನೀಡಬೇಕು. ಜತೆಗೆ ಆಯಾ ಪಕ್ಷಗಳು ಸಹ ಆ ಬಗ್ಗೆ ಪತ್ರಿಕೆಗಳ ಮೂಲಕವೇ ಸ್ಪಷ್ಟೀಕರಣ ನೀಡಬೇಕು ಎಂದು ಜಿಲ್ಲಾಧಿಕಾರಿ, ಜಿಲ್ಲಾ ಚುನಾವಣಾಧಿಕಾರಿ ಪವನ್ ಕುಮಾರ್ ಮಾಲಪಾಟಿ ಹೇಳಿದರು.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಬುಧವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಸುಪ್ರೀಂಕೋರ್ಟ್ ನಿರ್ದೇಶನದಂತೆ 12 ದಿನಗಳ ಅವಧಿಯೊಳಗೆ ಪ್ರತಿ ನಾಲ್ಕು ದಿನಕ್ಕೊಮ್ಮೆ ತಮ್ಮ ಅಪರಾಧದ ಕುರಿತು ಪತ್ರಿಕೆಗಳಲ್ಲಿ ಪ್ರಕಟಿಸಬೇಕು. ಜತೆಗೆ ಅಪರಾಧ ಹಿನ್ನೆಲೆಯುಳ್ಳವರಿಗೆ ಟಿಕೇಟ್ ನೀಡಲು ಕಾರಣವೇನು ಎಂಬುದನ್ನು ಆಯಾ ಪಕ್ಷಗಳು ಸಹ ಪತ್ರಿಕೆಗಳ ಮೂಲಕ ಸ್ಪಷ್ಟನೆ ನೀಡಬೇಕು. ಈ ಮೂಲಕ ಅಭ್ಯರ್ಥಿಗಳೇ ತಮ್ಮ ಹಿನ್ನೆಲೆ ಕುರಿತು ಮತದಾರರಿಗೆ ಸ್ಪಷ್ಟಪಡಿಸಬೇಕು. ಜತೆಗೆ ಅಭ್ಯರ್ಥಿಗಳು ಸಲ್ಲಿಸುವ ಅಫಿಡವಿಟ್ನಲ್ಲೂ ಈ ಕುರಿತು ಸ್ವಯಂಘೋಷಣೆ ಮಾಡಿಕೊಂಡಿರಬೇಕು. ಒಂದು ವೇಳೆ ಇದು ಆಗದಿದ್ದಲ್ಲಿ ನಾವು ಸುಪ್ರೀಂಕೋರ್ಟ್ ಮಾಹಿತಿ ಸಲ್ಲಿಸುತ್ತೇವೆ. ನಂತರ ಕೋರ್ಟ್ ಕ್ರಮಕೈಗೊಳ್ಳಲಿದೆ ಎಂದು ಸ್ಪಷ್ಟಪಡಿಸಿದರು.
ಆನ್ಲೈನ್ನಲ್ಲಿ ನಾಮಪತ್ರ;
ಚುನಾವಣಾ ಆಯೋಗ ಮೊದಲ ಬಾರಿಗೆ ಆನ್ಲೈನ್ ಮೂಲಕ ನಾಮಪತ್ರ ಸಲ್ಲಿಸಲು ಅವಕಾಶ ಕಲ್ಪಿಸಿದೆ. ಸುವಿಧಾ ಪೋರ್ಟಲ್ನಲ್ಲಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿ, ಬಳಿಕ ಆ ಪ್ರತಿಗಳನ್ನು ಚುನಾವಣಾಧಿಕಾರಿಗಳಿಗೆ ಸಲ್ಲಿಸಬೇಕು.
ಪ್ರತ್ಯೇಕ ಖಾತೆ;
ಅಭ್ಯರ್ಥಿಗಳಿಗೆ ಚುನಾವಣಾ ಖರ್ಚನ್ನು ಗರಿಷ್ಠ ೪೦ ಲಕ್ಷ ರೂ.ಗಳಿಗೆ ನಿಗದಿಪಡಿಸಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಬ್ಬ ಲೆಕ್ಕಾಧಿಕಾರಿಯೊಬ್ಬರನ್ನು ನಿಯೋಜಿಸಲಾಗುತ್ತದೆ. ಚುನಾವಣಾ ಖರ್ಚು ವೆಚ್ಚಕ್ಕಾಗಿ ಅಭ್ಯರ್ಥಿಗಳು ಪ್ರತ್ಯೇಕವಾಗಿ ಒಂದು ಬ್ಯಾಂಕ್ ಖಾತೆಯನ್ನು ತೆರೆಯಬೇಕು. ಚುನಾವಣೆಗೆ ಸಂಬಂಧಿಸಿದ ಎಲ್ಲ ಖರ್ಚು ವೆಚ್ಚಗಳನ್ನು ಅವರು ಈ ಖಾತೆಯ ಮೂಲಕವೇ ಹಣ ಪಾವತಿಸಬೇಕು. ಅವರು ಚೆಕ್ ಅಥವಾ ಆನ್ಲೈನ್ ಮೂಲಕವಾದರೂ ಪಾವತಿ ಮಾಡಿಕೊಳ್ಳಬಹುದು. ಈ ಕುರಿತು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಬೇಡ. ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಟಾಪ್ ನ್ಯೂಸ್
