ಹರಪನಹಳ್ಳಿ: ಬಟ್ಟೆ ತೊಳೆಯಲು ಗೋಕಟ್ಟೆಗೆ ತೆರಳಿದ್ದ ನಾಲ್ವರು ನೀರಿನಲ್ಲಿ ಮುಳುಗಿ ಸಾವು
Team Udayavani, Nov 2, 2022, 3:29 PM IST
ಹರಪನಹಳ್ಳಿ: ಬಟ್ಟೆ ತೊಳೆಯಲು ಗೋಕಟ್ಟೆಗೆ ತೆರಳಿದ್ದ ನಾಲ್ವರು ಕಾಲು ಜಾರಿ ಬಿದ್ದು ಮೃತಪಟ್ಟಿರುವ ದಾರುಣ ಘಟನೆ ತಾಲೂಕಿನ ಚನ್ನಹಳ್ಳಿ ತಾಂಡದಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ.
ಚನ್ನಹಳ್ಳಿ ತಾಂಡದ ಕಾವ್ಯಾಂಜಲಿ (21) ನಂದಿಬೇವೂರು ತಾಂಡದ ಅಭಿಷೇಕ (15), ಹಾಗೂ ಕುಮಾರಿ ಅಶ್ವಿನಿ (18) ಮತ್ತು ತುಂಬಿನಕೇರಿ ದೊಡ್ಡತಾಂಡದ ಕು.ಅಪೂರ್ವ (14) ಮೃತಪಟ್ಟ ದುರ್ದೈವಿಗಳು.
ಮೃತರು ಬಟ್ಟೆ ತೊಳೆಯಲು ಬುಧವಾರ ಚನ್ನಹಳ್ಳಿ ತಾಂಡದ ಸಮೀಪದಲ್ಲಿರುವ ಗೋಕಟ್ಟೆಗೆ ತೆರಳಿದ್ದಾರೆ ಆ ಸಂದರ್ಭದಲ್ಲಿ ಮೊದಲಿಗೆ ಅಭಿಷೇಕ್ ಎಂಬುವರು ಕಾಲು ಜಾರಿ ಬಿದ್ದು ನೀರಿನಲ್ಲಿ ಮುಳುಗಿದ್ದಾನೆ.
ನೀರಿನಲ್ಲಿ ಬಿದ್ದ ಅಭಿಷೇಕನನ್ನು ರಕ್ಷಿಸಲು ಹೋಗಿ ಕಾವ್ಯಾಂಜಲಿ ಸಹ ಆಯಾತಪ್ಪಿ ನೀರಿನಲ್ಲಿ ಬಿದ್ದಿದ್ದಾಳೆ. ಕಾವ್ಯಾಂಜಲಿ ಉಳಿಸಲು ಹೋಗಿ ಕುಮಾರಿ ಅಪೂರ್ವ ಮತ್ತು ಅಶ್ವಿನಿ ಇವರು ಸಹ ನೀರಿನಲ್ಲಿ ಮುಳುಗಿದ್ದಾರೆ ಹೀಗೆ ಮೂವರು ಯುವತಿಯರು ಒಬ್ಬ ಬಾಲಕ ಸೇರಿ ಒಟ್ಟು ನಾಲ್ಕು ಜನ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಮೃತ ದೇಹಗಳನ್ನು ಘಟನಾ ಸ್ಥಳದಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿ ಆಯಾ ಪೋಷಕರಿಗೆ ಒಪ್ಪಿಸಲಾಗಿದೆ, ಈ ಸಂಬಂದ ಹರಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.