ಬಿಡಾಡಿ ದನಗಳ ಹಾವಳಿ: ಕ್ರಮ ಕೈಗೊಳ್ಳದ ಮುಖ್ಯಾಧಿಕಾರಿ
Team Udayavani, Dec 6, 2021, 2:39 PM IST
ಹಟ್ಟಿಚಿನ್ನದಗಣಿ: ಹಟ್ಟಿ ಪಟ್ಟಣ ಹಾಗೂ ಕ್ಯಾಂಪ್ ಪ್ರದೇಶದಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು, ವಾಹನ ಸವಾರರು, ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.
ಪಟ್ಟಣದ ಕೋಠಾ ರಸ್ತೆ, ಕ್ಯಾಂಪ್ನ ಗಾಂಧಿ ಮೈದಾನ ರಸ್ತೆ ಸೇರಿದಂತೆ ಹಳೇ ಬಸ್ ನಿಲ್ದಾಣದಿಂದ ಕ್ಯಾಂಪ್ ಬಸ್ ನಿಲ್ದಾಣದವರೆಗೆ ಅಲ್ಲಲ್ಲಿ ಪ್ರಮುಖ ರಸ್ತೆಗಳ ಮಧ್ಯೆಯೇ ಜಾನುವಾರುಗಳು ಠಿಕಾಣಿ ಹೂಡುತ್ತಿವೆ. ಇದರಿಂದ ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದ್ದು, ನಡೆದು ಹೋಗುವ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಮಕ್ಕಳು-ಮಹಿಳೆಯರು ಆತಂಕದಲ್ಲಿ ಸಂಚರಿಸುವಂತಾಗಿದೆ. ಅಲ್ಲದೇ ತರಕಾರಿ ಅಂಗಡಿಗಳ ಹತ್ತಿರ, ಬೇಕರಿಗಳ ಮುಂದೆ ಅಲೆದಾಡುತ್ತಾ ವ್ಯಾಪಾರಸ್ಥರಿಗೆ ಹಾಗೂ ಗ್ರಾಹಕರಿಗೆ ತೊಂದರೆ ನೀಡುತ್ತಿವೆ. ಬಿಡಾಡಿ ದನಗಳ ಉಪಟಳಕ್ಕೆ ಪರಿಹಾರ ಒದಗಿಸಲು ಪಪಂ ಮುಖ್ಯಾಧಿಕಾರಿ ಅಭಿಷೇಕ ಪಾಂಡೆ ನಿರ್ಲಕ್ಷ್ಯ ವಹಿಸಿದ್ದಾರೆಂದು ಸಾರ್ವಜನಿಕರಿಂದ ಆರೋಪ ಕೇಳಿ ಬರುತ್ತಿದೆ.
ಈ ಹಿಂದೆ ಬಿಡಾಡಿ ದನಗಳು ಹಾಗೂ ಹಂದಿಗಳನ್ನು ನಿಯಂತ್ರಿಸಬೇಕೆಂದು ಮುಖಂಡ ಶಿವರಾಜ ಕಂದಗಲ್ ಸೇರಿದಂತೆ ಸಾರ್ವಜನಿಕರು ಹಲವು ಬಾರಿ ಮನವಿ ಮಾಡಿದ್ದರು. ಪಪಂ ಮುಖ್ಯಾ ಧಿಕಾರಿಗಳು ಪತ್ರಿಕಾ ಪ್ರಕಟಣೆ ಹೊರಡಿಸಿ, ದನ ಹಾಗೂ ಹಂದಿಗಳ ಮಾಲೀಕರು ಜಾನುವಾರುಗಳನ್ನು ತಮ್ಮ ಸ್ವಂತ ಜಾಗದಲ್ಲಿಯೇ ಕಟ್ಟಿಕೊಳ್ಳಬೇಕೆಂದು ಆದೇಶಿಸಿ, 15 ದಿನಗಳ ಗಡುವು ನೀಡಿದ್ದರು. ಬಿಡಾಡಿ ದನಗಳು ರಸ್ತೆ ಮಧ್ಯೆಯೇ ಮಲಗಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿವೆ. ಹಾಗಾಗಿ ಮುಖ್ಯಾಧಿಕಾರಿಗಳು ಕೂಡಲೇ ಜಾನುವಾರುಗಳ ವಾರಸುದಾರರಿಗೆ ಖಡಕ್ ಎಚ್ಚರಿಕೆ ನೀಡಿ, ಬಿಡಾಡಿ ದನಗಳನ್ನು ನಿಯಂತ್ರಿಸಬೇಕೆಂಬುದು ಸಾರ್ವಜನಿಕರ ಒತ್ತಾಯ.