ಸಿಡಿ ಬ್ಲ್ಯಾಕ್ ಮೇಲ್ ಬಗ್ಗೆ ಸಿಬಿಐ ತನಿಖೆ ಆಗಲಿ: ಪಾಟೀಲ
ಬ್ಲ್ಯಾಕ್ ಮೇಲ್ ಮಾಡಿ ಸಚಿವ ಸ್ಥಾನ ಪಡೆದಿದ್ದಾರೆ ಎಂಬುದು ಕಾಂಗ್ರೆಸ್ ಆರೋಪವಲ್ಲ.
Team Udayavani, Jan 18, 2021, 6:03 PM IST
ಬೀದರ: ಸಚಿವ ಸ್ಥಾನಕ್ಕಾಗಿ ಸಿಎಂ ವಿರುದ್ಧ ಬ್ಲ್ಯಾಕ್ ಮೇಲ್ ಪ್ರಜಾಪ್ರಭುತ್ವಕ್ಕೆ ಕಪ್ಪು ಮಸಿ ಬಳೆದಂಥ ಘಟನೆ. ಈ ಆರೋಪ ಕುರಿತಂತೆ ಸಿಬಿಐ ತನಿಖೆ ನಡೆಸಿ ಸತ್ಯಾಂಶ ಹೊರತರಬೇಕು ಎಂದು ಮಾಜಿ ಸಚಿವ ಶರಣಪ್ರಕಾಶ ಪಾಟೀಲ ಆಗ್ರಹಿಸಿದರು.
ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ಲ್ಯಾಕ್ವೆುಲ್ ಘಟನೆ ರಾಜಕಾರಣಿಗಳ ಬಗ್ಗೆ ಜನರಲ್ಲಿ ಅಪಹಾಸ್ಯ ಮೂಡುವಂತಾಗಿದೆ. ಶಾಸಕರು ಸಿಡಿ ಮೂಲಕ ಬ್ಲ್ಯಾಕ್ ಮೇಲ್ ಮಾಡಿ ಸಚಿವ ಸ್ಥಾನ ಪಡೆದಿದ್ದಾರೆ ಎಂಬುದು ಕಾಂಗ್ರೆಸ್ ಆರೋಪವಲ್ಲ. ಬದಲಾಗಿ ಆಡಳಿತಾರೂಢ ಪಕ್ಷದ ಹಿರಿಯ ಶಾಸಕರೇ ಮಾಡಿದ್ದಾರೆ. ಹಾಗಾಗಿ ನೀತಿಗಳ ಬಗ್ಗೆ ಮಾತನಾಡುವ ಪ್ರಧಾನಿ ಮೋದಿ ಸಿಬಿಐ ಮೂಲಕ ವಿಪಕ್ಷಗಳನ್ನು ಬಗ್ಗು ಬಡೆಯುವುದನ್ನು ಬಿಟ್ಟು ಈ ಘಟನೆ ಬಗ್ಗೆ ಕ್ರಮ ಕೈಗೊಂಡು ನೈತಿಕತೆ ಪ್ರದರ್ಶಿಸಲಿ. ಕೂಡಲೇ ಸಿಬಿಐ ಅಥವಾ ನ್ಯಾಯಾಂಗ ತನಿಖೆ ನಡೆಸಲಿ ಎಂದರು.
20ಕ್ಕೆ ರಾಜಭನಕ್ಕೆ ಮುತ್ತಿಗೆ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳು ರೈತರಿಗೆ ಕರಾಳ ಕಾಯ್ದೆ ಆಗಿವೆ. ಇದರ ಹಿಂದೆ ಬಂಡವಾಳ ಶಾಹಿಗಳಿಗೆ ಕೃಷಿ ಕ್ಷೇತ್ರದಲ್ಲಿ ಅನುಕೂಲ ಮಾಡಿಕೊಡುವುದು ಬಿಜೆಪಿಸರ್ಕಾರ ಮತ್ತು ಆರ್ಎಸ್ಎಸ್ ಅಜೆಂಡಾ ಆಗಿದೆ. ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ಕಾಂಗ್ರೆಸ್ಪಕ್ಷ ದೇಶಾದ್ಯಂತ ಹೋರಾಟ ರೂಪಿಸಿದ್ದು, ಜ.20ರಂದು ಬೆಂಗಳೂರಿನಲ್ಲಿ ರಾಜ್ಯಮಟ್ಟದ “ಕಿಸಾನ್ ಅ ಧಿಕಾರ ದಿವಸ್’ ಪ್ರತಿಭಟನೆ ಹಮ್ಮಿಕೊಳ್ಳ ಲಾಗಿದೆ. ಅಂದು ಬೆ.10ಕ್ಕೆ ಫ್ರೀಡಂ ಪಾರ್ಕ್ನಿಂದ ರಾಜಭನವರೆಗೆ ರ್ಯಾಲಿ ಮೂಲಕ ತೆರಳಿ ಮುತ್ತಿಗೆ ಹಾಕಲಾಗುವುದು ಎಂದರು.
ಕರಾಳ ಕಾಯ್ದೆಗಳ ವಿರುದ್ಧ ರೈತ ಸಂಘಟನೆಗಳು ಕಳೆದ 50 ದಿನಗಳಿಂದ ತೀವ್ರ ಚಳಿಯಲ್ಲಿಯೂ ಹೋರಾಟ ನಡೆಸುತ್ತಿದ್ದು, 50 ಜನ ತಮ್ಮ ಪ್ರಾಣವನ್ನು ಸಹ ಕಳೆದುಕೊಂಡಿದ್ದಾರೆ. ಆದರೆ, ಕೇಂದ್ರ ಸರ್ಕಾರ ನೆಪ ಮಾತ್ರಕ್ಕೆ ಸಂಧಾನ ಸಭೆ ನಡೆಸುತ್ತಿದೆ ಹೊರತು ಅವರ ಬೇಡಿಕೆಗಳಿಗೆ ಮನ್ನಣೆ ಕೊಡುತ್ತಿಲ್ಲ. ಪ್ರತಿಭಟನಾನಿರತ ರೈತರನ್ನು ಖಾಲಿಸ್ತಾನ, ಟೆರರಿಸ್ಟ್ ಎಂದು ಕರೆದು ಅವಮಾನಿಸುವ ದುಸ್ಸಾಹ ಬೇಡ. ರೈತರಿಗೆ ನ್ಯಾಯ ಸಿಗುವವರೆಗೆ ಕಾಂಗ್ರೆಸ್ ಬೆನ್ನಿಗೆ ನಿಲ್ಲಲಿದೆ ಎಂದರು.